ರಾಯಚೂರು:
ಮಂತ್ರಾಲಯ ಶ್ರೀ ಗುರುರಾಯರ 354ನೇ ಆರಾಧನೆಯ ಪ್ರಯುಕ್ತ ಇಂದು, ರಾಯರ ಮಠಕ್ಕೆ ಟಿಟಿಡಿ ಎಇಒ ರಾಮಕೃಷ್ಣ ಅವರು ತಿರುಮಲ ತಿರುಪತಿ ದೇವಸ್ಥಾನದ ಪವಿತ್ರ ಶ್ರೀವಾರಿ ಶೇಷವಸ್ತ್ರವನ್ನು ಸಮರ್ಪಿಸಿದರು. ಟಿಟಿಡಿ ತಂಡವನ್ನು ಶ್ರೀ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು, ಮಠದ ಅಧಿಕಾರಿಗಳು ಮತ್ತು ಪಂಡಿತರು ಮಹಾದ್ವಾರದಲ್ಲಿ ಸಾಂಪ್ರದಾಯಿಕವಾಗಿ ಸ್ವಾಗತಿಸಿದರು.
ಶ್ರೀ ಮಂಚಲಮ್ಮನಿಗೆ ಸೀರೆ ಅರ್ಪಿಸಿದ ನಂತರ, ರಾಮಕೃಷ್ಣ ಅವರು ಗೌರವಯುತವಾಗಿ ಶ್ರೀವಾರಿ ಶೇಷ ವಸ್ತ್ರ ಹಾಗೂ ಪ್ರಸಾದವನ್ನು ಸ್ವಾಮೀಜಿಗೆ ಹಸ್ತಾಂತರಿಸಿದರು. ನಂತರ ಸ್ವಾಮೀಜಿಯವರು ಭಕ್ತಿಯಿಂದ ಶ್ರೀ ರಾಯರ ಮೂಲ ಬೃಂದಾವನಕ್ಕೆ ವಸ್ತ್ರವನ್ನು ಅರ್ಪಿಸಿದರು. ಇದೇ ವೇಳೆ ಸ್ವಾಮೀಜಿಗಳು, ಟಿಟಿಡಿ ಎಇಒ ರಾಮಕೃಷ್ಣ ಮತ್ತು ಅವರ ಕುಟುಂಬವನ್ನು ಶೇಷವಸ್ತ್ರ, ಸ್ಮರಣಿಕೆ ಮತ್ತು ಫಲಮಂತ್ರಾಕ್ಷತೆಯೊಂದಿಗೆ ಆಶೀರ್ವದಿಸಿದರು.
