ಹೊಸಪೇಟೆ:
ತುಂಗಭದ್ರಾ ಜಲಾಶಯದ ಎಲ್ಲಾ 33 ಕ್ರೆಸ್ಟ್ ಗೇಟ್ಗಳನ್ನು ಬದಲಾಯಿಸಲು ಮುಂದಾಗಿರುವ ಸರ್ಕಾರಕ್ಕೆ ರಾಜ್ಯದ ಮೂರು ಪ್ರಮುಖ ಉಕ್ಕಿನ ಕಾರ್ಖಾನೆಗಳು ಸಾಥ್ ನೀಡಲು ಮುಂದೆ ಬಂದಿವೆ.ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿರುವ ಜೆಎಸ್ಡಬ್ಲ್ಯು ಉಕ್ಕಿನ ಕಾರ್ಖಾನೆ, ನಾರಾಯಣ ಮತ್ತು ಹಿಂದೂಸ್ತಾನ್ ಇಂಜಿನಿಯರಿಂಗ್ ವರ್ಕ್ಸ್ ಕಾರ್ಖಾನೆಗಳು ಕ್ರೆಸ್ಟ್ ಗೇಟ್ ಬದಲಾವಣೆ ಯೋಜನೆಗೆ ಕಬ್ಬಿಣ ಒದಗಿಸಲಿವೆ ಎಂದು ಮೂಲಗಳು ತಿಳಿಸಿವೆ.
ಆಗಸ್ಟ್ 10 ರಂದು ಅಣೆಕಟ್ಟಿನ ಕ್ರೆಸ್ಟ್ ಗೇಟ್ ಒಡೆದು ನೀರಿನಲ್ಲಿ ಕೊಚ್ಚಿಹೋದ ಘಟನೆಯ ನಂತರ ತಜ್ಞರ ತಂಡ ತಾತ್ಕಾಲಿಕ ಸ್ಟಾಪ್ಲಾಗ್ ಗೇಟ್ ಅಳವಡಿಸಿತ್ತು. ನಂತರ ಒಂದು ವಾರದಲ್ಲಿ ಕ್ರೆಸ್ಟ್ ಗೇಟ್ ನ್ನು ಮರುಸ್ಥಾಪನೆ ಮಾಡಲಾಯಿತು. ಇದೀಗ ಸರ್ಕಾರ ಎಲ್ಲಾ 33 ಕ್ರೆಸ್ಟ್ ಗೇಟ್ ಗಳನ್ನು ಬದಲಾಯಿಸಲು ಮುಂದಾಗಿದ್ದು, ಈ ಯೋಜನೆಗೆ ಮೂರು ಕಾರ್ಖಾನೆಗಳು ಸಹಾಯ ಹಸ್ತ ಚಾಚಿವೆ.
ಕೆಲ ದಿನಗಳ ಹಿಂದಷ್ಟೇ ಜಲಾಶಯಕ್ಕೆ ಬಾಗಿನ ಅರ್ಪಿಸುವ ವೇಳೆ ಮಾತಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕ್ರೆಸ್ಟ್ ಗೇಟ್ ಅಳವಡಿಕೆ ಕಾಮಗಾರಿಯನ್ನು ಶೀಘ್ರ ಆರಂಭಿಸಲಾಗುವುದು ಎಂದು ರೈತರಿಗೆ ಭರವಸೆ ನೀಡಿದ್ದರು. ಈ ವರ್ಷಾಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಅವರೂ ಘೋಷಿಸಿದ್ದರು.
ಟಿಬಿ ಅಣೆಕಟ್ಟು ಮಂಡಳಿಯ ಹಿರಿಯ ಅಧಿಕಾರಿ ಮಾತನಾಡಿ, ತುಂಗಭದ್ರಾ ಅಣೆಕಟ್ಟಿನ ಪ್ರಸ್ತುತ ಸ್ಥಿತಿಯ ಬಗ್ಗೆ ಅಧ್ಯಯನ ನಡೆಸಲು ಸಮಿತಿಯನ್ನು ರಚಿಸಲಾಗಿತ್ತು. ಸಮತಿಯು ವರದಿಯನ್ನು ಸಲ್ಲಿಸಿದ್ದು, ವರದಿಯ ಪ್ರಕಾರ, ಅಣೆಕಟ್ಟಿಗೆ ಹೊಸ ಕ್ರೆಸ್ಟ್ ಗೇಟ್ಗಳನ್ನು ಅಳವಡಿಸುವ ಅಗತ್ಯವಿದೆ ಎಂದು ತಿಳಿಸಿದೆ ಎಂದು ಹೇಳಿದ್ದಾರೆ.
ಟಿಬಿ ಅಣೆಕಟ್ಟಿನ ಕ್ರೆಸ್ಟ್ ಗೇಟ್ ಸಂಖ್ಯೆ 19 ಒಡೆದ ನಂತರ ಮೂರು ಕಂಪನಿಗಳಾದ ಜೆಎಸ್ಡಬ್ಲ್ಯೂ ಸ್ಟೀಲ್ ಪ್ಲಾಂಟ್, ನಾರಾಯಣ ಮತ್ತು ಹಿಂದೂಸ್ತಾನ್ ಎಂಜಿನಿಯರಿಂಗ್ ವರ್ಕ್ಸ್ ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದವು. ಈ ಕಂಪನಿಗಳ 24×7 ಕೆಲಸ ತಾತ್ಕಾಲಿಕ ಸ್ಟಾಪ್ಲಾಗ್ ಗೇಟ್ ಸ್ಥಾಪಿಸಲು ಸಹಾಯ ಮಾಡಿತು. ಕೆಲಸವು ಒಂದು ವಾರದಲ್ಲಿ ಪೂರ್ಣಗೊಂಡಿತ್ತು. ಇದೀಗ ಉಳಿದ ಕ್ರೆಸ್ಟ್ ಗೇಟ್ ಬದಲಾವಣೆಗೆ ಸಹಾಯ ಹಸ್ತ ಚಾಚಿವೆ. ಹೊಸ ಕ್ರೆಸ್ಟ್ ಗೇಟ್ ಗಳನ್ನು ಇತ್ತೀಚಿನ ತಂತ್ರಜ್ಞಾನದ ಪ್ರಕಾರ ನಿರ್ಮಿಸಲಾಗುವುದು ಎಂದು ತಿಳಿಸಿದರು.