ಮಡಿಕೇರಿ :
ಬ್ರಹ್ಮಗಿರಿ ಬೆಟ್ಟ ಕುಸಿತಗೊಂಡು ನಾಪತ್ತೆಯಾಗಿದ್ದಂತ ತಲಕಾವೇರಿ ಪ್ರಧಾನ ಅರ್ಚಕ ನಾರಾಯಣ ಆಚಾರ್ ಅವರ ಮೃತ ದೇಹ ಪತ್ತೆಯಾಗಿದೆ.
ಕಳೆದ 6 ದಿನಗಳ ಹಿಂದೆ ಸುರಿದಂತ ಭಾರೀ ಮಳೆಯಿಂದಾಗಿ ತಲಕಾವೇರಿಯ ಪ್ರಧಾನ ಅರ್ಚಕ ನಾರಾಯಣ ಆಚಾರ್ ಅವರ ಮನೆಯ ಮೇಲೆ ಬ್ರಹ್ಮಗಿರಿ ಬೆಟ್ಟ ಕುಸಿತಗೊಂಡಿತ್ತು. ಹೀಗಾಗಿ ಅರ್ಚಕ ನಾರಾಯಣ ಆಚಾರ್, ಅವರ ಪತ್ನಿ, ಅಣ್ಣ ಹಾಗೂ ಇಬ್ಬರು ಸಹಾಯಕರು ನಾಪತ್ತೆಯಾಗಿದ್ದರು.
ನಾಪತ್ತೆಯಾದವರ ರಕ್ಷಣಾ ಕಾರ್ಯಾಚರಣೆ ಕಳೆದ ಆರು ದಿನಗಳ ಹಿಂದಿನಿಂದ ನಡೆಯುತ್ತಿತ್ತು ಬೆಟ್ಟದಿಂದ 2 ಕಿಲೋಮೀಟರ್ ದೂರದಲ್ಲಿ ಮೊದಲು ನಾರಾಯಣ ಆಚಾರ್ ಅಣ್ಣನ ಮೃತದೇಹ ಪತ್ತೆಯಾಗಿತ್ತು. ಈ ಬಳಿಕ ಇಂದು ತಲಕಾವೇರಿ ಪ್ರಧಾನ ಅರ್ಚಕ ನಾರಾಯಣ ಆಚಾರ್ ಅವರ ಮೃತದೇಹ ಪತ್ತೆಯಾಗಿದೆ.
ಅರ್ಚಕ ನಾರಾಯಣ ಆಚಾರ್ಯರ ಮಕ್ಕಳು ಮೊನ್ನೆ ವಿದೇಶಗಳಿಂದ ಆಗಮಿಸಿದ್ದಾರೆ. ಮೂರು ಹಿಟಾಚಿ, ಎನ್ಡಿಆರ್ಎಫ್, ಎಸ್ಡಿಆರ್ಎಫ್ ಮೂಲಕ ನಿನ್ನೆ ಜಂಟಿ ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ ನಾರಾಯಣ ಆಚಾರ್ಯರ ಮನೆಯ ಲಕ್ಷಾಂತರ ರೂ. ಬೆಲೆ ಬಾಳುವ ವಸ್ತುಗಳು ಮಣ್ಣಿನಡಿ ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಒಂದು ಡಸ್ಟರ್, ಅಂಬಾಸಿಡರ್ ಕಾರು, 30ಕ್ಕೂ ಹೆಚ್ಚು ಹಸುಗಳಿತ್ತು. ಅವೆಲ್ಲವೂ ಗುಡ್ಡ ಕುಸಿತದ ವೇಳೆ ಕೊಚ್ಚಿ ಹೋಗಿವೆ. ಕೊಡಗಿನ ಸುತ್ತಮುತ್ತ ನಾರಾಯಣ ಆಚಾರ್ಯ 100 ಎಕರೆ ಕಾಫಿ ತೋಟ ಹೊಂದಿದ್ದರು. ಅದೇ ರೀತಿ ಬೆಂಗಳೂರು, ಮಂಗಳೂರಿನಲ್ಲಿಯೂ ಆಸ್ತಿ ಹೊಂದಿದ್ದರು ಎನ್ನಲಾಗಿದೆ.
ಕಾರ್ಯಾಚರಣೆ ಸ್ಥಳದಲ್ಲಿ ನಾರಾಯಣ ಆಚಾರ್ ಅವರ ಪುತ್ರಿಯರಾದ ಶಾರದಾ ಮತ್ತು ನಮಿತ ಕೂಡ ಹಾಜರಿದ್ದು, ಮನೆಯಲ್ಲಿ ದೊರೆತ ವಸ್ತುಗಳನ್ನು ಅವರ ಸಮ್ಮುಖದಲ್ಲಿ ಮಹಜರು ಮಾಡಿ ಠಾಣೆಗೆ ಕೊಂಡೊಯ್ಯಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/08/talakaveri-priest.jpg)