ಬೆಂಗಳೂರು :
ಸುಪಾರಿ ನೀಡಿ ತನ್ನ ಹೆಂಡತಿಯನ್ನೇ ಕೊಲ್ಲಿಸಿದ ಭೂಪ ಗಂಡನೊಬ್ಬ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ವೈಯಾಲಿಕಾವಲ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ವಿನುತಾ (34) ಎಂಬುವರ ಕೊಲೆ ಪ್ರಕರಣ ಸಂಬಂಧ, ಅವರ ಪತಿ ನರೇಂದ್ರಬಾಬು ಹಾಗೂ ಆತನ ಇಬ್ಬರು ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ.
ಸಂಬಂಧಿಕರೇ ಆಗಿದ್ದ ವಿನುತಾ ಹಾಗೂ ನರೇಂದ್ರಬಾಬು 12 ವರ್ಷಗಳ ಹಿಂದೆ ಮದುವೆ ಆಗಿದ್ದರು. ಅವರಿಗೆ ಒಂದು ಮಗುವೂ ಇತ್ತು. ವರ್ಷಗಳು ಕಳೆದಂತೆ ವಿನುತಾ ಹಾಗೂ ನರೇಂದ್ರ ಬಾಬು ನಡುವೆ ಆಸ್ತಿ ವಿಷಯಕ್ಕೆ ಜಗಳಗಳಾದವು, ಇಬ್ಬರೂ ಪರಸ್ಪರ ದೂರು ದಾಖಲಿಸಿಕೊಂಡು, ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು.
ಹೆಂಡತಿಯನ್ನು ಕೊಲ್ಲಿಸಿ ಆಸ್ತಿಯನ್ನು ತನ್ನ ವಶ ಮಾಡಿಕೊಳ್ಳುವ ಇರಾದೆಯಿಂದ ಸ್ನೇಹಿತರ ಸಹಾಯದಿಂದ ಇಬ್ಬರು ಸುಫಾರಿ ಕೊಲೆಗಾರರಿಗೆ ಐದು ಲಕ್ಷ ಹಣ ನೀಡಿ ಹೆಂಡತಿ ವಿನುತಾಳನ್ನು ಕೊಲ್ಲುವಂತೆ ಸುಫಾರಿ ನೀಡಿದ್ದ. ಅದರಂತೆ ಡಿಸೆಂಬರ್ 20 ರಂದು ವಿನುತಾ ಅವರು ವೈಯಾಲಿಕಾವಲ್ ನ ತಮ್ಮ ನಿವಾಸದಿಂದ ಬೆಳಿಗ್ಗೆ ಹೊರಗೆ ಹೋದಾಗ, ಕಿಟಕಿ ಸರಳು ಮುರಿದು ಒಳಗೆ ನುಗ್ಗಿದ ಇಬ್ಬರು ಸುಫಾರಿ ಕೊಲೆಗಾರರು ವಿನುತಾ ಮರಳಿ ಬರಲು ಕಾಯುತ್ತಾ ಮನೆ ಒಳಗೆ ಅಡಗಿ ಕುಳಿತಿದ್ದರು. ಮಧ್ಯಾಹ್ನದ ವೇಳೆಗೆ ವಿನುತಾ ಮನೆಗೆ ಮರಳಿದಾಗ ಒಳಗೆ ಅಡಗಿ ಕೂತಿದ್ದ ಕಿರಾಕರು ದೊಣ್ಣೆಯಿಂದ ವಿನುತಾ ತಲೆಗೆ ಹೊಡೆದು ಕೊಂದಿದ್ದಾರೆ.
ಈ ಸಂಬಂಧ ವಿನುತಾ ಅವರು ವಾಸವಿದ್ದ ಕಟ್ಟಡದ ಮೇಲ್ಚಾವಣಿಯಲ್ಲಿರುವ ಕೊಠಡಿಯಲ್ಲಿ ವಾಸವಿರುವ ಪ್ರಶಾಂತ್ನನ್ನು ಪೊಲೀಸರು ವಶಕ್ಕೆ ಪಡೆದು ಆತ ನೀಡಿದ ಮಾಹಿತಿ ಮೇರೆಗೆ ಆಟೋ ಚಾಲಕ ಜಗನ್ನಾಥ್ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆಯ ಸಂಚು ಬಹಿರಂಗಪಡಿಸಿದ್ದಾರೆ.
“ವಿಚ್ಛೇದನಕ್ಕೆ ತಡೆಯಾಜ್ಞೆ ತರುವ ಜತೆಗೆ, ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿ ಪತ್ನಿ ವಿನುತಾ ಕಿರುಕುಳ ನೀಡುತ್ತಿದ್ದಳು. ಅಲ್ಲದೆ, ಮನೆಯನ್ನು ತನ್ನ ಹೆಸರಿಗೆ ಬರೆಸಿಕೊಡುವಂತೆ ಬೇಡಿಕೆ ಇಟ್ಟ ಕಾರಣ ಕೊಲೆ ಮಾಡಿಸಿದ್ದಾಗಿ ಆರೋಪಿ ನರೇಂದ್ರ ಬಾಬು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/12/b5964f4453736035379f5fededb.gif)