ಠಾಣೆಯ ಮುಂದೆ ವಾಹನಗಳು : ಸಂಚಾರಕ್ಕೆ ತೊಂದರೆ

ತುಮಕೂರು:

      ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾದ ಬಾರ್‍ಲೈನ್ ರಸ್ತೆಯಲ್ಲಿ ಸಂಚಾರಿ ಪೊಲೀಸ್ ಠಾಣೆ ಹಾಗೂ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಗಳು ಇವೆ. ಈ ಠಾಣೆಗಳಲ್ಲಿ ದಾಖಲಾದ ದೂರುಗಳ ಸಂಬಂಧ ವಶಪಡಿಸಿಕೊಳ್ಳಲಾದ ವಾಹನಗಳಿಂದಾಗಿ ಅಲ್ಲಿ ಸಂಚಾರಿ ಸಮಸ್ಯೆ ಎದುರಾಗುತ್ತಿದೆ.

      ಅಪಘಾತಕ್ಕೆ ಸಿಲುಕಿದ ವಾಹನಗಳು ಸೇರಿದಂತೆ ಮತ್ತಿತರ ವಾಹನಗಳನ್ನು ಜಫ್ತಿ ಮಾಡಿ ಗ್ರಾಮಾಂತರ ಠಾಣೆಯ ಮುಂಭಾಗದಲ್ಲಿ ರಸ್ತೆಯ ಒಂದು ಬದಿಯಲ್ಲಿ ನಿಲ್ಲಿಸಲಾಗಿದೆ.

      ವಾಹನಗಳ ವಾರಸುದಾರರು ಇದ್ದಾರೋ ಇಲ್ಲವೋ ಎಂಬಂತೆ ಅಲ್ಲಿಯೇ ಧೂಳು ಹಿಡಿದು ತುಕ್ಕು ಹಿಡಿಯುತ್ತಿವೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಪೊಲೀಸರು ವಶಪಡಿಸಿಕೊಳ್ಳುವ ವಾಹನಗಳನ್ನು ನಿಲ್ಲಿಸಲು ನಿರ್ದಿಷ್ಠವಾದ ಸ್ಥಳ ಇಲ್ಲವೇ ? ಯಾವುದೇ ಪ್ರಕರಣದಲ್ಲಿ ವಶಪಡಿಸಿಕೊಂಡ ವಾಹನಗಳು ಅವುಗಳ ವಾರಸುದಾರರು ಬಂದು ತೆಗೆದುಕೊಂಡು ಹೋಗುವತನಕ ಅವು ರಸ್ತೆಯ ಪಕ್ಕದಲ್ಲಿಯೇ ಇರಬೇಕೆ ? ಎಂಬುದು.

ನಿರ್ದಿಷ್ಠ ಸ್ಥಳಾವಕಾಶದ ಕೊರತೆ:

      ಪೊಲೀಸರು ವಶಪಡಿಸಿಕೊಳ್ಳುವ ವಾಹನಗಳನ್ನು ನಿಲ್ಲಿಸಲು ನಿರ್ದಿಷ್ಠ ಸ್ಥಳಾವಕಾಶದ ಕೊರತೆ ಇದೆ. ಗ್ರಾಮಾಂತರ ಪೊಲೀಸ್ ಠಾಣಾ ಪಕ್ಕದಲ್ಲಿಯೇ ಚಿಲುಮೆ ಪೊಲೀಸ್ ಭವನ ಇದೆ. ಇಲ್ಲಿ ವಿವಿಧ ಕಾರ್ಯಕ್ರಮಗಳು, ಸಮಾರಂಭಗಳು ನಡೆಯುವುದರಿಂದ ಯಾವುದೇ ವಾಹನಗಳನ್ನು ತಂದು ನಿಲ್ಲಿಸಿಕೊಳ್ಳಲು ಆಗುವುದಿಲ್ಲ. ದ್ವಿಚಕ್ರ ವಾಹನಗಳನ್ನು ಹಾಗೂ ಆಟೋರಿಕ್ಷಾಗಳನ್ನು ಮಾತ್ರ ಪೊಲೀಸ್ ಠಾಣೆಯ ಆವರಣದಲ್ಲಿ ಇರಿಸಲಾಗಿದೆ. ಬೃಹತ್ ವಾಹನಗಳು, ಲಾರಿಗಳು ರಸ್ತೆಯ ಬದಿಯಲ್ಲಿಯೇ ಉಳಿದಿವೆ. 

ವಿವಿಧ ರೀತಿಯಲ್ಲಿ ವಶಪಡಿಸಿಕೊಂಡ ವಾಹನಗಳು:

      ವಾಹನಗಳ ಮೇಲೆ ಇರುವ ದೂರು ಅನ್ನು ಅವಲೋಕಿಸಿದ ನಂತರ ಅವುಗಳನ್ನು ಜಫ್ತಿ ಮಾಡಲಾಗುತ್ತದೆ. ಅವುಗಳಲ್ಲಿ ಮರಳುಸಾಗಾಣೆ ಮಾಡುವ ಲಾರಿಗಳು., ಅಕ್ರಮವಾಗಿ ವಸ್ತುಗಳ ರವಾನೆ ಮಾಡುವ ವಾಹನಗಳಾಗಿರಬಹುದು. ಅಲ್ಲದೆ ಅಪಘಾತಕ್ಕೀಡಾದ ವಾಹನಗಳಾಗಿರಬಹುದು. ಇಂತಹ ವಾಹನಗಳನ್ನು ವಶಪಡಿಸಿಕೊಂಡು ತಂದು ಠಾಣೆಯ ಮುಂಭಾಗದಲ್ಲಿ ನಿಲ್ಲಿಸುತ್ತಿದ್ದಾರೆ.

ಈಗ ನಿಂತಿರುವ ವಾಹನಗಳು:

      ಈ ವರದಿ ಸಮಯಕ್ಕೆ ಗ್ರಾಮಾಂತರ ಪೊಲೀಸ್ ಠಾಣೆ ಮುಂಭಾಗದಲ್ಲಿ ನಿಂತಿದ್ದ ವಾಹನಗಳ ಸಂಖ್ಯೆ ಗಮನಿಸುವುದಾದರೆ ಅಪಘಾತಕ್ಕೀಡಾದ ವಾಹನಗಳು ನಾಲ್ಕು, ಮರಳು ತುಂಬಿದ ಲಾರಿ ಒಂದು, ಇತರೆ ಬೃಹತ್ ವಾಹನಗಳು ಸುಮಾರು ಐದಕ್ಕೂ ಹೆಚ್ಚಿದ್ದವು. ಪೊಲೀಸ್ ಠಾಣೆಯ ಆವರಣದಲ್ಲಿ ಸಾಕಷ್ಟು ಆಟೋರಿಕ್ಷಾಗಳು ಹಾಗೂ ದ್ವಿಚಕ್ರವಾಹನಗಳನ್ನು ನಿಲ್ಲಿಸಲಾಗಿದೆ. ಆಯಾ ವಾಹನಗಳ ವಾರಸುದಾರರು ಪ್ರಕರಣದಲ್ಲಿ ವಿಧಿಸಲಾದ ದಂಡವನ್ನು ಕಟ್ಟಿ ತಮ್ಮ ವಾಹನಗಳನ್ನು ತೆಗೆದುಕೊಂಡು ಹೋಗುವ ಕೆಲಸ ನಿತ್ಯ ನಡೆಯುತ್ತಲೇ ಇರುತ್ತದೆ.

ವಾಹನಗಳ ಜಫ್ತಿ ಕಾಲಾವಕಾಶ:

      ಬೇರೆ ಬೇರೆ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ ವಾಹನಗಳನ್ನು ಆಯಾ ವಾಹನಗಳ ವಾರಸುದಾರರು ಬರುವತನಕ ಅವುಗಳನ್ನು ಠಾಣೆಯ ವಶದಲ್ಲಿಯೇ ಇಟ್ಟುಕೊಳ್ಳಲಾಗುತ್ತಿದೆ. ಪ್ರಕರಣಗಳು ಇತ್ಯರ್ಥಗೊಂಡಲ್ಲಿ ಆಯಾ ವಾಹನಗಳನ್ನು ವಾರಸುದಾರರ ವಶಕ್ಕೆ ನೀಡಲಾಗುತ್ತದೆ. ಇಲ್ಲವಾದಲ್ಲಿ ಕೋರ್ಟ್‍ನಲ್ಲಿ ಪ್ರಕರಣದ ವಿಚಾರಣೆ ನಡೆಯುವತನಕ ಹಾಗೇ ಉಳಿಯುತ್ತವೆ. ಕೆಲವೊಮ್ಮೆ ಕಳ್ಳತನ ಪ್ರಕರಣಗಳಲ್ಲಿ ವಶಪಡಿಸಿಕೊಂಡ ವಾಹನಗಳ ನೊಂದಣಿ ಸಂಖ್ಯೆ ತಪ್ಪಾಗಿದ್ದಲ್ಲಿ ಅವುಗಳನ್ನು ವಾಹನ ಮಾಲೀಕರಿಗೆ ಒಪ್ಪಿಸಲಾಗುವುದಿಲ್ಲ. ಹೀಗೆ ಪ್ರಕರಣಗಳ ತನಿಖೆ ನಡೆದು ಅವುಗಳು ಇತ್ಯರ್ಥ ಆಗುವವರೆಗೂ ವಾಹನಗಳು ಉಳಿದು ಬಿಡುತ್ತವೆ. ಈ ಪ್ರಕರಣಗಳ ತನಿಖೆ ನಡೆಸಲು ಆರು ತಿಂಗಳಿಗೂ ಹೆಚ್ಚು ಸಮಯ ಬೇಕಾಗಬಹುದು. ಕೆಲವೊಂದು ಎರಡ್ಮೂರು ದಿನಗಳಲ್ಲಿಯೇ ಇತ್ಯರ್ಥವಾಗಬಹುದು. ಇದು ಆಯಾ ಪ್ರಕರಣಗಳ ಮೇಲೆ ಅವಲಂಬಿತವಾಗಿರುತ್ತವೆ.

ಎಷ್ಟು ದಿನಗಳ ವರೆಗೆ ವಾಹನಗಳನ್ನು ನಿಲ್ಲಿಸಬಹುದು ?

      ಅಪಘಾತಗಳಲ್ಲಿ ವಶಪಡಿಸಿಕೊಳ್ಳಲಾದ ವಾಹನಗಳನ್ನು ನ್ಯಾಯಾಲಯದಲ್ಲಿ ದೂರು ಇತ್ಯರ್ಥವಾಗುವ ವರೆಗೂ ನಿಲ್ಲಿಸಲಾಗುತ್ತದೆ. ಅವುಗಳಿಗೆ ನಿರ್ದಿಷ್ಠ ಕಾಲಾವಕಾಶ ಎಂಬುದು ಇಲ್ಲ. ವಾಹನ ಮಾಲೀಕರು ಸ್ವಯಂ ಪ್ರೇರಿತರಾಗಿ ಬಾರದೆ ಇದ್ದ ಪಕ್ಷದಲ್ಲಿ ಕೆಲ ದಿನಗಳ ಕಾಲ ಪೊಲೀಸರೇ ಅವರನ್ನು ಹುಡುಕಲು ಪ್ರಯತ್ನಿಸುತ್ತಾರೆ. ಅವರು ಸಿಕ್ಕಿಬಿದ್ದಲ್ಲಿ ಅವರ ಮೇಲೆ ದೂರು ದಾಖಲಿಸಿ ನ್ಯಾಯಾಲಯದ ಆದೇಶದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲಿಯವರೆಗೂ ವಾಹನಗಳನ್ನು ಪೊಲೀಸರ ವಶದಲ್ಲಿಯೇ ಇಟ್ಟುಕೊಳ್ಳಬೇಕು.

ವಾಹನಗಳ ಹರಾಜು:

      ಪೊಲೀಸರ ವಶದಲ್ಲಿರುವ ವಾಹನಗಳ ಮಾಲೀಕರು ಅಥವಾ ವಾರಸುದಾರರು ಬಾರದೇ ಇದ್ದ ಪಕ್ಷದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದು ಸರ್ಕಾರದ ಅನುಮತಿ ಪಡೆದು ಆ ವಾಹನಗಳನ್ನು ಹರಾಜು ಮಾಡಲಾಗುತ್ತದೆ. ಹರಾಜು ಮಾಡಿದ ನಂತರ ಬರುವ ಹಣವನ್ನು ಇಲಾಖೆಯ ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತದೆ. ಇಲ್ಲವೇ ಸರ್ಕಾರಕ್ಕೆ ಸೇರುತ್ತದೆ.

ನಿತ್ಯ ಟ್ರಾಫಿಕ್ ಕಿರಿಕಿರಿ: 

      ಬಾರ್ ಲೈನ್ ರಸ್ತೆಯ ಮೂಲಕ ನಗರದ ಎಂಜಿ ರಸ್ತೆ, ಕೋತಿತೋಪು ರಸ್ತೆ, ಬಿಎಚ್ ರಸ್ತೆ ಸೇರಿದಂತೆ ವಿವಿಧ ಸಣ್ಣಪುಟ್ಟ ರಸ್ತೆಗಳು ಇರುವುದರಿಂದ ಇಲ್ಲಿ ನಿತ್ಯ ಸಾವಿರಾರು ವಾಹನಗಳ ಓಡಾಟ ಇದ್ದೇ ಇರುತ್ತದೆ. ಮುಸ್ಲೀಂ ಜನಾಂಗದ ಪ್ರಾರ್ಥನಾ ಜಾಗ ಕೂಡ ಇಲ್ಲಿಯೇ ಇದೆ. ಚಿಲುಮೆ ಸಮುದಾಯ ಭವನ ಇಲ್ಲಿಯೇ ಇದ್ದು ವಿವಿಧ ಸಭೆ ಸಮಾರಂಭಗಳು ನಡೆದ ಸಂದರ್ಭದಲ್ಲಿ ವಿಪರೀತವಾಗಿ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಇದರಿಂದ ವಾಹನ ಸವಾರರು ಕಿರಿಕಿರಿ ಅನುಭವಿಸುವಂತಾಗಿದೆ.

ಬಳಕೆಯಾಗದ ಫುಟ್‍ಪಾತ್:

      ಬಾರ್‍ಲೈನ್ ರಸ್ತೆಯುದ್ದಕ್ಕೂ ಎರಡೂ ಕಡೆಗಳಲ್ಲಿ ಪಾದಾಚಾರಿಗಳಿಗಾಗಿ ಫುಟ್‍ಪಾತ್ ವ್ಯವಸ್ಥೆ ಮಾಡಲಾಗಿದೆ. ಆದರೆ ಅದು ಪಾದಾಚಾರಿಗಳಿಗಲ್ಲದೆ ಇತರೆ ಬಂಡಿಗಳನ್ನು ಇಟ್ಟುಕೊಂಡು ಜೀವನ ನಡೆಸುವವರಿಗೆ ಅನುಕೂಲವಾಗಿದೆ. ಪೊಲೀಸ್ ಠಾಣಾ ಮುಂಭಾಗದಲ್ಲಿಯೂ ಕೂಡ ಪಾದಾಚಾರಿಗಳು ಓಡಾಡುವುದಿಲ್ಲ. ರಸ್ತೆಯ ಉದ್ದಕ್ಕೂ ವಾಹನಗಳನ್ನು ನಿಲ್ಲಿಸಿದ್ದರಿಂದ ಪಾದಾಚಾರಿ ರಸ್ತೆ ಇರುವುದು ಯಾರಿಗೂ ತಿಳಿಯುವುದಿಲ್ಲ.

ಪೊಲೀಸ್ ಠಾಣೆ ಮುಂದೆ ನಿಂತ ಕೊಳಚೆ ನೀರು:

      ಗ್ರಾಮಾಂತರ ಪೊಲೀಸ್ ಠಾಣೆಯ ಗೇಟ್‍ನ ಮುಂಭಾಗದಲ್ಲಿ ಮಳೆ ನೀರು ಜೊತೆಗೆ ಚರಂಡಿ ನೀರು ನಿಂತು ಗಬ್ಬು ನಾರುತ್ತಿದೆ. ನಿತ್ಯ ಓಡಾಡುವ ಸಾರ್ವಜನಿಕರು, ಶಾಲಾ ಮಕ್ಕಳು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಇದೇ ರಸ್ತೆ ಮೂಲಕವಾಗಿ ಸಾಕಷ್ಟು ಮಂದಿ ಓಡಾಡುತ್ತಿದ್ದು, ಪ್ರತಿಯೊಬ್ಬರು ಮೂಗಿಗೆ ಬಟ್ಟೆ ಕಟ್ಟಿಕೊಂಡು ಓಡಾಡಬೇಕಾದ ಸ್ಥಿತಿ ಅಲ್ಲಿದೆ. ಇಷ್ಟಾದರೂ ಯಾರು ಇತ್ತಕಡೆ ಗಮನ ಹರಿಸದೆ ಇರುವುದು ಶೋಚನೀಯವಾಗಿದೆ.

       “ವಾಹನಗಳನ್ನು ವಶಪಡಿಸಿಕೊಂಡ ನಂತರ ಅವುಗಳನ್ನು ಠಾಣೆಯ ವ್ಯಾಪ್ತಿಯಲ್ಲಿ ನಿಲ್ಲಿಸಿಕೊಳ್ಳಬೇಕಾಗುತ್ತದೆ. ಅವುಗಳನ್ನು ಹಿಂತಿರುಗಿಸಿಕೊಳ್ಳಲು ವಾಹನದ ಮಾಲೀಕರು ನ್ಯಾಯಾಲಯದಲ್ಲಿ ಅರ್ಜಿಯನ್ನು ಹಾಕಿ ಅಲ್ಲಿ ದಂಢ ಶುಲ್ಕ ಪಾವತಿ ಮಾಡಿ, ಅದರ ದಾಖಲಾತಿ ಪೊಲೀಸ್ ಠಾಣೆಗೆ ತಂದು ನೀಡಿದ್ದಲ್ಲಿ ವಾಹನಗಳನ್ನು ಇಲ್ಲಿಯೇ ನಿಲ್ಲಿಸಿಕೊಳ್ಳಬೇಕಾಗುತ್ತದೆ. ವಶಪಡಿಸಿಕೊಂಡ ವಾಹನಗಳನ್ನು ನಿಲ್ಲಿಸಲು ಸೂಕ್ತ ಜಾಗ ಇಲ್ಲದ ಕಾರಣ ಠಾಣೆಯ ಮುಂಭಾಗದ ರಸ್ತೆ ಪಕ್ಕದಲ್ಲಿ ನಿಲ್ಲಿಸಲಾಗುತ್ತಿದೆ. ಗೃಹ ಸಚಿವರ ಅನುಮತಿಯೊಂದಿಗೆ ವಾಹನಗಳ ಹರಾಜು ಕಾರ್ಯ ಮಾಡಲಾಗುತ್ತದೆ.”
-ಜಗನ್ನಾಥ್, ನಿವೃತ್ತ ಪೊಲೀಸ್ ಅಧಿಕಾರಿ

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link