ನಾಳೆ ಉಪಚುನಾವಣಾ ಫಲಿತಾಂಶ : ಸಂಭ್ರಮಾಚರಣೆಗಿಲ್ಲ ಅವಕಾಶ!!

ಬೆಂಗಳೂರು : 

     ಉಪಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಾಳೆ ಆರ್.ಆರ್.ನಗರ ಹಾಗೂ ಶಿರಾ ಮಿನಿ ಮಹಾಸಮರದ ಫಲಿತಾಂಶ ಹೊರಬೀಳಲಿದ್ದು, ಗೆದ್ದ ಅಭ್ಯರ್ಥಿಗಳು ಈ ಬಾರಿ ಯಾವುದೇ ರೀತಿಯ ಸಂಭ್ರಮಾಚರಣೆ ಮಾಡಲು ಅವಕಾಶವಿಲ್ಲ.

     ನಾಳೆ ರಾಜರಾಜೇಶ್ವರಿನಗರ ಮತ್ತು ಶಿರಾ ಉಪಚುನಾವಣಾ ಮತ ಎಣಿಕೆ ಪ್ರಕ್ರಿಯೆ ನಡೆಯಲಿದ್ದು, ಯಾರಿಗೆ ವಿಜಯಲಕ್ಷ್ಮೀ ಒಲಿಯುತ್ತಾಳೆ ಎಂಬುದು ಮಧ್ಯಾಹ್ನದ ವೇಳೆಗೆ ಖಚಿತವಾಗಲಿದೆ. ಕೋವಿಡ್​ ಹಿನ್ನಲೆ ಮತಎಣಿಕೆಗೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಈ ಕುರಿತು ಬಿಬಿಎಂಪಿ ಆಯುಕ್ತ ಮತ್ತು ಚುನಾವಣಾಧಿಕಾರಿ ಮಂಜುನಾಥ ಪ್ರಸಾದ ಮತ್ತು ಮತ ಎಣಿಕೆ ಆಯುಕ್ತ ಹಾಗೂ ನಗರ ಪೊಲೀಸ್​ ಆಯುಕ್ತ ಕಮಲಪಂಥ್​ ಪತ್ರಿಕಾಗೋಷ್ಠಿ ನಡೆಸಿದ್ದಾರೆ,

     ನಿಯಮಾವಳಿಗಳನ್ನು ಪಾಲಿಸಿ ಮತ ಎಣಿಕೆ ಮಾಡಬೇಕು. ಬೆಳಿಗ್ಗೆ 7:45ಕ್ಕೆ ಸ್ಟ್ರಾಂಗ್ ರೂಂ ತೆರೆಯಲಾಗುತ್ತಿದ್ದು, ಬೆಳಿಗ್ಗೆ 8ರಿಂದ ಮತ ಎಣಿಕೆ ಆರಂಭವಾಗಿ ಮಧ್ಯಾಹ್ನ 12:30ರಿಂದ 1ಗಂಟೆ ವೇಳೆಗೆ ಮತ ಎಣಿಕೆ ಮುಗಿಯುವ ನಿರೀಕ್ಷೆಯಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

     ಇನ್ನು ಮತ ಎಣಿಕೆ ಹಿನ್ನೆಲೆ ಆರ್.ಆರ್.ನಗರ ಕ್ಷೇತ್ರ ವ್ಯಾಪ್ತಿಯಲ್ಲಿ ನಾಳೆ ಬೆಳಿಗ್ಗೆ 6ಗಂಟೆಯಿಂದ ರಾತ್ರಿ 12 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತಿದ್ದು, ಮದ್ಯ ಮಾರಾಟಕ್ಕೆ ಅವಕಾಶವಿರುವುದಿಲ್ಲ.

     ಗೆಲುವು ಯಾರದ್ದೇ ಆದರೂ ಗೆದ್ದ ಅಭ್ಯರ್ಥಿಗಳು ಈ ಬಾರಿ ಯಾವುದೇ ರೀತಿಯ ಸಂಭ್ರಮಾಚರಣೆ ಮಾಡಲು ಅವಕಾಶವಿಲ್ಲ. ಗೆದ್ದ ಅಭ್ಯರ್ಥಿಗಳು ಸಂಭ್ರಮಾಚರಣೆಯಲ್ಲಿ ತೊಡಗುವಂತಿಲ್ಲ. ಪಟಾಕಿ ಸಿಡಿಸಲು ಯಾವುದೇ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap