ಹರಿಹರ :
ಭದ್ರಾ ಡ್ಯಾಮಿನಿಂದ 25ಸಾವಿರ ಕ್ಯುಸಿಯಕ್ಸ್ ನೀರನ್ನು ಶನಿವಾರ ಸಂಜೆ ಹೊರಗೆ ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದು, ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಶಾಸಕ ಎಸ್.ರಾಮಪ್ಪ ಹೇಳಿದರು.
ತಾಲೂಕಿನ ಸಾರಥಿ ಗ್ರಾಮದಲ್ಲಿನ ಸೇತುವೆ ಮತ್ತು ಉಕ್ಕಡಗಾತ್ರಿ ಗ್ರಾಮದಲ್ಲಿನ ಸೇತುವೆಗಳು ತುಂಗಭದ್ರಾ ನದಿಯ ನೀರಿನಿಂದ ಮುಳುಗಡೆಯಾದ ಸ್ಥಳಕ್ಕೆ ಶನಿವಾರ ಭೇಟಿ ನೀಡಿ, ನಂತರ ಮಾತನಾಡಿದ ಅವರು, ತಾಲೂಕಿನ ಅನೇಕ ಭಾಗಗಳಲ್ಲಿನ ನದಿ ಪಾತ್ರದ ಜನರಿಗೆ ನೆರೆಹಾನಿಯುಂಟಾಗಿದೆ. ಇದರ ಹಿನ್ನೆಲೆಯಲ್ಲಿಯೇ ಭದ್ರಾ ಡ್ಯಾಮಿನಿಂದ 25 ಸಾವಿರ ಕ್ಯುಸಿಯಕ್ಸ್ ನೀರನ್ನು ಹೊರಗೆ ಬಿಡಲಾಗುತ್ತಿದ್ದು ನದಿಪಾತ್ರದ ಸ್ಥಳೀಯರು ಎಚ್ಚರಿಕೆಯಿಂದಿರಿ ಎಂದು ತಿಳಿಸಿದರು.
ಗಂಗಾನಗರದ ನಿರಾಶ್ರಿತರಿಗೆ ಈಗಾಗಲೆ ಎಪಿಎಂಸಿ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಗಂಜೀ ಕೇಂದ್ರವನ್ನು ಪ್ರಾರಂಭಿಸಲಾಗಿದ್ದು ಇಪ್ಪತ್ತು ಕುಟುಂಬಗಳು ಆಶ್ರಯ ಪಡೆಯುತ್ತಿವೆ. ಸಾರಥಿಯಿಂದ ಚಿಕ್ಕಬಿದರಿ ಗ್ರಾಮಕ್ಕೆ ತೆರಳಲು ಪರ್ಯಾಯ ರಸ್ತೆ ಇದ್ದು, ಗ್ರಾಮಸ್ಥರಿಗೆ ಯಾವುದೇ ತೊಂದರೆ ಇಲ್ಲ. ತಾಲೂಕಿನಲ್ಲಿನ ರೈತರ ಬೆಳೆಗಳು ನದಿಯ ನೀರಿನಿಂದ ಹಾನಿಗೆ ಒಳಗಾಗಿದ್ದು, ಜಿಲ್ಲಾಧಿಕಾರಿಗಳು ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಮನವಿ ಮಾಡಿದರು.
ತಾಲೂಕಿನಲ್ಲಿ ರೈತರು ಬೆಳೆದ ಭತ್ತ, ರಾಗಿ, ಅಡಕೆ, ಮೆಕ್ಕೇಜೋಳ, ಕಬ್ಬು, ತೆಂಗು ಹಾಗೂ ಇತರ ಬೆಳೆಗಳು ಅಧಿಕ ಮಳೆ ಹಾಗೂ ನೆರೆ ಹಾವಳಿಯಿಂದ ಜಲಾವೃತಗೊಂಡಿವೆ. ಜಿಲ್ಲಾಡಳಿತದಿಂದ ನೀಡಿರುವ 30 ಲಕ್ಷದ 30 ಸವೀರ ಅನುದಾನ ಸಾಕಾಗುವುದಿಲ್ಲ. ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಿಂದ ಪರಿಶೀಲನೆ ನಡೆಸಿ ನಂತರ ರೈತಿಗೆ ಹಾಗೂ ನೆರೆ ಸಂತ್ರಸ್ಥರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಹೇಳಿದರು.
ಸಾರಥಿ ರಸ್ತೆಯಲ್ಲಿ ನೀರು ಕಡಿಮೆಯಾಗುವವರೆಗೂ ಜನರು ಆ ಪ್ರದೇಶದಲ್ಲಿ ಒಡಾಡದಂತೆ ಸೂಚನೆ ನೀಡಲಾಗಿದೆ. ಸಾರಥಿ ಗ್ರಾಮದ ಸೇತುವೆಗೆ ಕೂಡಲೇ ಗೊತ್ತಿಗೆದಾರನಿಗೆ ನೋಟೀಸ್ ಕಳಿಸಿ, ಅವನ ಗುತ್ತಿದಾರತ್ವವನ್ನು ಬ್ಲಾಕ್ ಲೀಸ್ಟಿಗೆ ಸೇರಿಸಿ, ಶೀಘ್ರವಾಗಿ ಕಾಮಗಾರಿ ಪ್ರಾರಂಭಿಸುವಂತೆ ಸರ್ಕಾರದ ಗಮನಕ್ಕೆ ತರುತ್ತೇನೆ. ಗಂಗಾನಗರದ ನೆರೆ ಪೀಡಿತರಿಗೆ ಶಾಶ್ವತ ಸುರಕ್ಷಿತ ಪ್ರದೇಶ ನೀಡಲು ಸರ್ಕಾರದ ಗಮನಕ್ಕೆ ತರುತ್ತೇನೆ. ನದಿಯಲ್ಲಿನ ನೀರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸ್ಥಳೀಯರು ಎಚ್ಚರಿಕೆಯಿಂದ ಇರುವಂತೆ ಮಾರ್ಗದರ್ಶನ ನೀಡಿದರು.
ಈ ವೇಳೆ ತಹಸೀಲ್ದಾರ್ ರೆಹಾನ್ ಪಾಷಾ, ನಗರಸಭಾ ಸದಸ್ಯ ಎಸ್.ಎಂ ವಸಂತ್, ಮುಖಂಡರಾದ ವಿಜಯ ಮಾಂತೇಶ್, ತಿಪ್ಪೇಶ್, ತಾಲೂಕು ಆಡಳಿತ ಸಿಬ್ಬಂದಿ, ಆರೋಗ್ಯ, ಕೃಷಿ, ತೋಟಗಾರಿಕೆ ಹಾಗೂ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ