ಚೆನ್ನೈ:
ತಮಿಳು ನಟ ಸೂರ್ಯ ಅವರ ವೈಯಕ್ತಿಕ ಭದ್ರತಾ ಅಧಿಕಾರಿ (ಪಿಎಸ್ಒ) ಗೆ ಅವರ ಮನೆಕೆಲಸದಾಕೆ ಮತ್ತು ಅವರ ಕುಟುಂಬ ಸದಸ್ಯರು 42 ಲಕ್ಷ ರೂ. ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿಗಳು ಚೆನ್ನೈನಾದ್ಯಂತ ಹಲವರಿಗೆ ಮೋಸ ಮಾಡಿದ್ದು, ಒಟ್ಟು ಸುಮಾರು 2 ಕೋಟಿ ರೂ. ವಂಚನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೂರ್ಯ ಅವರ ಮನೆಯಲ್ಲಿ ಮನೆಕೆಲಸ ಮಾಡುತ್ತಿದ್ದ ಸುಲೋಚನಾ ಮತ್ತು ಅವರ ಮಗ ಆ ಅಧಿಕಾರಿ ಆಂಥೋನಿ ಜಾರ್ಜ್ ಪ್ರಭು ಅವರನ್ನು ಹೂಡಿಕೆ ಯೋಜನೆಗೆ ಆಕರ್ಷಿಸಿದ್ದಾರೆ.
ಅವರು ಆರಂಭದಲ್ಲಿ 1 ಲಕ್ಷ ರೂ. ಹೂಡಿಕೆಗೆ ಬದಲಾಗಿ 30 ಗ್ರಾಂ ಚಿನ್ನವನ್ನು ಹಿಂದಿರುಗಿಸಿದ್ದರು. ನಂತರ ಹೆಚ್ಚಿನ ಆಸೆಗೆ ಬಿದ್ದ ಆಂಥೋನಿ ಜಾರ್ಜ್ ಪ್ರಭು ಈ ವರ್ಷದ ಜನವರಿ ಮತ್ತು ಫೆಬ್ರವರಿ ನಡುವೆ ಸುಮಾರು 42 ಲಕ್ಷ ರೂ.ಗಳನ್ನು ವರ್ಗಾಯಿಸಿದರು. ಆದರೆ ಮಾರ್ಚ್ನಲ್ಲಿ ಆರೋಪಿಗಳ ಬಳಿ ಅವರು ಹಣ ಕೇಳಲು ಪ್ರಾರಂಭಿಸಿದರು. ಬಳಿಕ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಜುಲೈನಲ್ಲಿ ಪ್ರಕರಣದ ಕುರಿತು ದೂರು ದಾಖಲಾಗಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿ ಶೋಧ ಕಾರ್ಯಾಚರಣೆ ಆರಂಭಿಸಿದರು. ಒಂದೇ ಕುಟುಂಬದ ನಾಲ್ವರು ಸದಸ್ಯರಾದ ಬಾಲಾಜಿ, ಭಾಸ್ಕರ್, ಸುಲೋಚನಾ ಮತ್ತು ವಿಜಯಲಕ್ಷ್ಮಿ ಅವರನ್ನು ಪತ್ತೆಹಚ್ಚಿ ಬಂಧಿಸಲಾಗಿದೆ.
ವಿಷಯ ಬೆಳಕಿಗೆ ಬಂದ ತಕ್ಷಣ ಸೂರ್ಯ ಮನೆಗೆಲಸದವರನ್ನು ತಕ್ಷಣವೇ ಕೆಲಸದಿಂದ ವಜಾ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸಿದಾಗ ವಂಚಕರು ಹಲವರಿಗೆ ಮೋಸ ಮಾಡಿದ್ದು, ಸುಮಾರು 2 ಕೋಟಿ ರೂ. ವಂಚನೆ ನಡೆದಿದೆ ಎಂದು ತಿಳಿದು ಬಂದಿದೆ. ಘಟನೆ ಕುರಿತು ಸೂರ್ಯ ಈ ವರೆಗೂ ಯಾವುದೇ ಹೇಳಿಕೆ ನೀಡಿಲ್ಲ.
ಇತ್ತೀಚೆಗೆ ಮಾಜಿ ಸಚಿವ ಮತ್ತು ಚಿಕ್ಕಬಳ್ಳಾಪುರದ ಬಿಜೆಪಿ (BJP) ಸಂಸದ ಡಾ. ಕೆ. ಸುಧಾಕರ್ ಅವರ ಪತ್ನಿ ಡಾ. ಪ್ರೀತಿ ಸುಧಾಕರ್ ಅವರು ಸೈಬರ್ ವಂಚನೆಗೆ ಬಲಿಯಾಗಿದ್ದರು. ಮುಂಬೈ ಸೈಬರ್ ಇಲಾಖೆಯ ಅಧಿಕಾರಿಗಳೆಂದು ಹೇಳಿಕೊಂಡು ವಂಚಕರು ಅವರನ್ನು ಡಿಜಿಟಲ್ ಬಂಧನದ ಮೂಲಕ 14 ಲಕ್ಷ ರೂಪಾಯಿ ವಂಚನೆ ನಡೆದಿತ್ತು.
ಆರೋಪಿಗಳು ವೀಡಿಯೊ ಕರೆಯ ಮೂಲಕ ಪ್ರೀತಿ ಸುಧಾಕರ್ ಅವರಿಗೆ ಬೆದರಿಕೆ ಹಾಕಿದ್ದರು. ಡಾ. ಪ್ರೀತಿ ಸುಧಾಕರ್ ಅವರ ದೂರಿನ ನಂತರ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪೊಲೀಸರು ತಕ್ಷಣ ಕ್ರಮ ಕೈಗೊಂಡು ವಂಚನೆಗೊಳಗಾದ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿದ್ದಾರೆ. ಗೋಲ್ಡನ್ ಅವರ್ನಲ್ಲಿ ದೂರು ನೀಡಿದ್ದರಿಂದ 14 ಲಕ್ಷ ರೂ ಹಣ ಕೂಡ ವಾಪಸ್ ಬಂದಿದೆ.
