ಬೆಂಗಳೂರು : ರಸ್ತೆ ಬದಿ ಮಳೆಯಲ್ಲಿ ನೆನೆದ ಸೋಂಕಿತನ ಶವ!

ಬೆಂಗಳೂರು:

      ನಗರದ ರಸ್ತೆ ಬದಿಯಲ್ಲೇ ಸೋಂಕಿತನ ಶವವೊಂದು 3 ಗಂಟೆ ರಸ್ತೆಯಲ್ಲಿ ಬಿದ್ದಿತ್ತು ಎಂಬ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

     ಹೌದು. ಬೆಂಗಳೂರಿನ ಹನುಮಂತನಗರದ ಸೋಂಕಿತ ವ್ಯಕ್ತಿ ಮಧುಮೇಹ, ಹೃದ್ರೋಗ ಸಮಸ್ಯೆಯಿಂದ ನರಳುತ್ತಿದ್ದ ವೃದ್ಧರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿ ಕೋವಿಡ್‌ ಪತ್ತೆ ಪರೀಕ್ಷೆ ನಡೆಸಿದಾಗ ಸೋಂಕು ಇರುವುದು ಗೊತ್ತಾಗಿದೆ. ಈ ವಿಷಯವನ್ನು ಆಸ್ಪತ್ರೆ ಸಿಬ್ಬಂದಿಯು ಬೆಳಗ್ಗೆಯೇ ಸೋಂಕಿತರಿಗೆ ಕರೆ ಮಾಡಿ ತಿಳಿಸಿದ್ದಾರೆ. ಕೂಡಲೇ ಕುಟುಂಬ ಸದಸ್ಯರು ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ನೀಡಿ, ಆಸ್ಪತ್ರೆಗೆ ದಾಖಲಿಸಲು ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡುವಂತೆ ಕೋರಿದ್ದಾರೆ.

     ಬೆಳಗ್ಗೆಯಿಂದ ಸಂಜೆವರೆಗೂ ಪಾಲಿಕೆ ಅಧಿಕಾರಿಗಳು ಸ್ಪಂದಿಸಿಲ್ಲ. ಆ್ಯಂಬುಲೆನ್ಸ್‌ ಕೂಡ ಬರಲಿಲ್ಲ. ಹೀಗಾಗಿ, ಉಸಿರಾಟದ ಸಮಸ್ಯೆ ಜಾಸ್ತಿಯಾದಾಗ ಆಟೊದಲ್ಲಿ ಆಸ್ಪತ್ರೆಗೆ ತೆರಳಲು ನಿರ್ಧರಿಸಿ, ಸಂಜೆ 4.30ರ ಸುಮಾರಿಗೆ ಮುಖ್ಯರಸ್ತೆಗೆ ಪತ್ನಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ನಡು ರಸ್ತೆಯಲ್ಲಿ ಬಟ್ಟೆ ತುಂಬಿದ ಬ್ಯಾಗ್‌ನೊಂದಿಗೆ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ. ಆನಂತರವೂ ಆ್ಯಂಬುಲೆನ್ಸ್‌ ಬರಲಿಲ್ಲ.

     ಹೀಗಾಗಿ, ಸಂಜೆ 7.30ರವರೆಗೆ ರಸ್ತೆಯಲ್ಲೇ ಸೋಂಕಿತರ ಮೃತದೇಹ ಬಿದ್ದಿತ್ತು. ಶವವು ಮಳೆಯಲ್ಲಿ ತೋಯ್ದು ಹೋಯಿತು. ಆನಂತರ ಆ್ಯಂಬುಲೆನ್ಸ್‌ನಲ್ಲಿ ಮೃತದೇಹವನ್ನು ಕೊಂಡೊಯ್ಯಲಾಯಿತು.

     ಸಿಲಿಕಾನ್ ಸಿಟಿಯಲ್ಲಿ ಕೊರೊನಾ ವೈರಸ್ ತನ್ನ ರೌದ್ರ ನರ್ತನವನ್ನು ತೋರಿಸುತ್ತಿದ್ದು, ಕೆಲವರು ಆಸ್ಪತ್ರೆಗಳಿಗೆ ಅಲೆದಾಡಿ ಅಲೆದಾಡಿ ಬೆಡ್ ಸಿಗದೇ ಮೃತಪಟ್ಟಿದ್ದಾರೆ. ಈ ಮಧ್ಯೆ ನಗರದ ರಸ್ತೆ ಬದಿಯಲ್ಲೇ ಸೋಂಕಿತನ ಶವವೊಂದು ಅನಾಥವಾಗಿ ಬಿದ್ದಿರುವುದು ಸೋಂಕಿತರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ.  

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link