ಬೆಂಗಳೂರು:
“ರೇವಣ್ಣ ಮಾತನಾಡುವಾಗ ಎಚ್ಚರಿಕೆ ಯಿಂದ ಮಾತನಾಡಬೇಕಿತ್ತು. ಅವರು ಮಾತನಾಡಿರುವುದರಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ,” ಸಚಿವ ಹೆಚ್.ಡಿ. ರೇವಣ್ಣ ಪರವಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕ್ಷಮೆ ಕೇಳಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರೇವಣ್ಣ ಬಳಿ ನಾನು ಈ ಬಗ್ಗೆ ಮಾತನಾಡಿ, ಯಾಕೆ ಈ ಹೇಳಿಕೆ ನೀಡಿದಿರಿ ಅಂತ ಕೇಳಿದ್ದೇನೆ. ರೇವಣ್ಣ ಅವರು ಸುಮಲತಾ ಅವರ ವಿರುದ್ಧ ಮಾತನಾಡಿಲ್ಲ. ಅವರನ್ನು ಟೀಕಿಸಿಲ್ಲ. ಸುಮಲತಾ ಅವರು ಅಂಬರೀಶ್ ಅವರು ಅಗಲಿರುವ ನೋವಿನಲ್ಲಿದ್ದಾರೆ. ಈ ನಡುವೆ ರಾಜಕೀಯ ಬೇಡವಾಗಿತ್ತು ಎನ್ನುವ ದೃಷ್ಟಿಯಲ್ಲಿ ಹೇಳಿದ್ದು ಅಷ್ಟೆ. ಆದರೆ ಅವರು ಈ ರೀತಿ ಹೇಳಿಕೆ ನೀಡಬಾರದಿತ್ತು. ರೇವಣ್ಣ ಅವರ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ನಾನು ಅವರ ಪರವಾಗಿ ಕ್ಷಮೆ ಕೇಳುತ್ತೇನೆ. ನಮ್ಮದು ಮಹಿಳೆಯರಿಗೆ ಗೌರವ ಕೊಡುವ ಕುಟುಂಬ. ಯಾವ ಹೆಣ್ಣು ಮಕ್ಕಳಿಗೂ ನಾವು ಅವಮಾನ ಮಾಡಿಲ್ಲ ಎಂದು ಕ್ಷಮೆಯಾಚಿಸಿದ್ದಾರೆ.
ಅಂಬರೀಷ್ ಸತ್ತು ಆರು ತಿಂಗಳಾಗಿಲ್ಲ, ಸುಮಲತಾಗೆ ಚುನಾವಣೆ ಬೇಕಾ..? : ರೇವಣ್ಣ ಟೀಕೆ
ಗುರುವಾರ ಮಳವಳ್ಳಿ ಸಭೆಯಲ್ಲಿ ಸುಮಲತಾ ಕಣ್ಣೀರು ಹಾಕಿರುವ ಕುರಿತು ಪ್ರತಿಕ್ರಿಯೆ ನೀಡಿದ್ದ ರೇವಣ್ಣ, “ಇಂಥ ಡ್ರಾಮಗಳನ್ನು ನಾನು ಬಹಳ ನೋಡಿದ್ದೇನೆ. ಸಿನಿಮಾದಲ್ಲಿ ಕಣ್ಣೀರು ಹಾಕುತ್ತಿದ್ದರು. ಈಗ ಅದೇ ಥರ ರಾಜಕಾರಣದಲ್ಲೂ ಡ್ರಾಮ ಮಾಡುತ್ತಿರಬಹುದು. ಗಂಡ ಸತ್ತು ಆರು ತಿಂಗಳಾಗಿಲ್ಲ ಅವರಿಗೆ ಚುನಾವಣೆ ಬೇಕಾ,” ಎಂದು ಪ್ರಶ್ನಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/03/HDK.gif)