ಮಧುಗಿರಿ :
ಗುರುವಾರ ಬೆಳಗ್ಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಇಬ್ಬರು ಮಹಿಳೆಯರ ಮೇಲೆ ಮರಿ ಕರಡಿಯೊಂದು ದಾಳಿ ಮಾಡಿದ ಹಿನ್ನೆಲೆಯಲ್ಲಿ ಮಹಿಳೆಯರಿಬ್ಬರೂ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ ಹಾಗೂ ಬಂಡೇನಹಳ್ಳಿಯಲ್ಲೂ ಇದೇ ರೀತಿ ತಾಯಿ ಮತ್ತು ಮರಿಕರಡಿಗಳು ವೃದ್ದೆಯ ಮೇಲೆ ದಾಳಿ ಮಾಡಿದ್ದು, ಒಂದೇ ದಿನ ಮೂರು ಪ್ರಕರಣಗಳು ತಾಲ್ಲೂಕಿನಲ್ಲಿ ವರದಿಯಾಗಿವೆ.
ಕಸಬಾ ವ್ಯಾಪ್ತಿಯ ಸಿದ್ದಾಪುರ ಗ್ರಾಮದ ಲಕ್ಷ್ಮಮ್ಮ (65) ಮತ್ತು ಬಸವನಹಳ್ಳಿ ಗ್ರಾಮದ ಜ್ಯೋತಿ(26) ಗಂಭೀರವಾಗಿ ಗಾಯಗೊಂಡವರು. ಬೆಳಗ್ಗೆ 11 ಗಂಟೆ ಸಮಯದಲ್ಲಿ ಸಿದ್ದಾಪುರ ಗ್ರಾಮದ ಲಕ್ಷ್ಮಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಕರಡಿ ದಾಳಿ ಮಾಡಿದೆ.
ಮತ್ತೆ ಒಂದು ಗಂಟೆ ಅವಧಿಯಲ್ಲಿ ಅದೇ ಕರಡಿ ಕಸಬಾ ವ್ಯಾಪ್ತಿಯ ಬಸವಹಳ್ಳಿಯ ಕೆ.ಎಸ್.ಆರ್.ಟಿ.ಸಿ ಡಿಪೋ ಹಿಂಭಾಗದಲ್ಲಿರುವ ಹೊಲದಲ್ಲಿ ಜ್ಯೋತಿ ಎಂಬುವವರು ತೊಗರಿಕಾಯಿ ಕೀಳುವಾಗ ಅವರ ಮೇಲೂ ದಾಳಿ ಮಾಡಿ ಗಾಯಗೊಳಿಸಿದೆ.
ಮತ್ತೊಂದು ಪ್ರಕರಣದಲ್ಲಿ ಗುರುವಾರ ಮಿಡಿಗೇಶಿ ಗ್ರಾಮದ ಪಾರ್ವತಮ್ಮ (65) ಎಂಬುವವರ ಮೇಲೂ ತಾಯಿ ಮತ್ತು ಮರಿ ಕರಡಿಗಳು ದಾಳಿ ಮಾಡಿ ಗಾಯಗೊಳಿಸಿವೆ. ಮೂವರೂ ಗಾಯಾಳುಗಳನ್ನು ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ವಲಯ ಅರಣ್ಯಾಧಿಕಾರಿ ವಾಸುದೇವ್ ಭೇಟಿ ನೀಡಿದ್ದು, ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
ಕರಡಿ ದಾಳಿಯಿಂದ ಗ್ರಾಮಸ್ಥರು ಭಯಭೀತರಾಗಿದ್ದು, ಕರಡಿಗಳನ್ನು ಹಿಡಿದು ಆತಂಕ ನಿವಾರಿಸಲು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಈಗ ಕರಡಿಗಳ ಸಂತಾನೋತ್ಪತ್ತಿ ಸಂದರ್ಭವಾಗಿದ್ದು, ಕರಡಿಗಳು ಗುಹೆಯಿಂದ ಹೊರಬರುತ್ತವೆ. ಮಧುಗಿರಿ ಪಕ್ಕ ಹಾದು ಹೋಗುವ ಬೈಪಾಸ್ ರಸ್ತೆಗಳಲ್ಲಿ ಪಟ್ಟಣದಿಂದ ಬಹಳಷ್ಟು ನಾಗರಿಕರು ವಾಯುವಿಹಾರಕ್ಕೆ ಆಗಮಿಸಲಿದ್ದು, ಈ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕು ಎಂದು ವಲಯ ಅರಣ್ಯಾಧಿಕಾರಿ ವಾಸುದೇವಮೂರ್ತಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
