ಸಂತ ದಾಸೋಹಿಯ ಪುಣ್ಯಸ್ಮರಣೆ ; ಮುಂಜಾನೆಯಿಂದಲೇ ಧಾರ್ಮಿಕ ಕಾರ್ಯಕ್ರಮ

 ತುಮಕೂರು :

      ತ್ರಿವಿಧ ದಾಸೋಹಿ, ಕರ್ನಾಟಕರತ್ನ, ಸಿದ್ಧಗಂಗಾ ಮಠದ ಲಿಂಗೈಕ್ಯ ಪೂಜ್ಯ ಡಾ.ಶ್ರೀ.ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳವರ ಪುಣ್ಯ ಸಂಸ್ಮರಣೋತ್ಸವ ಇಂದು ಶ್ರೀ ಮಠದಲ್ಲಿ ನಡೆಯಲಿದ್ದು, ಈ ಪುಣ್ಯ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ನಾಡಿನ ವಿವಿಧೆಡೆಯಿಂದ ಭಕ್ತರು ಬುಧವಾರ ಸಂಜೆಯಿಂದಲೇ ಆಗಮಿಸತೊಡಗಿದ್ದಾರೆ.

      ಪೂಜ್ಯ ಶ್ರೀಗಳು ನಡೆದಾಡಿದ ಮಠದ ನೆಲ ಗುರುವಂದನೆ ಮಾದರಿಯಲ್ಲಿ ಶ್ರೀಗಳ ಪುಣ್ಯಸ್ಮರಣೆಗೆ ಅಣಿಯಾಗಿದ್ದು, ಶ್ರೀಗಳು ಆಸೀನರಾಗುತ್ತಿದ್ದ ಯಂತ್ರಧಾರಣೆ ಮಂಚ, ಪೂಜ್ಯರ ಲಿಂಗೈಕ್ಯ ಗದ್ದುಗೆ, ಹಳೇ ಮಠ, ಪ್ರಸಾದ ನಿಲಯ, ಕಚೇರಿ…, ಪ್ರವೇಶದ್ವಾರ ಹೀಗೆ ಶ್ರೀಗಳು ಪಾದಸ್ಪರ್ಶಿಸಿದ್ದ ಜಾಗವೆಲ್ಲವನ್ನು ತಳಿರು ತೋರಣ, ಹೂವ್ವು, ಕಮಾನುಗಳಿಂ ಅಲಂಕೃತಗೊಳಿಸಿದ್ದು, ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮದ ವೇದಿಕೆಯನ್ನು ಸಿದ್ಧಲಿಂಗೇಶ್ವರ ವೇದ ಸಂಸ್ಕøತ ಪಾಠಶಾಲಾ ಕಟ್ಟಡದ ಮುಂಭಾಗ ಸಾಲಂಕೃತಗೊಳಿಸಿ ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ. ವೇದಿಕೆ ಮುಂಭಾಗ, ಎಡಭಾಗದಲ್ಲಿ ಮೂರು ಸಾವಿರ ಜನ ಕೂರಬಹುದಾದಷ್ಟು ಆಸನ ವ್ಯವಸ್ಥೆ ಮಾಡಿದ್ದು, ಸುಮಾರು 30ಸಾವಿರ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಎಲ್ಲರಿಗೂ ವಿಶೇಷ ದಾಸೋಹದ ವ್ಯವಸ್ಥೆ ಮಾಡಲಾಗಿದೆ.

      ಮುಂಜಾನೆಯಿಂದಲೇ ಧಾರ್ಮಿಕ ಕಾರ್ಯಕ್ರಮ:

      ಮುಂಜಾನೆ 4 ರಿಂದಲೇ ಶ್ರೀಗಳ ಗದ್ದುಗೆಗೆ ಶ್ರೀ ಸಿದ್ಧಲಿಂಗಸ್ವಾಮೀಜಿ ಅವರ ನೇತೃತ್ವದಲ್ಲಿ ರುದ್ರಾಭಿಷೇಕ ವಿಶೇಷ ಪೂಜೆ ನಡೆಯಲಿದ್ದು, ಶ್ರೀಗಳ ಪುತ್ಥಳಿಯಲ್ಲಿ ಬೆಳ್ಳಿ ಪಲ್ಲಕ್ಕಿಯಲ್ಲಿಟ್ಟು ಮಠದ ಆವರಣದಲ್ಲೇ ಮೆರವಣಿಗೆ ಮಾಡಲಾಗುತ್ತದೆ. ಕುಂಬಕಳಸ ಹೊತ್ತ ಮಹಿಳೆಯರು, ವೀರಗಾಸೆ ನಾದಸ್ವರದವರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

      ಸಿಎಂ ಯಡಿಯೂರಪ್ಪ ಉದ್ಘಾಟನೆ:

      ನಂತರ 11ಕ್ಕೆ ವೇದಿಕೆ ಕಾರ್ಯಕ್ರಮ ನೆರವೇರಲಿದ್ದು, ಪುಣ್ಯಸಂಸ್ಮರಣೋತ್ಸವಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ. ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಸಿ.ಎನ್.ಅಶ್ವತ್ಥನಾರಾಯಣ, ಕೇಂದ್ರ ಸಚಿವ ಪ್ರತಾಪ್‍ಚಂದ್ರ ಸಾರಂಗಿ, ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಸಚಿವರಾದ ಜಗದೀಶ್ ಶೆಟ್ಟರ್, ವಿ.ಸೋಮಣ್ಣ ಸೇರಿದಂತೆ ಹಲವು ಸಚಿವರುಗಳು, ಸಂಸದರು ಶಾಸಕರು ವಿವಿಧ ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮಕ್ಕೂ ಮುನ್ನಾ ಶ್ರೀ ಮಠದ ವಿದ್ಯಾರ್ಥಿಗಳಿಂದ ಸಾಮೂಹಿಕ ಪ್ರಾರ್ಥನೆ ನೆರವೇರಲಿದೆ. ಶ್ರೀಗಳ ಹುಟ್ಟೂರು ವೀರಾಪುರ ಅಭಿವೃದ್ಧಿ ಯೋಜನೆಯ 3ಡಿ ಚಿತ್ರಾವಳಿಯನ್ನು ಸಿಎಂ ಲೋಕಾರ್ಪಣೆಗೊಳಿಸಲಿದ್ದಾರೆ.

      4 ಕಡೆ ದಾಸೋಹ, ಬಿಗಿ ಭದ್ರತೆ :

      ಶ್ರೀಮಠಕ್ಕೆ ಆಗಮಿಸುವ ಭಕ್ತರಿಗಾಗಿ ಬೆಳಿಗ್ಗೆ ಸಿಹಿ, ಖಾರ ಪೊಂಗಲ್, ಮಧ್ಯಾಹ್ನ ವಿಶೇಷ ಸಿಹಿ ಬೂಂದಿ ಪಾಯಸದ ದಾಸೋಹ ಹಾಗೂ ರಾತ್ರಿ ವಿಶೇಷವಾಗಿ ಮಾಲ್ಡಿ ಪುಡಿ ಪ್ರಸಾದವನ್ನು ವಿತರಿಸಲಾಗುತ್ತಿದೆ.

      250 ಜನ ಪೊಲೀಸರು, 50 ಮಂದಿ ಹಿರಿಯ ಅಧಿಕಾರಿಗಳು ಭದ್ರತೆ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದು, ಬುಧವಾರ ಮಧ್ಯಾಹ್ನ ಎಸ್ಪಿ ಡಾ.ಕೆ.ವಂಶಿಕೃಷ್ಣ ಹಾಗೂ ಎಡಿಸಿ ಚನ್ನಬಸಪ್ಪ ಡಿಎಚ್‍ಓ ಸೇರಿ ಹಿರಿಯ ಅಧಿಕಾರಿಗಳು ಕಾರ್ಯಕ್ರಮದ ವೇದಿಕೆ ಇನ್ನಿತರ ಸಿದ್ಧತೆಯನ್ನು ಪರಿಶೀಲಿಸಿದರು.
 
ದಾಸೋಹ ದಿನಕ್ಕಾಗಿ ಅಭಿಯಾನ :

      ತ್ರಿವಿಧ ದಾಸೋಹಕ್ಕೆ ಜಗತ್‍ಪ್ರಸಿದ್ಧಿಯಾಗಿದ್ದ ಸಿದ್ಧಗಂಗೆಯ ಪೂಜ್ಯ ಡಾ.ಶ್ರೀ.ಶಿವಕುಮಾರಸ್ವಾಮೀಜಿಗಳವರ ಪುಣ್ಯಸ್ಮರಣೆಯ ದಿನವಾದ ಜ.21ಅನ್ನು ದಾಸೋಹ ದಿನವಾಗಿ ಆಚರಿಸಬೇಕೆಂದು ಜಾಲತಾಣಗಳಾದ ಫೇಸ್‍ಬುಕ್ ಟ್ವಿಟರ್‍ನಲ್ಲಿ ಬೃಹತ್ ಅಭಿಯಾನವೇ ನಡೆಯುತ್ತಿದ್ದು, ಸರಕಾರ ಮುಖ್ಯಮಂತ್ರಿಗಳು ಘೋಷಣೆ ಮಾಡಬೇಕೆಂದು ಒತ್ತಾಯ ಹಾಕುತ್ತಿದ್ದಾರೆ. ಇದಕ್ಕೆ ಪೂರಕವಾಗಿ ತುಮಕೂರು ನಗರ ವೀರಶೈವ ಸಹಕಾರ ಬ್ಯಾಂಕ್ ಮುಂದೆ ಶ್ರೀಗಳ ಕಟೌಟ್ ಹಾಕಿ ದಾಸೋಹ ವ್ಯವಸ್ಥೆ, ಚಿಕ್ಕಪೇಟೆ ಬಸವಣ್ಣ ದೇವಸ್ಥಾನದ ಮುಂಭಾಗ ಚಿನ್ನ ಬೆಳ್ಳಿ ಕೆಲಸಗಾರರ ಸಂಘದಿಂದ ದಾಸೋಹ ಕಾರ್ಯಕ್ರಮ ಹೀಗೆ ನಗರ, ಜಿಲ್ಲೆಯ ವಿವಿಧೆಡೆ ನಾನಾ ಸಂಘಸಂಸ್ಥೆಗಳವರು ದಾಸೋಹ ವಿತರಣೆ ಮಾಡುತ್ತಿದ್ದಾರೆ. ತುಮಕೂರು ಮಾತ್ರವಲ್ಲದೇ ಬೆಂಗಳೂರು, ದಾವಣಗೆರೆ, ಮೈಸೂರು ಸೇರಿ ರಾಜ್ಯದ ವಿವಿಧೆಡೆಯಿಂದಲೂ ಪುಣ್ಯ ಸಂಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಮುಖ್ಯಮಂತ್ರಿ ತೀರ್ಮಾನಿಸುತ್ತಾರೆ : ಡಿಸಿಎಂ

ಶ್ರೀಗಳ ಪುಣ್ಯಸ್ಮರಣೆಯನ್ನು ಅರ್ಥಪೂರ್ಣವಾಗಿಸಲು ದಾಸೋಹ ದಿನವಾಗಿ ಸರಕಾರದ ವತಿಯಿಂದ ಘೋಷಣೆ ಮಾಡುವ ಕುರಿತು ಮುಖ್ಯಮಂತ್ರಿಗಳು ತೀರ್ಮಾನ ಕೈಗೊಳ್ಳುತ್ತಾರೆ. ಶ್ರೀಗಳದ್ದು ಪ್ರಶಸ್ತಿ, ಬಿರುದುಗಳಿಗಿಂತ ಮಿಗಿಲಾದಅತೀತ ಸೇವೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಪ್ರತಿಕ್ರಿಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link