ಇಂದೋರ್
ಹನಿಮೂನ್ ಗೆಂದು ಹೋಗಿ ಹೆಣವಾಗಿ ಬಂದ ರಾಜಾ ರಘುವಂಶಿ ಕೊಲೆಯ ಸುತ್ತ ಮುತ್ತ ಹಲವು ಸಂಗತಿಗಳು ಬಹಿರಂಗಗೊಳ್ಳುತ್ತಿವೆ. ಸೋನಮ್ಗೆ ರಾಜಾರನ್ನು ಮದುವೆಯಾಗಲು ಇಷ್ಟ ಇರಲಿಲ್ಲ. ಆಕೆ ರಾಜ್ ಕುಶ್ವಾಹ ಎಂಬಾತನನ್ನು ಪ್ರೀತಿಸುತ್ತಿದ್ದಳು. ರಾಜಾ ಜತೆ ಮದುವೆಗೂ ಸ್ವಲ್ಪ ಸಮಯದ ಹಿಂದೆ 100 ಬಾರಿ ಸೋನಂ ರಾಜ್ಗೆ ಕರೆ ಮಾಡಿದ್ದಳು.
ನವವಿವಾಹಿತ ಉದ್ಯಮಿ ರಾಜಾ ರಘುವಂಶಿ ಅವರ ಕೊಲೆ ಪ್ರಕರಣವು ನಾಟಕೀಯ ತಿರುವು ಪಡೆದುಕೊಂಡಿದ್ದು, ಅವರ ಪತ್ನಿ ಸೋನಮ್ ರಘುವಂಶಿ ಮತ್ತು ಆಕೆಯ ಪ್ರಿಯಕರ ಎಂದು ಹೇಳಲಾಗುವ ರಾಜ್ ಕುಶ್ವಾಹ ಅವರು ರೂಪಿಸಿದ ಪೂರ್ವಯೋಜಿತ ಸಂಚನ್ನು ಪೊಲೀಸರು ಬಯಲು ಮಾಡಿದ್ದಾರೆ. ಮದುವೆಯ ನಂತರವೂ ಕಾಲ್, ಮೆಸೇಜ್ಗಳೆಲ್ಲವೂ ಮುಂದುವರೆದಿದ್ದವು. ಮೇಘಾಲಯಕ್ಕೆ ಗಂಡನನ್ನು ಕೊಲೆ ಮಾಡಲೆಂದೇ ಆಕೆ ಕರೆದುಕೊಂಡು ಹೋಗಿದ್ದಳು.
ಶಿಲ್ಲಾಂಗ್ನಲ್ಲಿ ಭೀಕರ ಕೊಲೆ ಮೇ 23ರಂದು ಮೇಘಾಲಯದ ಸೊಹ್ರಾದಲ್ಲಿ ಇಂದೋರ್ನ ಉದ್ಯಮಿ ರಾಜಾ ರಘುವಂಶಿಯನ್ನು ಕೊಲೆ ಮಾಡಲಾಗಿತ್ತು.ರಾಜ್, ವಿಶಾಲ್, ಆಕಾಶ್ ಮತ್ತು ಆನಂದ್ ರಾಜಾ ಮೇಲೆ ದಾಳಿ ನಡೆಸಿದ್ದರು. ಸೋನಂ ಕೂಡ ಅಪರಾಧ ಸ್ಥಳದಲ್ಲಿದ್ದಳು. ಆಕೆಯ ಎದುರೇ ರಾಜಾನನ್ನು ಕೊಲ್ಲಲಾಯಿತು. ಈ ಗುಂಪು ಗುವಾಹಟಿ, ನೊಂಗ್ರಿಯಾಟ್ ಮತ್ತು ವೈಸಾವ್ಡಾಂಗ್ ಜಲಪಾತಗಳು ಸೇರಿದಂತೆ ಮೂರು ಬಾರಿ ರಾಜಾರನ್ನು ಕೊಲೆ ಮಾಡಲು ಯತ್ನಿಸಿತ್ತು.
ಸೋನಂ ಮೇಘಾಲಯದಿಂದ ಪರಾರಿ ಕೊಲೆಯ ಬಳಿಕ ಸೋನಮ್ ಮೇಘಾಲಯದಿಂದ ಪಲಾಯನ ಮಾಡಿ ಅಸ್ಸಾಂ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಗೆ ಪ್ರಯಾಣಿಸಿ ಜೂನ್ 8ರಂದು ಘಾಜಿಪುರದಲ್ಲಿ ಸಿಕ್ಕಿಬಿದ್ದಿದ್ದಳು. ಹೋಂಸ್ಟೇನಲ್ಲಿ ತನ್ನ ಉಂಗುರ ಹಾಗೂ ಮಂಗಳಸೂತ್ರ ತೆಗೆದಿಟ್ಟು ಅನುಮಾನಾಸ್ಪದವಾಗಿ ಹೊರಟುಹೋಗಿದ್ದಳು. ರಾಜಾ ನಾಪತ್ತೆಯಾಗಿ ಸುಮಾರು 10 ದಿನಗಳ ಬಳಿಕ ಜೂನ್ 2ರಂದು ಜಲಪಾತದ ಬಳಿಕ ಆಳವಾದ ಕಂದಕದಿಂದ ಮೃತದೇಹವನ್ನು ಹೊರತೆಗೆಯಲಾಯಿತು.
ಇಂದೋರ್ನಲ್ಲೂ ಪೊಲೀಸ್ ತನಿಖೆ ಮೇಘಾಲಯ ಪೊಲೀಸರ ವಿಶೇಷ ತಂಡ ಆಳವಾಗಿ ತನಿಖೆ ನಡೆಸುತ್ತಿದೆ. ತನಿಖೆ ಇಂದೋರ್ ತಲುಪಿದೆ. ಮದುವೆಯ ನಂತರ ಸೋನಂ ಅವರ ವರ್ತನೆಯ ಬಗ್ಗೆ ಮಾಹಿತಿ ಸಂಗ್ರಹಿಸಲು ಮೇಘಾಲಯ ಪೊಲೀಸರು ಸಹಕಾರ್ ನಗರದಲ್ಲಿರುವ ಅವರ ನಿವಾಸಕ್ಕೂ ಭೇಟಿ ನೀಡಿದ್ದಾರೆ ಎಂದು ರಾಜಾ ಅವರ ಸಹೋದರ ವಿಪಿನ್ ರಘುವಂಶಿ ದೃಢಪಡಿಸಿದ್ದಾರೆ.
ರಾಜಾ ಮತ್ತು ಸೋನಮ್ ಮೇ 11 ರಂದು ಇಂದೋರ್ನಲ್ಲಿ ವಿವಾಹವಾದರು ಮತ್ತು ಮೇ 20 ರಂದು ಹನಿಮೂನ್ಗೆ ಹೋಗಿದ್ದರು. ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಾದ್ಯಂತ ಸೋನಮ್, ಕುಶ್ವಾಹ ಮತ್ತು ಇತರ ಮೂವರನ್ನು ಬಂಧಿಸಲಾಗಿದೆ.
