ಬೆಂಗಳೂರು
ಆ್ಯಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ಗಾಲಿ ಜನಾರ್ದನ ರೆಡ್ಡಿಯವರ ಹೆಸರೇ ಇಲ್ಲ. ಅಲ್ಲದೇ ಅವರ ವಿರುದ್ಧ ಯಾರೂ ಸಹ ದೂರು ದಾಖಲಿಸಿಲ್ಲ ಎನ್ನುವುದು ಪತ್ತೆಯಾಗಿದೆ
ಡಿಜೆ ಹಳ್ಳಿಯಲ್ಲಿ ದಾಖಲಾದ ಎಫ್ಐಆರ್ನಲ್ಲಿ ಸೈಯದ್ ಅಹಮದ್ ಫರೀದ್ ಎ1, ಸೈಯದ್ ಆಫಕ್ ಅಹಮದ್ ಎ2,ಇರ್ಫಾನ್ ಮಿರ್ಜಾ ಎ3 ಎಂದು ದಾಖಲಿಸಲಾಗಿದೆ. ಆ್ಯಂಬಿಡೆಂಟ್ ಕಂಪನಿ ನೂರಾರು ಮಂದಿಯಿಂದ ಹಣ ಪಡೆದು ವಾಪಸ್ ನೀಡಿಲ್ಲವೆಂದು ಎಂಸಿಎಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಹೀಗೆ ದಾಖಲಾದ ಎಫ್ಐಆರ್ನಲ್ಲಿ ರೆಡ್ಡಿ ಹೆಸರೇ ಇಲ್ಲ,
ಸಿಸಿಬಿ ಪೊಲೀಸರು ಆ್ಯಂಬಿಡೆಂಟ್ ಕಂಪೆನಿ ಜನರ ಹಣವನ್ನು ಹಿಂದಿರುಗಿಸಿಲ್ಲವೆಂಬ ದೂರುಗಳ ತನಿಖೆ ಮಾಡುವ ವೇಳೆ ರೆಡ್ಡಿ ಪಾತ್ರ ಪತ್ತೆಯಾಗಿದೆ. ವಂಚನೆ ಮಾಡಲು ಪ್ರಯತ್ನ ನಡೆಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು, ಇದಕ್ಕೆ ಸಂಬಂಧಪಟ್ಟಂತೆ ಎಫ್ಐಆರ್ ನಲ್ಲಿ 420 ಸೆಕ್ಷನ್ ಸೇರಿಸಿಕೊಂಡು ರೆಡ್ಡಿಯನ್ನು ಬಂಧಿಸಲು ಅವಕಾಶವಿದೆ. ಆ ನಂತರ ಕೋರ್ಟ್ ಅನುಮತಿ ಪಡೆದು ಎಫ್ಐಆರ್ನಲ್ಲಿ ರೆಡ್ಡಿ ಹೆಸರು ಸೇರಿಸಲು ಸಹ ಅವಕಾಶವಿದೆ.
ಯಾರೀ ಫರೀದ್
ಆ್ಯಂಬಿಡೆಂಟ್ ವಂಚನೆ ಪ್ರಕರಣದ ಮೊದಲ ಆರೋಪಿ ಸೈಯದ್ ಅಹಮದ್ ಫರೀದ್ ಮೂಲತ: ವ್ಯಾಪಾರಿಯಾಗಿದ್ದ ದೇವರ ಜೀವನಹಳ್ಳಿ ನಿವಾಸಿ. 7 ಮಂದಿ ಅಣ್ಣತಮ್ಮಂದಿರ ಜೊತೆ ಡಿಜೆಹಳ್ಳಿಯಲ್ಲೇ ವಾಸವಿದ್ದ. ಮನೆಯಲ್ಲಿ ಎಲ್ಲರ ನಡುವೆ ಈತ ಪದವಿ ಪಡೆದಿದಿದ್ದಾನೆ. ಈತನ ಅಣ್ಣ ತಮ್ಮಂದಿರು ಹೊಟೇಲ್, ಶಾಮಿಯಾನ ಅಂಗಡಿ, ಬಟ್ಟೆ ಅಂಗಡಿ ಹೀಗೆ ಹತ್ತಾರು ವ್ಯಾಪಾರ ಮಾಡಿಕೊಂಡಿದ್ದಾರೆ.
ಸೋಮಾರಿಯಾದ ಫರೀದ್ ಬೀದಿ ಸುತ್ತುತ್ತಿದ್ದ. ಚೆನ್ನಾಗಿ ಇಂಗ್ಲೀಷ್ ಗೊತ್ತಿದ್ದರಿಂದ ಸುಲಭವಾಗಿ ಹಣಗಳಿಸುವ ಯೋಜನೆ ಮಾಡಿ ಚಿಟ್ ಫಂಡ್ ಬ್ಯುಸಿನೆಸ್ ಆರಂಭಿಸಲು ಮುಂದಾಗಿದ್ದ. ಅದಕ್ಕಾಗಿ ಎಂ.ಜಿ. ರಸ್ತೆಯ ನಾಲ್ಕೈದು ಪ್ರತಿಷ್ಠಿತ ಚಿಟ್ ಫಂಡ್ ಕಂಪನಿಯಲ್ಲಿ ಕೆಲಸ ಮಾಡಿ ಅನುಭವ ಪಡೆದುಕೊಂಡಿದ್ದ . ನಂತರರಾಜಾಜಿನಗರದಲ್ಲಿ 20 ವರ್ಷಗಳ ಹಿಂದೆ ಚಿಟ್ ಫಂಡ್ ಕಂಪನಿ ಶುರು ಮಾಡಿದ್ದ. ಅದರಲ್ಲಿ ಜನರಿಂದ ಹಣ ಪಡೆದು ನೇರವಾಗಿ ದುಬೈಗೆ ಪರಾರಿಯಾಗಿದ್ದ. ಅಲ್ಲಿ ಇದ್ದ ಹಣವನ್ನು ಬಳಸಿ ವ್ಯಾಪಾರ ಮಾಡಿಕೊಂಡು ವಾಪಸ್ಸು ಬೆಂಗಳೂರಿಗೆ ಬಂದಿದ್ದ.
ನಂತರ ನಗರದಲ್ಲಿ ಮತ್ತೊಂದು ಚಿಟ್ ಫಂಡ್ ಕಂಪನಿ ಶುರು ಮಾಡುತ್ತಾನೆ. ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕನಕನಗರದ ಮೊದಲ ಕ್ರಾಸ್ನಲ್ಲಿ ಮೊದಲು ಚಿಕ್ಕ ಕಚೇರಿ ತರೆದು ಮುಗ್ಧರು ಹಣ ಹೂಡಿಕೆ ಮಾಡಿದ ಬಳಿಕ 2016 ರಲ್ಲಿ ಆರ್ ಟಿ ನಗರ ಮುಖ್ಯರಸ್ತೆಯಲ್ಲಿ ದೊಡ್ಡ ಕಚೇರಿ ಆರಂಭಿಸಿ 50 ಸಾವಿರ ಕಟ್ಟಿದರೆ 1 ಲಕ್ಷದವರೆಗೆ ಹಣ ನೀಡುವುದಾಗಿ ಹೇಳಿ 500 ಕ್ಕೂ ಹೆಚ್ಚು ಮಂದಿಯ ಬಳಿ ಹಣ ಪಡೆದು ವಂಚಿಸಿದ್ದಾನೆ.
ಈ ನಡುವೆ ದುಬೈನಲ್ಲಿ ಹಣದ ವ್ಯವಹಾರ ಮಾಡಿ ದೇಶಕ್ಕೆ ವಂಚನೆ ಮಾಡಿದ ಮೇಲೆ ಇಡಿ ಈತನನ್ನು ಫೇಮಾ ಕಾಯ್ದೆಯಡಿ ವಿಚಾರಣೆ ಮಾಡಿ 2 ಕೋಟಿ ದಂಡ ವಿಧಿಸಿ, ತನಿಖೆ ಮುಂದುವರೆಸಿತ್ತು. ಈಗ ಆಂಬಿಡೆಂಟ್ ಪ್ರಕರಣದಲ್ಲಿ ಸಿಸಿಬಿ ತನಿಖೆ ಮಾಡುತ್ತಿದೆ.