ಬೆಂಗಳೂರು :
ಕೋವಿಡ್ 19 ಸೋಂಕು ತಡೆಗಟ್ಟಲು ಸಚಿವ ಸಂಪುಟ ಸಭೆಯಲ್ಲಿ ಕಠಿಣ ತೀರ್ಮಾನ ಕೈಗೊಳ್ಳಲಾಗಿದ್ದು ಕೋವಿಡ್ ಹರಡುವಿಕೆ ತಡೆಯಲು 14 ದಿನ ಇಡೀ ರಾಜ್ಯದಲ್ಲಿ ಕೋವಿಡ್ ಕರ್ಫ್ಯೂ ಜಾರಿಯಲ್ಲಿರಲಿದೆ. ಜೊತೆಗೆ ಲಸಿಕೆ ಅಭಿಯಾನ ಮುಂದುವರೆಯಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ.
ಇಂದು ಮುಖ್ಯಮಂತ್ರಿ ಶ್ರೀ ಬಿ .ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಕೋವಿಡ್ ಸಾಂಕ್ರಾಮಿಕ ಹೆಚ್ಚಾಗುತ್ತಿರುವುದನ್ನು ತಡೆಗಟ್ಟಲು ಹಿನ್ನೆಲೆಯಲ್ಲಿ ಮುಂದಿನ 14 ದಿನಗಳ ಕಾಲ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವ ಸಂಬಂಧ ಪತ್ರಿಕಾ ಗೋಷ್ಠಿ ನಡೆಸಿದರು.
ಬೆಳಗ್ಗೆ 6 ರಿಂದ 10 ಗಂಟೆ ತನಕ ಅಗತ್ಯ ವಸ್ತುಗಳನ್ನು ಖರೀದಿಸಬಹುದು, ನಂತರ ಕೋವಿಡ್ ಕರ್ಫ್ಯೂ ಜಾರಿಯಲ್ಲಿರಲಿದೆ. ಎರಡು ವಾರಗಳಲ್ಲಿ ನಿಯಂತ್ರಣಕ್ಕೆ ಬರಬೇಕು, ಬರದಿದ್ದರೆ ಕಠಿಣ ಕ್ರಮ ಮುಂದುವರಿಯಲಿದೆ, ಇದಕ್ಕೆ ಜನರು ಸಹಕರಿಸಬೇಕು ಎಂದು ಹೇಳಿದರು.
ಏಪ್ರಿಲ್ 27ರಿಂದ 14 ದಿನ ಬೆಂಗಳೂರು ಸೇರಿ ಇಡೀ ರಾಜ್ಯದಲ್ಲಿ ಲಾಕ್ಡೌನ್ ಆಗಲಿದೆ. ಗಾರ್ಮೆಂಟ್ಸ್ ಮತ್ತು ಉತ್ಪಾದಕ ಕ್ಷೇತ್ರಕ್ಕೆ ಲಾಕ್ ಡೌನ್ನಿಂದ ವಿನಾಯಿತಿ ನೀಡಿಲ್ಲ, ಉತ್ಪಾದನಾ ವಲಯ, ಕಟ್ಟಡ ನಿರ್ಮಾಣ ,ಕೃಷಿ ಚಟುವಟಿಕೆಗೆ ವಿನಾಯಿತಿ ನೀಡಲಾಗಿದೆ.
ಈ ಹಿಂದೆ ಕರ್ನಾಟಕ ಸರ್ಕಾರ ಕೋವಿಡ್ ಸೋಂಕು ಹರಡುವಿಕೆ ತಡೆಯಲು ಹೊಸ ಕಠಿಣ ಮಾರ್ಗಸೂಚಿಯನ್ನು ಏಪ್ರಿಲ್ 20ರಂದು ರಾತ್ರಿ ಪ್ರಕಟಿಸಿತ್ತು. ಏಪ್ರಿಲ್ 21ರಿಂದ ಮೇ 4 ರ ತನಕ ರಾತ್ರಿ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದೆ.
ಸದ್ಯ ನೈಟ್ ಕರ್ಫ್ಯೂ ರಾತ್ರಿ 9 ರಿಂದ 6 ತನಕ ಜಾರಿಯಲ್ಲಿರಲಿದೆ. ವೀಕೆಂಡ್ ಕರ್ಫ್ಯೂ ರಾತ್ರಿ 9 ರಿಂದ ಬೆಳಗ್ಗೆ 6 ರ ತನಕ ಇದೆ(ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆ) ಈಗ ಹೊಸ ಮಾರ್ಗಸೂಚಿಯನ್ನು ಸರ್ಕಾರ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರು ಪ್ರತ್ಯೇಕವಾಗಿ ಪ್ರಕಟಿಸಲಿದ್ದಾರೆ.
* ಕರ್ಫ್ಯೂ ಅವಧಿಯಲ್ಲಿ ಅತ್ಯವಶ್ಯಕ ಸೇವೆಗಳನ್ನು ಒದಗಿಸುವಂತಹ ವಾಹನಗಳು/ ಸರಕು ಸಾಗಾಣಿಕೆ ವಾಹನಗಳು/ ಹೋಂ ಡೆಲಿವರಿ/ ಇ-ಕಾಮರ್ಸ್ ಮತ್ತು ಖಾಲಿ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಅಂತಾರಾಜ್ಯ ಸರಕು ಸಾಗಣೆ ಸಂಚಾರಕ್ಕೂ ಅನುಮತಿ.
* ಸಿನಿಮಾ ಹಾಲ್, ಜಿಮ್, ಕ್ರೀಡಾಂಗಣ, ಆಡಿಟೋರಿಯಂ, ಈಜುಕೊಳ ಎಲ್ಲವೂ ಬಂದ್.
* ಹೋಟೆಲ್, ರೆಸ್ಟೋರೆಂಟ್ ಬಂದ್ ಆಗಿರಲಿದ್ದು, ಟೇಕ್ ಅವೇ, ಪಾರ್ಸೆಲ್ ವ್ಯವಸ್ಥೆಗೆ ಅನುಮತಿ ಇರಲಿದೆ.
* ಮದ್ಯ ಮಳಿಗೆಯಲ್ಲಿ ಪಾರ್ಸೆಲ್ ವ್ಯವಸ್ಥೆ, ಬಾರ್, ರೆಸ್ಟೋರೆಂಟ್ ಬಂದ್, ಟೇಕ್ ಅವೇಗೆ ಮಾತ್ರ ಅನುಮತಿ
ಬಸ್ ಸಂಚಾರ ಇಲ್ಲ:
ಕೆಎಸ್ಸಾರ್ಟಿಸಿ, ಬಿಎಂಟಿಸಿ, ನಮ್ಮ ಮೆಟ್ರೋ ಸೇರಿದಂತೆ ಸಾರಿಗೆ ಸಂಚಾರ 14 ದಿನಗಳ ಕಾಲ ಬಂದ್ ಆಗಲಿದೆ. ಅಂತಾರಾಜ್ಯ ಬಸ್ ಸಂಚಾರವೂ ಸ್ಥಗಿತ. ಖಾಸಗಿ ವಾಹನಗಳಲ್ಲಿ ಸಂಚಾರಕ್ಕೂ ನಿರ್ಬಂಧ ಹೇರಲಾಗಿದೆ.
ಮೇ 1ರಿಂದ 18 ರಿಂದ 45 ವರ್ಷದೊಳಗಿನವರಿಗೆ ಕೊರನಾ ಲಸಿಕೆ ಉಚಿತ ನೀಡಲಾಗುವುದು, ಜೊತೆಗೆ ಕೇಂದ್ರ ಸರ್ಕಾರದ ಸೂಚನೆಯಂತೆ 65 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಲಸಿಕೆ ಸಿಗಲಿದೆ ಎಂದು ಹೇಳಿದರು.
ಇನ್ಮುಂದೆ ಆಕ್ಸಿಜನ್ ಕೊರತೆ ಬರಲ್ಲ, ಕೇಂದ್ರ 800 ಮೆಟ್ರಿಕ್ ಟನ್ ಕೊಡಲಿದೆ, ರೆಮ್ಡಿಸಿವರ್ 1 ಲಕ್ಷ 20 ಸಾವಿರ ಪೂರೈಕೆ ಮಾಡುತ್ತಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
