ಟಿ ಬಿ ಡ್ಯಾಂ ಪರಿಸ್ಥಿತಿ ಪರಿಶೀಲನೆಗೆ ಆಂಧ್ರ ಸಚಿವರ ಭೇಟಿ…!

ಅಮರಾವತಿ: 

  ತುಂಗಾಭದ್ರ ಜಲಾಶಯದ 19ನೇ ಗೇಟ್ ಮುರಿದಿರುವ ಹಿನ್ನೆಲೆಯಲ್ಲಿ ಉಂಟಾಗಿರುವ ಪರಿಸ್ಥಿತಿ ಪರಾಮರ್ಶಿಸಲು ಆಂಧ್ರ ಪ್ರದೇಶದ ಜಲ ಸಂಪನ್ಮೂಲ ಸಚಿವ ನಿಮ್ಮಲ ರಾಮನಾಯ್ಡು ಸೋಮವಾರ ಜಲಾಶಯಕ್ಕೆ ಭೇಟಿ ನೀಡಿದರು.

  ಗೇಟ್ ದುರಸ್ತಿ ಕಾರ್ಯವನ್ನು ಪರಿಶೀಲಿಸಿದ ಸಚಿವರು, ನೂತನ ಗೇಟ್ ಅಳವಡಿಕೆ ಕುರಿತು ಎಂಜಿನಿಯರ್ ಗಳು ಹಾಗೂ ತಜ್ಞರೊಂದಿಗೆ ಮಾತನಾಡಿದರು. ಈ ವೇಳೆ ವಿಶೇಷ ಮುಖ್ಯ ಕಾರ್ಯದರ್ಶಿ ಮತ್ತು ಮುಖ್ಯ ಅಭಿಯಂತರರು ಸಚಿವರ ಜೊತೆಗೆ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಜಲಾಶಯದ ಎಂಜಿನಿಯರ್‌ಗಳನ್ನು ಭೇಟಿ ಮಾಡಿದ ಆಂಧ್ರಪ್ರದೇಶದ ತಜ್ಞರ ತಂಡ ಗೇಟ್ ಕೊಚ್ಚಿಹೋಗಿರುವ ಸ್ಥಳದಲ್ಲಿ ತಾತ್ಕಾಲಿಕ ವ್ಯವಸ್ಥೆ ಮತ್ತು ಹೊಸ ಗೇಟ್ ಅಳವಡಿಸುವ ಪ್ರಯತ್ನದ ಕುರಿತು ಚರ್ಚಿಸಿತು.

  ವಿನ್ಯಾಸ ವಿಭಾಗದ ಮುಖ್ಯ ಇಂಜಿನಿಯರ್ ಟಿ.ಕುಮಾರ್ ನೇತೃತ್ವದ ತಂಡದಲ್ಲಿ ಅಧೀಕ್ಷಕ ಎಂಜಿನಿಯರ್ ಶಿವಕುಮಾರ್ ರೆಡ್ಡಿ ಹಾಗೂ ಕಾರ್ಯಪಾಲಕ ಎಂಜಿನಿಯರ್ ವೇಣುಗೋಪಾಲ್ ರೆಡ್ಡಿ ಇದ್ದಾರೆ. ತುಂಗಭದ್ರಾ ಅಣೆಕಟ್ಟಿನ 19ನೇ ಗೇಟ್ ಆ.10ರಂದು ರಾತ್ರಿ ಕೊಚ್ಚಿ ಹೋಗಿದ್ದು, ಜಲಾಶಯದಲ್ಲಿ ಪ್ರವಾಹದ ಪ್ರಮಾಣ ತಗ್ಗಿದ ಹಿನ್ನೆಲೆಯಲ್ಲಿ ಕ್ರೆಸ್ಟ್ ಗೇಟ್ ಗಳನ್ನು ಮುಚ್ಚುವ ವೇಳೆ ಈ ಘಟನೆ ನಡೆದಿದೆ. 

   ಘಟನೆಯ ನಂತರ, ಮುರಿದ ಗೇಟ್‌ನ ಒತ್ತಡವನ್ನು ಕಡಿಮೆ ಮಾಡಲು ಎಲ್ಲಾ 33 ಕ್ರೆಸ್ಟ್ ಗೇಟ್‌ಗಳನ್ನು ತೆರೆದು ನೀರನ್ನು ನದಿಗೆ ಬಿಡಲಾಗಿದೆ. ಭಾನುವಾರ ಒಂದು ಲಕ್ಷ ಕ್ಯೂಸೆಕ್ಸೂ ಗೂ ಹೆಚ್ಚಿನ ನೀರು ಬಿಡಲಾಗಿದೆ. ಇದರಿಂದಾಗಿ ಅವಿಭಜಿತ ಕರ್ನೂಲ್ ಜಿಲ್ಲೆಯ ತಗ್ಗು ಪ್ರದೇಶಗಳಲ್ಲಿ ಆಂಧ್ರ ಪ್ರದೇಶ ಸರ್ಕಾರ ಅಲರ್ಟ್ ಘೋಷಿಸಿದೆ.
   ಜನರು ನದಿಗೆ ಇಳಿಯದಂತೆ ಜಲಾಶಯದ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಜನರು ಎಚ್ಚರಿಕೆ ವಹಿಸುವಂತೆ ಸಚಿವ ರಾಮನಾಯ್ಡು ಹಾಗೂ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ. ಕೌತಾಳಂ, ಕೋಸಿಗಿ, ಮಂತ್ರಾಲಯ ಮತ್ತು ನಂದಾವರಂ ಮಂಡಲದ ಜನರಿಗೆ ಎಚ್ಚರಿಕೆ ನೀಡಲಾಗಿದೆ.
   ಶ್ರೀಶೈಲಂ, ನಾಗಾರ್ಜುನ ಸಾಗರ ಮತ್ತು ಪುಲಿಚಿಂತಲ ಯೋಜನೆಗಳ ಅಧಿಕಾರಿಗಳಿಗೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದರು. ಇಂಜಿನಿಯರ್‌ಗಳ ಪ್ರಕಾರ, 60 ಟಿಎಂಸಿ ನೀರು ಬಂದ ನಂತರವೇ ದುರಸ್ತಿ ಕಾರ್ಯ ಪ್ರಾರಂಭಿಸಬಹುದು. ಶ್ರೀಶೈಲಂ, ನಾಗಾರ್ಜುನ ಸಾಗರ ಮತ್ತು ಪುಳಿಚಿಂತಲ ಜಲಾಶಯಗಳು ಈಗಾಗಲೇ ಬಹುತೇಕ ಭರ್ತಿಯಾಗಿದ್ದು, ಮೇಲ್ದಂಡೆಯಿಂದ ಅಪಾರ ಪ್ರಮಾಣದ ಒಳಹರಿವಿನಿಂದ ಗೇಟ್‌ಗಳನ್ನು ತೆರೆಯಲಾಗಿದ್ದು, ತುಂಗಭದ್ರಾ ಕ್ರೆಸ್ಟ್ ಗೇಟ್ ಕೊಚ್ಚಿಹೋಗಿರುವುದರಿಂದ ಹರಿಯುತ್ತಿರುವ ಪ್ರವಾಹದ ನೀರು ಸಮುದ್ರಕ್ಕೆ ಸೇರುತ್ತಿದೆ.
   ಕಳೆದ 70 ವರ್ಷಗಳಲ್ಲಿ ತುಂಗಭದ್ರಾದಲ್ಲಿ ಇಂತಹ ಘಟನೆ ನಡೆದಿರುವುದು ಇದೇ ಮೊದಲು ಎನ್ನಲಾಗಿದೆ. ಈ ಜಲಾಶಯ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದ ರಾಯಲಸೀಮಾ ಪ್ರದೇಶಗಳ ಕುಡಿಯುವ ಮತ್ತು ನೀರಾವರಿ ನೀರಿನ ಅಗತ್ಯಗಳನ್ನು ಪೂರೈಸುತ್ತದೆ.