ಮಂಡ್ಯ:
ಕನ್ನಡ ಚಿತ್ರರಂಗದ ನಟರು ಗೌರವದಿಂದ ಮನೆಯಲ್ಲಿರಬೇಕು. ಹೊರಗೆ ಬಂದು ಜೆಡಿಎಸ್ ಪಕ್ಷ ಹಾಗೂ ನಾಯಕರ ವಿರುದ್ಧ ಬಾಯಿ ಬಿಟ್ಟರೆ ಪರಿಣಾಮ ನೆಟ್ಟಗಿರುವುದಿಲ್ಲ’ ಎಂದು ಶಾಸಕ ನಾರಾಯಣಗೌಡ ಮಂಗಳವಾರ ಧಮಕಿ ಹಾಕಿದ್ದಾರೆ.
ಮಂಡ್ಯದಲ್ಲಿ ಕೆ.ಆರ್ ಪೇಟೆ ಸಮಾವೇಶದಲ್ಲಿ ಮಾತನಾಡಿದ ಅವರು, ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಸುಮಲತಾ ಪರ ನಟ ದರ್ಶನ್ ಹಾಗೂ ಯಶ್ ಅವರು ಒಬ್ಬ ವ್ಯಕ್ತಿಯ ಪರ ಪ್ರಚಾರ ನಡೆಸುವುದು ಸರಿಯಲ್ಲ. ನಿಮಗೂ ರಾಜಕೀಯಕ್ಕೂ ಏನು ಸಂಬಂಧ? ನಮ್ಮ ಟಿಕೆಟ್ ಹಣ ತಿಂದು ನೀವು ಬದುಕುತ್ತಿದ್ದೀರಿ. ಇದು ನಿಮಗೆ ನೆನಪಿರಲಿ. ರಾಜಕೀಯ ಮಾಡಲು ಬಂದರೆ ಸುಮ್ಮನೆ ಕೂರುವುದಿಲ್ಲ’ ಎಂದಿದ್ದಾರೆ.
ನಮ್ಮದೇ ಸರ್ಕಾರ ಅಸ್ತಿತ್ವದಲ್ಲಿದೆ. ನೀವು ಆಸ್ತಿ ಅಂತಸ್ತು ಏನು ಮಾಡಿದ್ದೀರಿ ಅದರ ಮೇಲೆ ತನಿಖೆ ಮಾಡುತ್ತೇವೆ. ನಿಮ್ಮ ಕೆಲಸ ನೋಡಿಕೊಂಡು ಗೌರವದಿಂದ ಮನೆಯಲ್ಲಿರಿ ಎಂದು ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.
ರಾಜಕಾರಣ, ಕುಮಾರಣ್ಣ, ದೇವೇಗೌಡರ ಬಗ್ಗೆ ಮಾತನಾಡಲು ಅಧಿಕಾರವಿಲ್ಲ. ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಮಾತನಾಡಿದರೆ ತಕ್ಕಪಾಠ ಮಾಡುತ್ತೇವೆ. ನಿಮಗೂ ರಾಜಕಾರಣಕ್ಕೂ ಸಂಬಂಧವಿಲ್ಲ. ಶೂಟಿಂಗ್ ಮಾಡ್ಕೊಂಡು ಗೌರವವಾಗಿ ಇರಿ. ರಾಜಕಾರಣದ ಬಗ್ಗೆ ಮಾತಾಡಲು ನಿಮಗೆ ಹಕ್ಕಿಲ್ಲ. ನೀವು ಭಾರತ ದೇಶವನ್ನೇ ನೋಡಿಲ್ಲ. ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ ಎಂದು ಹೇಳುವ ಮೂಲಕ ಶಾಸಕರು, ದರ್ಶನ್ ಹಾಗೂ ಯಶ್ಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
