ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳ ಪರದಾಟ

ತಿಪಟೂರು:

ಗ್ರಾಮೀಣ ಪ್ರದೇಶಗಳಿಂದ ಶಾಲಾ-ಕಾಲೇಜುಗಳಿಗೆಂದು ನಗರಕ್ಕೆ ಬರುವ ವಿದ್ಯಾರ್ಥಿಗಳಿಗೆ ಬಸ್ ಕಾಯುವ ಶಿಕ್ಷೆಯನ್ನು ಕೆಎಸ್‍ಆರ್‍ಟಿಸಿ ವಿಧಿಸಿರುವುದರಿಂದ ಹಳ್ಳಿ ಮಕ್ಕಳಿಗೆ ಅನಾನುಕೂಲವಾಗಿದ್ದು, ವಿದ್ಯಾರ್ಥಿಗಳು ಬಸ್ ಕಾದು ಕಾದು ಹೈರಾಣರಾಗಿದ್ದಾರೆ.
ಶಿಕ್ಷಣ ಅರಸಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಊಟ-ತಿಂಡಿ ಬಿಟ್ಟು, ಚಳಿ-ಮಳೆಯನ್ನು ಲೆಕ್ಕಿಸದೇ ತಂದೆ-ತಾಯಿಗಳು ಕಷ್ಟಪಟ್ಟು ಕೂಡಿಟ್ಟ ಹಣದಿಂದ ಬಸ್‍ಪಾಸ್ ಮಾಡಿಸಿಕೊಂಡು ಬಸ್‍ಗಾಗಿ ನಿಲ್ದಾಣಕ್ಕೆ ಬಂದರೆ ಸೂಕ್ತ ಸಮಯಕ್ಕೆ ಬಸ್ ಬರುವುದಿಲ್ಲ, ಬಂದರೆ ಹತ್ತಲು ಸ್ಥಳವಿರದಷ್ಟು ತುಂಬಿ ಹೋಗಿರುತ್ತದೆ ಇದರಿಂದ ರೋಸಿ ಹೋದ ವಿದ್ಯಾರ್ಥಿಗಳು ಬುಧವಾರ ತಾಲೂಕಿನ ಶಾಂತನಹಳ್ಳಿ ಗೇಟ್‍ನಲ್ಲಿ ಬಸ್ ತಡೆದು ಅಧಿಕಾರಿಗಳು ಬರುವವರೆಗೂ ಬಸ್ ಬಿಡುವುದಿಲ್ಲವೆಂದು ಧರಣಿ ಕುಳಿತರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಮತ್ತೊಂದು ಬಸ್ ಕಳಿಸಿದ ಕೆಎಸ್‍ಆರ್‍ಟಿಸಿ ಅಧಿಕಾರಿಗಳು ಸದ್ಯಕ್ಕೆ ವಿದ್ಯಾರ್ಥಿಗಳ ಮತ್ತು ಪೋಷಕರ ಪ್ರತಿಭಟನೆಯನ್ನು ತಡೆದು ತಿಪ್ಪೆ ಸಾರಿಸಿದ್ದಾರೆ.

ಪಾಸ್ ವಿತರಿಸಿದ್ದೆ ವಿತರಿಸಿದ್ದು ಬಸ್ಸುಗಳೇ ಇಲ್ಲ : ತಾಲೂಕಿನಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ 6,000 ಕ್ಕಿಂತಲೂ ಹೆಚ್ಚು ಬಸ್‍ಪಾಸ್ ವಿತರಿಸಲಾಗಿದೆ. ಆದರೇ ಇಷ್ಟೂ ವಿದ್ಯಾರ್ಥಿಗಳು ಸಂಚರಿಸಲು ಸಾಧ್ಯವಾಗುವಷ್ಟು ಬಸ್‍ಗಳು ತಿಪಟೂರು ವಿಭಾಗದಲ್ಲಿವೆಯೇ ಎಂಬುದು ಯಕ್ಷಪ್ರಶ್ನೆಯಾಗಿದೆ. ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ತಿಪಟೂರು ವಿಭಾಗದ ಬಸ್‍ಗಳು ಜನ ಸಂಖ್ಯೆ ಮತ್ತು ವಿದ್ಯಾರ್ಥಿಗಳಿಗೆ ತಕ್ಕಂತೆ ಹೆಚ್ಚು ಸಂಚರಿಸದೇ ಇರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ.

 

ಬೆಂಕಿ ಪೊಟ್ಟಣದಂತೆ ತುಂಬುವ ಬಸ್‍ಗಳು : ಶಾಲಾ-ಕಾಲೇಜು ಹಾಗೂ ಟ್ಯೂಷನ್‍ಗಳು ಬೆಳಗ್ಗೆಯೇ ಆರಂಭವಾಗುತ್ತವೆ ಆದರೇ ಮುಂಜಾನೆ ವೇಳೆ ಗ್ರಾಮೀಣ ಮಾರ್ಗದಲ್ಲಿ ಕೇವಲ ಒಂದೊಂದು ಬಸ್‍ಗಳಿರುತ್ತವೆ. ಉದಾಹರಣೆಗೆ ತಾಲ್ಲೂಕಿನ ಅರಳಗುಪ್ಪೆ, ಶಾಂತನಹಳ್ಳಿ ಮಾರ್ಗದಲ್ಲೂ ಬೆಳಗ್ಗೆ ಒಂದು ಬಸ್ ಸಂಚರಿಸಲಿದ್ದು, ಬಸ್ ಅರಳಗುಪ್ಪೆಯಲ್ಲಿಯೆ ತುಂಬುತ್ತದೆ ಇನ್ನೂ ಶಾಂತನಹಳ್ಳಿ ಗೇಟ್, ಶಾಂತನಹಳ್ಳಿ, ಹಿಂಡಿಸ್ಕೆರೆ ಮುಂತಾದ ಗ್ರಾಮದ ವಿದ್ಯಾರ್ಥಿಗಳು ಬಸ್ ಹತ್ತಲು ಸ್ಥಳವೇ ಇರುವುದಿಲ್ಲ.

ಅಪ್ರಾಪ್ತರ ವಾಹನ ಚಾಲನೆಗೆ ಕೆಎಸ್‍ಆರ್‍ಟಿಸಿ ಕಾರಣ…? : ಅಸಮರ್ಪಕ ಬಸ್ ಸಂಚಾರದಿಂದಾಗಿ ಜನ ರೋಸಿ ಹೋಗಿದ್ದು, ಬೈಕ್ ಕೊಟ್ಟರೆ ಸೂಕ್ತ ಸಮಯಕ್ಕೆ ಶಾಲೆಗೆ ಹೋಗಬಹುದು ಎಂದು ಪೋಷಕರು ತಮ್ಮ ಮಕ್ಕಳಿಗೆ ಬೈಕ್ ಕೊಡಿಸುತ್ತಾರೆ. ಆದರೆ ಮನೆಯಿಂದ ಹೊರಗೆ ಬಂದ ತಕ್ಷಣ ವಿದ್ಯಾರ್ಥಿಗಳು ಸ್ನೇಹ ಮತ್ತು ಸಹಾಯದ ಮನೋಭಾವದಿಂದ ತನ್ನ ಬಸ್ ಇಲ್ಲದ ಸ್ನೇಹಿತರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ. ಅಲ್ಲದೇ ತಾರುಣ್ಯಾವಸ್ಥೆಯಲ್ಲಿರುವ ವಿದ್ಯಾರ್ಥಿಗಳು ಹುಂಬುತನ, ಸಾಹಸದ ಮನೊಭಾವದಿಂದ ಹೆಚ್ಚು ವೇಗವಾಗಿ ಬೈಕ್ ಓಡಿಸಿಕೊಂಡು ಹೋಗುತ್ತಾರೆ. ಇಂತಹ ಸಂದರ್ಭದಲ್ಲಿ ಪ್ರಾಣಾಪಾಯವಾಗುವ ಸಂಭವವು ಹೆಚ್ಚಾಗಿಯೇ ಇರುತ್ತದೆ. ಈ ನಡುವೆ ಸೂಕ್ತ ಸಮಯಕ್ಕೆ ಬಸ್ ಬಂದರೇ ಪೋಷಕರು ತಮ್ಮ ಮಕ್ಕಳ ಕೈಗೆ ಬೈಕ್ ಏಕೆ ಕೊಡುತ್ತಾರೆ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಆದ್ದರಿಂದ ಅಪ್ರಾಪ್ತರು ವಾಹನ ಓಡಿಸಲು ಕೆಎಸ್‍ಆರ್‍ಟಿಸಿಯೇ ನೇರ ಕಾರಣವಾಗಿದೆ ಎನ್ನಬಹುದು.

ಅಕ್ಷರ ಕಲಿಯಲು ಹೊರಟವರು ಅಫಘಾತ ಮಾಡಿಕೊಳ್ಳುವ ಮುನ್ನ ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕರು ಎಚ್ಚೆತ್ತು, ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಗ್ರಾಮೀಣ ಮಾರ್ಗದಲ್ಲಿ ಹೆಚ್ಚುವರಿಯಾಗಿ ಬಸ್‍ಗಳನ್ನು ಓಡಿಸಿ ಜ್ಞಾನ ಅರಸಿ ನಗರಕ್ಕೆ ಬರುವ ವಿದ್ಯಾರ್ಥಿಗಳಿಗೆ ಒಳ್ಳೆಯದನ್ನು ಮಾಡಲಿ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ನಮ್ಮ ತಂದೆ ತಾಯಿಗಳು ನನಗೆ ಒಳ್ಳೆಯ ವಿದ್ಯಾಭ್ಯಾಸ ಸಿಗಲಿ ಎಂಬ ದೃಷ್ಠಿಯಿಂದ ಕಷ್ಟಪಟ್ಟು ಬೆಳಗ್ಗೆಯೆ ಊಟ-ತಿಂಡಿ ಮಾಡಿಕೊಟ್ಟು ನಗರಕ್ಕೆ ಕಳುಹಿಸುತ್ತಾರೆ. ಆದರೆ ನಮಗೆ ಸೂಕ್ತ ಬಸ್‍ಗಳೇ ಸಿಗದೇ ಶಾಲೆಗೆ ಹೋಗಲು ತಡವಾದಾಗ ನಮ್ಮ ಜೊತೆ ಅವರು ದುಖ: ಪಡುತ್ತಾರೆ. ಆದ್ದರಿಂದ ಸಿಕ್ಕ ಯಾವುದೇ ವಾಹನಗಳಲ್ಲಿ ಶಾಲೆಗೆ ಹೋಗುತ್ತೇವೆ.

-ನೊಂದ ವಿದ್ಯಾರ್ಥಿನಿ

ಶಾಂತನಹಳ್ಳಿಯ ಕೂಡುರಸ್ತೆಯಲ್ಲಿ ನಿತ್ಯವೂ ವಿದ್ಯಾರ್ಥಿಗಳೂ ಬಸ್‍ಗಾಗಿ ಕಾಯುತ್ತಿರುತ್ತಾರೆ. ಆದರೆ ಬಸ್ ತುಂಬಿರುವ ಕಾರಣ ಅವರು ಹತ್ತಲು ಸಾಧ್ಯವಾಗುವುದಿಲ್ಲ. ಹಾಗಾಗಿ ಬಸ್ ತಡೆದು ಪ್ರತಿಭಟಿಸಿದ್ದೇವೆ.

-ಹರೀಶ್, ಪೋಷಕರು, ಶಾಂತನಹಳ್ಳಿ ಕೂಡುರಸ್ತೆ

ಆಯರಳ್ಳಿಯ ಬಸ್ ಅರಳಗುಪ್ಪೆಗೆ ಹೋಗದೇ ಆಯರಳ್ಳಿಯಿಂದಲೇ ಹಿಂದಿರುಗುವಂತೆ ತಿಳಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಬಸ್‍ನಲ್ಲಿ ಸ್ಥಳಾವಕಾಶ ದೊರೆಯುತ್ತದೆ.

-ಬಸ್ ಘಟಕದ ವ್ಯವಸ್ಥಾಪಕರು, ತಿಪಟೂರು

ಎಳೆಯರ ಜೀವಕ್ಕೆ ಯಾರು ಹೊಣೆ…? : ಬಸ್ ಅವ್ಯವಸ್ಥೆಯಿಂದಾಗಿ ಶಾಲಾ-ಕಾಲೇಜು ತರಗತಿ ತಪ್ಪಿಸಿಕೊಳ್ಳಬೇಕಾಗುತ್ತದೆ ಎಂಬ ಆತಂಕದಲ್ಲಿ ವಿದ್ಯಾರ್ಥಿಗಳು ಸಿಕ್ಕ ಸಿಕ್ಕವಾಹನಗಳಲ್ಲಿ ಅದರಲ್ಲೂ ದ್ವಿಚಕ್ರವಾಹನ ಚಲಾನೆ ಮಾಡಿಕೊಂಡು ಒಂದೇ ವಾಹನದಲ್ಲಿ ಮೂರು ಜನ ಬರುತ್ತಾರೆ. ತರಗತಿಗೆ ಬೇಗ ಹೋಗುವ ಆತಂಕ, ಪೊಲೀಸರ ಭಯದಿಂದ ವಿದ್ಯಾರ್ಥಿಗಳು ವಾಹನ ಚಲಾಯಿಸುವಾಗ ಏನಾದರು ಅಪಾಯವಾದರೆ ಯಾರು ಗತಿ? ಜೊತೆಗೆ ಟಂಟಂ ಆಟೋಗಳಲ್ಲಿ ವಿದ್ಯಾರ್ಥಿಗಳನ್ನು ಕುರಿಗಳಂತೆ ತುಂಬಿಕೊಂಡು ಬರುತ್ತಿದ್ದು, ವಿದ್ಯಾರ್ಥಿಗಳು ಹೇಗೊ ಶಾಲೆಗೆ ಹೋದರೆ ಸಾಕು ಎಂಬಂತೆ ಈ ವಾಹನಗಳನ್ನೆ ಆಶ್ರಯಿಸಿದ್ದಾರೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಅಕ್ಷರ ಅರಸಿ ನಗರಕ್ಕೆ ಬರುವ ವಿದ್ಯಾರ್ಥಿಗಳು ಪ್ರಾಣಾಪಾಯಕ್ಕೆ ಸಿಲುಕುತ್ತಾರೆಂಬುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಸಮಯಕ್ಕೆ ಬಾರದ ಬಸ್ಸು, ತರಗತಿ ಮಿಸ್ಸು : ತುರುವೇಕೆರೆ, ಚನ್ನರಾಯಪಟ್ಟಣ, ಅರಸೀಕೆರೆ ಹಾಗೂ ಕೆ.ಬಿ.ಕ್ರಾಸ್ ಮಾರ್ಗದಲ್ಲಿ ವಿದ್ಯಾರ್ಥಿಗಳಿಗೆ ಬಸ್ ಸಿಗುತ್ತವೆ ಆದರೆ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳ ಬಸ್‍ವ್ಯಥೆ ಹೇಳತೀರದು. ಹುಳಿಯಾರು, ಹೊನ್ನವಳ್ಳಿ, ಹಾಲ್ಕುರಿಕೆ, ಬುರುಡೇಘಟ್ಟ, ಅರಳಗುಪ್ಪೆ, ಗಂಗನಘಟ್ಟ, ದಸರೀಘಟ್ಟ, ಸಣ್ಣೇನಹಳ್ಳಿ, ಗುಂಗರಮಳೆ, ರಂಗಾಪುರ, ಶಿವರ, ಗುರುಗದಹಳ್ಳಿ, ತಡಸೂರು ಮತ್ತಿತರ ಗ್ರಾಮದಲ್ಲಿ ದಿನನಿತ್ಯ ವಿದ್ಯಾರ್ಥಿಗಳು ಸೂಕ್ತ ಸಮಯಕ್ಕೆ ಬಸ್ ಬಂದರೂ ಬಸ್‍ನಲ್ಲಿ ಜಾಗವಿಲ್ಲದೆ ವಿದ್ಯಾರ್ಥಿಗಳು ತರಗತಿ ತಪ್ಪಿಸಿಕೊಳ್ಳುತ್ತಿದ್ದಾರೆಂಬ ದೂರುಗಳು ಬರುತ್ತಿದ್ದು, ಕಳೆದ ಬಾರಿ ರಂಗಾಪುರ ಗ್ರಾಮದಲ್ಲೂ ಬಸ್ ತಡೆಹಿಡಿದ ಘಟನೆಗಳು ಜರುಗಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link