ಬೆಂಗಳೂರು:
ಬಹುನಿರೀಕ್ಷಿತ ಮಂತ್ರಿಮಂಡಲ ರಚನೆಗೆ ಮಂಗಳವಾರ ಮುಹೂರ್ತ ನಿಗದಿಯಾಗಿರುವ ಹಿನ್ನೆಲೆಯಲ್ಲಿಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿವಾಸದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ.
ಮೊದಲ ಹಂತದ ಸಚಿವ ಸಂಪುಟ ರಚನೆಯಲ್ಲಿ 13 ಶಾಸಕರಿಗೆ ಮಂತ್ರಿಭಾಗ್ಯ ಪ್ರಾಪ್ತಿಯಾಗಲಿದ್ದು, ಮಧ್ಯಾಹ್ನದೊಳಗೆ ಮೊದಲಪಟ್ಟಿ ಸಿದ್ಧಗೊಳ್ಳಲಿದೆ.
ಪಕ್ಷದ ವರಿಷ್ಠರ ಸೂಚನೆ ಮೇರೆಗೆ ಮೊದಲ ಹಂತದ ಪಟ್ಟಿಯನ್ನು ಯಡಿಯೂರಪ್ಪ ಈಗಾಗಲೇ ಸಿದ್ಧಪಡಿಸಿ ಅಮಿತ್ ಷಾ ಗೆ ನೀಡಿದ್ದಾರಾದರೂ ಹೆಸರುಗಳನ್ನು ದೆಹಲಿ ನಾಯಕರು ಅಂತಿಮಗೊಳಿಸಿಲ್ಲ. ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಸೇರಿಸಲು ಬಿಜೆಪಿ ಶಾಸಕರು ಡಾಲರ್ಸ್ ಕಾಲೋನಿಯ ಯಡಿಯೂರಪ್ಪ ನಿವಾಸದ ಬಳಿ ಎಡತಾಕುತ್ತಿದ್ದಾರೆ.
ಸಂಪುಟಕ್ಕೆ ಸೇರಲಿರುವವರ ಪಟ್ಟಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಳಿಸಿಕೊಡಲಿದ್ದು, 13 -15 ಮಂದಿಗಷ್ಟೇ ಅವಕಾಶ ಸಿಗಲಿದೆ. ಇದರಿಂದ ಅನೇಕರಿಗೆ ಅವಕಾಶ ತಪ್ಪಲಿದ್ದು, ಇದರಿಂದ ಆತಂಕಕ್ಕೆ ಒಳಗಾದ ಸಚಿವ ಸ್ಥಾನಾಕಾಂಕ್ಷಿಗಳು ಯಡಿಯೂರಪ್ಪ ನಿವಾಸಕ್ಕೆ ಆಗಮಿಸಿ ಚರ್ಚೆ ನಡೆಸಿದ್ದಾರೆ.
ಇಂದು ಸಂಜೆ ಬಿಡುಗಡೆಯಾಗಲಿರುವ ಸಚಿವರ ಪಟ್ಟಿ ಸಾಕಷ್ಟು ಗೌಪ್ಯತೆ ಜೊತೆಗೆ ಕುತೂಹಲವನ್ನು ಕೆರಳಿಸಿದ್ದು, ಯಡಿಯೂರಪ್ಪ ಸಚಿವಾಕಾಂಕ್ಷಿಗಳ ಜೊತೆ ಮಹತ್ತರ ಸಭೆ ನಡೆಸುತ್ತಿದ್ದಾರೆ.
ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಉಮೇಶ್ ಕತ್ತಿ, ಸುನೀಲ್ ಕುಮಾರ್, ಪ್ರಭು ಚೌಹಾಣ್, ಅಶ್ವತ್ಥ ನಾರಾಯಣ ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಿದ್ದಾರೆ.
ಆಗಸ್ಟ್ 16 ರಂದು ಅಮಿತ್ ಷಾ ಸಂಪುಟ ರಚನೆಗೆ ಗ್ರೀನ್ ಸಿಗ್ನಲ್ ನೀಡಿದ್ದು, ಮೊದಲ ಹಂತದಲ್ಲಿ ಹದಿನೈದು ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಬಿಎಸ್ವೈ ಮನವಿ ಮಾಡಿದ್ದು 13 ಶಾಸಕರ ಸೇರ್ಪಡೆಗೆ ವರಿಷ್ಠರು ಒಲವು ತೋರಿದ್ದಾರೆ. ಕೆಲವು ಶಾಸಕರು ಮಂತ್ರಿಮಂಡಲ ಸೇರುತ್ತಿದ್ದರೆ ಇನ್ನೂ ಕೆಲವರಿಗೆ ನಿಗಮ ಮಂಡಳಿ ಭಾಗ್ಯ ದೊರೆಯಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
