ಬೆಂಗಳೂರು:
ದೇಶ ಮೊದಲು, ಪಕ್ಷ ಆಮೇಲೆ, ಸ್ವಂತ ಹಿತಾಸಕ್ತಿಗಳು ಕೊನೆಗೆ ಹೀಗಾಗಿ ಮೊದಲು ದೇಶ ಸಿದ್ಧಾಂತಕ್ಕೆ ಬದ್ಧರಾಗಿ ಕೆಲಸ ಮಾಡೋಣ ಎಂದು ದಿ.ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ತಿಳಿಸಿದ್ದಾರೆ.
ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅವರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಕೊನೆಯ ಕ್ಷಣದಲ್ಲಿ ಟಿಕೆಟ್ ತಪ್ಪಿದ್ದು, ಬಿಜೆಪಿಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯಗೆ ಸಿಕ್ಕಿದೆ. ತೇಜಸ್ವಿನಿ ಅನಂತ್ಕುಮಾರ್ ಅವರಿಗೆ ಟಿಕೆಟ್ ಮಿಸ್ ಆಗಿದ್ದಕ್ಕೆ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸುತ್ತಿರೋ ಹಿನ್ನೆಲೆ ತೇಜಸ್ವಿನಿ ಅನಂತ್ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಆಕ್ರೋಶಗೊಂಡ ಕಾರ್ಯಕರ್ತರನ್ನು ಸಮಾಧಾನ ಪಡಿಸಿದ ತೇಜಸ್ವಿನಿ ಅನಂತಕುಮಾರ್ ಅವರು ನಾವು ಅನಂತಕುಮಾರ್ ಅವರ ಕಾಲದಿಂದಲೂ ಪಕ್ಷದ ತತ್ವ ಸಿದ್ಧಾಂತಗಳಿಗೆ ಅನುಗುಣವಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ನಮಗೆ ವ್ಯಕ್ತಿಗಿಂತ ದೇಶ ಮುಖ್ಯ. ಹೀಗಾಗಿ ಪಕ್ಷದ ವರಿಷ್ಠರು ಸೂಚಿಸಿರುವ ತೇಜಸ್ವಿ ಸೂರ್ಯ ಅವರ ಪರ ಕೆಲಸ ಮಾಡೋಣ ಎಂದರು.
ಇಂದು ನಗರದಲ್ಲಿ ಮಾತನಾಡಿದ ಅವರು, ನಿರ್ಣಯ ಏನೇ ಇದ್ದರೂ ದೇಶ ಮೊದಲು, ಪಕ್ಷ ಆಮೇಲೆ, ನಮ್ಮ ಸ್ವಂತ ಹಿತಾಸಕ್ತಿಗಳು ಕೊನೆಗೆ ಎಂದು ನಾನು ಮೊದಲಿನಿಂದಲೂ ನಮ್ಮ ಕಾರ್ಯಕರ್ತರ ಬಳಿ ಹೇಳಿಕೊಂಡು ಬಂದಿದ್ದೇನೆ ಎಂದು ತಿಳಿಸಿದರು.
ನಾವು ಅಂದುಕೊಂಡಂತೆ ಆಗಲಿಲ್ಲ ಎಂದು ಅಸಮಾಧಾನ ಆಗಿರಬಹುದು. ಆಗ ಇದಕ್ಕೆ ಕಾರಣವೇನು ಅನ್ನೋ ಪ್ರಶ್ನೆ ಬರೋದು ಸಹಜ. ಆದರೆ ಪಕ್ಷದ ತೀರ್ಮಾನ ದೊಡ್ಡದು. ಮುಖಂಡರ ತೀರ್ಮಾನಕ್ಕೆ ಬದ್ಧರಾಗಿದ್ದೇವೆ. ಮತ್ತೊಮ್ಮೆ ಪ್ರಧಾನಿ ಮೋದಿ ಅವರು ಆಯ್ಕೆಯಾಗಬೇಕು. ಹೀಗಾಗಿ ಬೇರೆ ಬೇರೆ ಯೋಚನೆಗಳನ್ನು ಬಿಟ್ಟು ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡೋಣ. ಯಾರ ವಿರುದ್ಧವೂ ಘೋಷಣೆ ಕೂಗುವುದು ಬೇಡ. ಅಳುವುದಾಗಲಿ, ಬೇಸರವಾಗಲಿ ಅದನ್ನು ಸಾರ್ವಜನಿಕವಾಗಿ ತೋರಿಸುವುದು ನಮ್ಮ ಪಕ್ಷದ ಪದ್ಧತಿಯಲ್ಲ. ನಮ್ಮ ಪಕ್ಷದ ನಾಯಕರು, ಮುಖಂಡರು ಇದೇ ಸಿದ್ಧಾಂತವನ್ನು ಅನುಸರಿಸಿಕೊಂಡು ಬಂದಿದ್ದಾರೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/03/Tejaswini-Ananthkumar.gif)