ಬೆಂಗಳೂರು
ರಾಜಕೀಯ ಮುತ್ಸದ್ಧಿ ಅಟಲ್ ಬಿಹಾರಿ ವಾಜಪೇಯಿ, ಬಿಜೆಪಿಯ ಭೀಷ್ಮ ಪಿತಾಮಹಾ ಎಲ್.ಕೆ. ಅಡ್ವಾಣಿ ಹಾಗೂ ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿಶ್ವಾಸ ಗಳಿಸಿದ್ದ ಹಿರಿಯ ನಾಯಕ ಅನಂತ್ ಕುಮಾರ್, ಭಾರತದ ರಾಜಕಾರಣದ ಪಡಸಾಲೆಯಲ್ಲಿ ತಮ್ಮದೇ ಆದ ಹೆಗ್ಗುರುತುಗಳನ್ನು ಮೂಡಿಸಿದ್ದಾರೆ.
ವಾಜಪೇಯಿ ಮತ್ತು ಅಡ್ವಾಣಿ ಇಬ್ಬರ ಜತೆಯಲ್ಲೂ ಸಮತೋಲನದಿಂದ ಕಾರ್ಯನಿರ್ವಹಿಸಿದ್ದ ಅನಂತ್ ಕುಮಾರ್, ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಹೆಚ್ಚು ಕಾಲ ಇರುತ್ತಾರೋ ಇಲ್ಲವೋ ಎನ್ನುವ ಅನುಮಾನ ಆರಂಭಿಕ ಹಂತದಲ್ಲಿ ಕಾಡಿತ್ತು. ಮೋದಿ – ಅನಂತ್ ಕುಮಾರ್ ಬಾಂಧವ್ಯ ಅಷ್ಟಕ್ಕಷ್ಟೇ ಎನ್ನುವ ಚರ್ಚೆ ರಾಜಕೀಯ ಒಳವಲಯದಲ್ಲಿ ನಡೆದಿತ್ತು.
ಆದರೆ ಎಲ್ಲಾ ಅನುಮಾನಗಳನ್ನು ಅನಂತ ಕುಮಾರ್ ಸುಳ್ಳಾಗಿಸಿದರು. ಆರಂಭಿಕ ಹಂತದಲ್ಲಿ ಅನಂತ್ ಕುಮಾರ್ ಅವರಿಗೆ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ನೀಡಲಾಗಿತ್ತು. ಆದರೆ ಭಾರೀ ನಿರೀಕ್ಷೆ ಮೂಡಿಸಿದ್ದ ಡಿ.ವಿ. ಸದಾನಂದಗೌಡರಿಗೆ ಮೊದಲ ಹಂತದಲ್ಲೇ ರೈಲ್ವೆಯಂತಹ ಮಹತ್ವದ ಖಾತೆ ದೊರೆತಿತ್ತು.
ವಿಚಿತ್ರವೆಂದರೆ ನಂತರದ ದಿನಗಳಲ್ಲಿ ಸದಾನಂದಗೌಡರು ರೈಲ್ವೆ ಖಾತೆ ವಂಚಿತರಾಗಿ ಕಾನೂನು ಇಲಾಖೆಗೆ ವರ್ಗಾವಣೆಗೊಂಡರು. ತರುವಾಯ ಕಾನೂನು ಖಾತೆಯೂ ಅವರ ಕೈ ಬಿಟ್ಟು ಹೋಯಿತು. ಯೋಜನೆ ಮತ್ತು ಸಾಂಖಿಕ ಸಚಿವ ಖಾತೆಗೆ ತೃಪ್ತಿಪಟ್ಟುಕೊಳ್ಳುವಂತಾಯಿತು.
ಆದರೆ ಅನಂತ್ ಕುಮಾರ್ ಹಾಗಲ್ಲ. ಮೊದಲಿಗೆ ರಾಸಯನಿಕ ಮತ್ತು ರಸಗೊಬರ ಖಾತೆ ಪಡೆದುಕೊಂಡ ನಂತರ ಸಂಸದೀಯ ವ್ಯವಹಾರಗಳ ಇಲಾಖೆಯ ಜವಾಬ್ದಾರಿಯನ್ನೂ ಸಹ ಪಡೆದಕೊಳ್ಳುವಲ್ಲಿ ಸಫಲವಾದರು. 15ಕ್ಕೂ ಹೆಚ್ಚು ಇಲಾಖೆಗಳ ಬಗ್ಗೆ ಸಂಸತ್ತಿನಲ್ಲಿ ಉತ್ತರ ನೀಡುವ, ಲೋಪದೋಷಗಳನ್ನು ಸಮರ್ಥಿಸಿಕೊಳ್ಳುವ ಮೂಲಕ ತಮ್ಮ ಸಾಮಥ್ರ್ಯವನ್ನು ಅವರು ನಿರೂಪಿಸಿದರು. ಮೋದಿ ಅವರ ಆಪ್ತ ಬಳಗದಲ್ಲಿ ಪ್ರಧಾನವಾಗಿ ಗುರುತಿಸಿಕೊಂಡರು. ಅಡ್ವಾಣಿ ಅವರ ಆಪ್ತರಾಗಿದ್ದ ಅನಂತ್ ಕುಮಾರ್, ನಂತರದ ದಿನಗಳಲ್ಲಿ ಮೋದಿ ಅವರ ಆಪ್ತರೂ ಸಹ ಆಗಿ ಬದಲಾದರು. ಇದು ಅನಂತ್ ಕುಮಾರ್ ಅವರ ರಾಜಕೀಯ ಜಾಣ್ಮೆಗೆ ಸಾಕ್ಷಿಯಾಗಿದೆ.
ವಿದ್ಯಾರ್ಥಿ ನಾಯಕನಿಂದ ಹಿಡಿದು ಕೇಂದ್ರ ಸಚಿವ ಸ್ಥಾನದವರೆಗೂ ಸಾಗಿದ ಹಾದಿ ಅಮೋಘವಾಗಿತ್ತು. ಎಬಿವಿಪಿ ನಾಯಕರಾಗಿದ್ದ ಅನಂತ್ ಕುಮಾರ್ 1987ರಲ್ಲಿ ಬಿಜೆಪಿ ಸೇರಿದರು. ತಮ್ಮ ಬದ್ಧತೆ ಮತ್ತು ಕಾರ್ಯದಕ್ಷತೆಯಿಂದಾಗಿ ಶೀಘ್ರದಲ್ಲೇ ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷರಾದರು. 1995ರಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದರು. ಆನಂತರ 1996ರ ಲೋಕಸಭಾ ಚುನಾವಣೆಗೆ ಪಕ್ಷದಿಂದ ಟಿಕೆಟ್ ಪಡೆದು, ಬೆಂಗಳೂರು ಉತ್ತರ ಕ್ಷೇತ್ರದಿಂದ ಚುನಾವಣಾ ಅಖಾಡಕ್ಕಿಳಿದು ಗೆಲುವು ದಾಖಲಿಸಿದರು. ಇದಕ್ಕೂ ಮುನ್ನ ಯಾವುದೇ ಚುನಾವಣೆ ಎದುರಿಸದ ಅನಂತ್ ಕುಮಾರ್ ಒಂದೇ ಬಾರಿಗೆ ಲೋಕಸಭೆ ಪ್ರವೇಶಿಸಿದ್ದು ಸಹ ದೊಡ್ಡ ಸಾಧನೆಯಾಗಿತ್ತು.
ತಮ್ಮ ಕಾರ್ಯಕ್ಷಮತೆಯಿಂದಾಗಿಯೇ ಅನಂತ್ ಕುಮಾರ್ ನಂತರ 1998, 1999, 2004, 2009 ಮತ್ತು 2014ರಲ್ಲಿ ಸತತವಾಗಿ ಆರು ಬಾರಿ ಸಂಸದರಾಗಿ ಆಯ್ಕೆಯಾದರು. 2014ರ ಲೋಕಸಭಾ ಚುನಾವಣೆಯಲ್ಲಿ ನಂತರ ನಂದನ್ ನಿಲೇಕಣಿ ಅವರು ಅನಂತ್ ಕುಮಾರ್ಗೆ ಪ್ರಬಲ ಅಭ್ಯರ್ಥಿಯಾಗಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದರು. ನಿಲೇಕಣಿ, ಅನಂತ್ಕುಮಾರ್ಗೆ ಪ್ರಬಲ ಪೈಪೋಟಿ ನೀಡಲಿದ್ದಾರೆ ಎಂದೇ ಎಣಿಸಲಾಗಿತ್ತು. ಆದರೆ, ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಅನಂತ್ ಕುಮಾರ್ ಗೆಲುವು ಸಾಧಿಸಿದ್ದು ವಿಶೇಷವಾಗಿತ್ತು.
ಹಿಂದಿ, ಇಂಗ್ಲಿಷ್ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಿದ್ದ ಅನಂತ್ ಕುಮಾರ್ ಹಿಂದಿ ಭಾಷಿಕ ರಾಜಕಾರಣಿಗಳ ಮನ ಗೆಲ್ಲುವಲ್ಲಿ ಸಫಲರಾದರು. ರಾಜ್ಯ ರಾಜಕಾರಣಕ್ಕಿಂತಲೂ ಕೇಂದ್ರ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾದರು. ತಮ್ಮ ಕಾರ್ಯದಕ್ಷತೆ, ಸಂಘಟನಾ ಚಾತುರ್ಯದಿಂದ ಪ್ರತಿಯೊಂದು ಹಂತದಲ್ಲೂ ಯಶಸ್ಸು ಪಡೆದರು. ಉತ್ತರ ಭಾರತದ ಹಲವು ರಾಜ್ಯಗಳ ಉಸ್ತುವಾರಿಯಾಗಿಯೂ ಅನಂತ್ ಕುಮಾರ್ ಕೆಲಸ ಮಾಡಿದ್ದು ದಾಖಲಾರ್ಹ ಸಂಗತಿಯಾಗಿದೆ.
ಪಕ್ಷಕ್ಕೆ ನಿಷ್ಠರಾಗಿದ್ದ ಅನಂತ್ ಕುಮಾರ್, ವಾಜಪೇಯಿ ಸರ್ಕಾರದಲ್ಲಿ ನಾಗರಿಕ ವಿಮಾನಯಾನ ಸಚಿವರಾಗಿದ್ದರು. ಎನ್ಡಿಎ ಮೈತ್ರಿಕೂಟದ ಸರ್ಕಾರದಲ್ಲಿ ಹಲವು ಸ್ಥಾನಮಾನಗಳನ್ನು ನಿರ್ವಹಿಸಿದ್ದರು. ಪ್ರವಾಸೋದ್ಯಮ, ಕ್ರೀಡೆ ಮತ್ತು ಯುವ ಸಬಲೀಕರಣ, ಸಂಸ್ಕೃತಿ, ಗ್ರಾಮೀಣಾಭಿವೃದ್ಧಿ ಖಾತೆಗಳ ಸಚಿವರಾಗಿ ವಾಜಪೇಯಿ ಸರ್ಕಾರದಲ್ಲಿ ಕಾರ್ಯನಿರ್ವಹಿಸಿದ್ದರು.
ರಾಜ್ಯ ರಾಜಕಾರಣದಲ್ಲೂ ಪ್ರಮುಖ ಪಾತ್ರ ನಿರ್ವಹಿಸಿದ್ದ ಅನಂತ್ ಕುಮಾರ್, 2014ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ತಮ್ಮ ಪಕ್ಷಕ್ಕೆ 79 ಸ್ಥಾನಗಳನ್ನು ತಂದುಕೊಡುವಲ್ಲಿ ಸಫಲರಾಗಿದ್ದರು. ಆಗ ಮುಖ್ಯಮಂತ್ರಿಯಾಗುವ ಮಹತ್ವಾಕಾಂಕ್ಷೆ ಹೊಂದಿದ್ದರು. ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ನಡುವೆ ರಾಜಕೀಯ ಸಂಘರ್ಷ ತೀವ್ರಗೊಂಡಿದ್ದು ಇದೇ ಸಂದರ್ಭದಲ್ಲಿ. ವರಿಷ್ಠರ ಮಧ್ಯ ಪ್ರವೇಶದಿಂದಾಗಿ ಅನಂತ್ ಕುಮಾರ್ ದಿಲ್ಲಿ ರಾಜಕಾರಣಕ್ಕೆ ಸೀಮಿತಗೊಂಡರು. ಯಡಿಯೂರಪ್ಪ ರಾಜ್ಯ ರಾಜಕೀಯದಲ್ಲಿ ಸಕ್ರಿಯರಾದರು.
ಆದರೆ ಯಡಿಯೂರಪ್ಪ ಅವರ ನಂತರ ಅನಂತ್ ಕುಮಾರ್ ಅವರಿಗಿಂತ ಕಿರಿಯರಾದ ಡಿ.ವಿ. ಸದಾನಂದಗೌಡ, ಜಗದೀಶ್ ಶೆಟ್ಟರ್ ಅವರೂ ಸಹ ಮುಖ್ಯಮಂತ್ರಿಯಾದರು. ಸಿ.ಎಂ. ಆಗುವ ಅದೃಷ್ಟ ಅನಂತ್ ಕುಮಾರ್ ಅವರಿಗೆ ದೊರೆಯಲಿಲ್ಲ.
ರಾಷ್ಟ್ರೀಯ ವಾದ, ತಮ್ಮ ನೆಲದ ಸಂಸ್ಕೃತಿಯನ್ನು ಪ್ರಬಲವಾಗಿ ನಂಬಿದ್ದ ಅನಂತ್ ಕುಮಾರ್, ವಿಶ್ವಸಂಸ್ಥೆಯಲ್ಲಿ ಮೊದಲ ಬಾರಿಗೆ ಕನ್ನಡದಲ್ಲಿ ಮಾತನಾಡುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಭಾಗಿಯಾಗುತ್ತಿದ್ದ ಅನಂತ್ ಕುಮಾರ್ ಅವರಿಗೆ ಪ್ರವಾಸ ಹೋಗುವುದು ಮತ್ತು ಮಕ್ಕಳೊಂದಿಗೆ ಆಟ ಆಡುವುದು ಅಂದರೆ ಹೆಚ್ಚು ಇಷ್ಟ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
