ತುಮಕೂರು:
ನಾಮಪತ್ರ ವಾಪಸ್ ಪಡೆಯಲು ಒಂದು ನಯಾಪೈಸೆ ಹಣವನ್ನೂ ಸಹಾ ನಾನು ಪಡೆದಿಲ್ಲ ಎಂದು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪ್ರಮಾಣ ಮಾಡುವ ಮೂಲಕ ಸ್ಪಷ್ಟಪಡಿಸಿದ್ದಾರೆ.
ಅವರು ಇಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ, ದರ್ಶನ ಪಡೆದು ಬಳಿಕ ಮಾಧ್ಯಮದವರೊಂದಿಗೆ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರಂಭದಲ್ಲಿ ನಾನು ಕಾರ್ಯಕರ್ತರ ಒತ್ತಡಕ್ಕೆ ಮಣಿದು ನಾಮಪತ್ರ ಸಲ್ಲಿಸಿದ್ದೆ. ಬಳಿಕ ವರಿಷ್ಠರ ಸೂಚನೆಯಂತೆ ಹಿಂಪಡೆದಿದ್ದೇನೆ. ಆದರೆ, ಇಬ್ಬರು ವ್ಯಕ್ತಿಗಳು ಮಾತನಾಡಿರುವ ಆಡಿಯೋದಲ್ಲಿ ನಾನು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನಾಮಪತ್ರ ಹಿಂಪಡೆಯಲು ಮತ್ತು ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲು 3.5ಕೋಟಿ ರೂ. ಪಡೆದಿದ್ದೇವೆ ಎಂಬ ಆರೋಪ ಇದೆ. ಯಾವುದೇ ಪ್ರಾಥಮಿಕ ತನಿಖೆಯನ್ನು ನಡೆಸದೆ ನನ್ನ ಮೇಲೆ ವಿನಾಕಾರಣ ಆರೋಪ ಮಾಡಲಾಗಿದೆ. ಇದರಿಂದಾಗಿ ನನ್ನ ಹಿತೈಷಿಗಳಿಗೆ ಹಾಗೂ ರಾಜ್ಯದ ಜನತೆಗೆ ತಪ್ಪು ಸಂದೇಶ ರವಾನೆಯಾಗಿದೆ.
ಚುನಾವಣೆಯಲ್ಲಿ ಭಾಗವಹಿಸಲು ಹಾಗೂ ನಂತರ ಲೋಕಸಭಾ ಚುನಾವಣೆಯಲ್ಲಿ ನಾಮಪತ್ರ ವಾಪಸ್ ಪಡೆಯಲು ಒಂದು ರೂಪಾಯಿ ಹಣವನ್ನೂ ಪಡೆದಿಲ್ಲ ಎಂಬುದನ್ನು ರಾಜ್ಯದ ಜನರ ಮುಂದೆ ಶ್ರೀಕ್ಷೇತ್ರದಲ್ಲಿ ಬಂದು ಸ್ಪಷ್ಟಪಡಿಸಿದ್ದೇನೆ. ರಾಜಕೀಯವಾಗಿ ನನ್ನ ಬೆಳವಣಿಗೆಯನ್ನು ಸಹಿಸದ, ನನಗೆ ಕೇಡನ್ನು ಬಯಸುವ ಕೆಲವು ಶಕ್ತಿಗಳು ನನ್ನ ವಿರುದ್ಧ ಆಪಾದನೆ ಮಾಡುವ ಮೂಲಕ ಚಾರಿತ್ರ್ಯ ಹರಣ ಮಾಡಲು ಪ್ರಯತ್ನಿಸಿದ್ದಾರೆ. ಅವರಿಗೆಲ್ಲಾ ಬುದ್ದಿ ಕೊಡು ಎಂದು ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.
ಧರ್ಮಸ್ಥಳದ ಮಂಜುನಾಥ ಕೋಟ್ಯಂತರ ಜನರ ಪಾಲಿಗೆ ನಿಜದೈವ. ಇಂತಹ ಕ್ಷೇತ್ರದಲ್ಲಿ ಅತ್ಯಂತ ನೋವಿನಿಂದ ಅನಿವಾರ್ಯವಾಗಿ ಪತ್ರಿಕಾಗೋಷ್ಠಿ ನಡೆಸಬೇಕಾದ ಪರಿಸ್ಥಿತಿ ಬಂದಿರುವುದು ನನ್ನ ಪಾಲಿಗೆ ಅತ್ಯಂತ ಬೇಸರದ ಸಂಗತಿ. ಆದರೆ, ನಾನು ಈ ಬಗ್ಗೆ ಸ್ಪಷ್ಟಪಡಿಸದಿದ್ದರೆ, ರಾಜ್ಯದ ಜನ, ದೇಶದ ಜನ, ನನ್ನ ಬಗ್ಗೆ ನಂಬಿಕೆ, ಭರವಸೆ ಹೊಂದಿರುವವರಿಗೆ ಅನುಮಾನ ಛಾಯೆ ಉಳಿಯುತ್ತದೆ ಎಂಬ ಕಾರಣದಿಂದ ಅದಕ್ಕೆ ತೆರೆ ಎಳೆಯಲು ಧರ್ಮಸ್ಥಳದಲ್ಲಿ ನನ್ನ ಅಭಿಪ್ರಾಯ ಹಂಚಿಕೊಳ್ಳಲು ಬಂದಿದ್ದೇನೆ. ನನಗಿದ್ದದ್ದು ಇದೊಂದೇ ಮಾರ್ಗ ಎಂದು ಮುದ್ದ ಹನುಮೇಗೌಡ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
