ಹಾಸನ:

ಲೋಕಸಭಾ ಚುನಾವಣೆಯಲ್ಲಿ ನೂತನ ಸಂಸದನಾಗಿ ಆಯ್ಕೆಯಾಗಿದ್ದ ಪ್ರಜ್ವಲ್ ರೇವಣ್ಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಾನು ಒಂದು ನಿರ್ಧಾರಕ್ಕೆ ಬಂದಿದ್ದೇನೆ. ಅದನ್ನು ನಮ್ಮ ನಾಯಕರು ಎಷ್ಟರ ಮಟ್ಟಿಗೆ ಸ್ವೀಕರಿಸುತ್ತಾರೆ ಗೊತ್ತಿಲ್ಲ. ಯಾರಿಗೂ ಕೇಳದೆ ನಾನು ಇದನ್ನು ಮಾಡಿದೆ ಎಂದು ಹೇಳಬೇಡಿ. ಗೌಡರು ನಮ್ಮ ಪಕ್ಷದ ಬೇರು. ದೇವೇಗೌಡರ ಆಶೀರ್ವಾದದೊಂದಿಗೆ ನಾನು ರಾಜೀನಾಮೆ ಕೊಟ್ಟು ಗೌಡರಿಗೆ ಈ ಜಿಲ್ಲೆಯನ್ನು ಬಿಟ್ಟುಕೊಡುತ್ತೇನೆ. ಅವರ ಶಕ್ತಿ ರಾಜ್ಯಕ್ಕೆ ಬೇಕಿದೆ. ನಾನು ಇಂದು ದೇವೇಗೌಡರನ್ನು ಭೇಟಿಯಾಗಿ ಅವರ ಮನವೊಲಿಸಿ ಜಿಲ್ಲೆಯಲ್ಲಿ ಮತ್ತೆ ಚುನಾವಣೆಗೆ ನಿಲ್ಲಿಸಬೇಕಿದೆ ಎಂದು ಹೇಳುವ ಮೂಲಕ ರಾಜೀನಾಮೆಗೆ ಇಂಗಿತ ವ್ಯಕ್ತಪಡಿಸಿದ್ದಾರೆ.
ತಾತ ದೇವೇಗೌಡರು ಮೊಮ್ಮಗ ಪ್ರಜ್ವಲ್ಗಾಗಿ ತಮ್ಮ ಭದ್ರಕೋಟೆ ಹಾಸನ ಕ್ಷೇತ್ರವನ್ನು ಬಿಟ್ಟುಕೊಟ್ಟು ತಾವು ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಜನತೆ ದೇವೇಗೌಡರಿಗೆ ಮನೆಯ ದಾರಿ ತೋರಿಸಿದ್ದಾರೆ. ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ ಮಂಡ್ಯದಲ್ಲೂ ಜೆಡಿಎಸ್ ಪ್ರತಿಷ್ಠೆ ಮಣ್ಣುಪಾಲಾಗಿದೆ. ಹೀಗಾಗಿ ತಾವು ಗೆದ್ದರೂ ಸಂಭ್ರಮಿಸಲಾಗದ ಸ್ಥಿತಿ ಪ್ರಜ್ವಲ್ ರೇವಣ್ಣ ಅವರದ್ದಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








