ತುಮಕೂರು ವಿವಿಯನ್ನು ಬೆಳೆಸುವುದು ನಮ್ಮೆಲ್ಲರ ಹೊಣೆ : ಡಾ. ಜಿ.ಪರಮೇಶ್ವರ

ತುಮಕೂರು 

   ತುಮಕೂರು ವಿಶ್ವವಿದ್ಯಾನಿಲಯ‌ ಅಭಿವೃದ್ಧಿಗೆ ಆರ್ಥಿಕ ಶಕ್ತಿಯನ್ನು ನೀಡಲಾಗುವುದು ಎಂದು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಹೇಳಿದರು.

   ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹ ಸೊಸೈಟಿ ವತಿಯಿಂದ ಬಿದರಕಟ್ಟೆಯಲ್ಲಿರುವ ತುಮಕೂರು ವಿಶ್ವವಿದ್ಯಾನಿಲಯದ ಜ್ಞಾನಸಿರಿ ಕ್ಯಾಂಪಸ್ ಆವರಣದಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ‘ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರ’ದ ಉದ್ಘಾಟನೆಯನ್ನು ನೆರವೇರಿಸಿದ ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

   ಜಿಲ್ಲೆಗೊಂದು ವಿಶ್ವವಿದ್ಯಾಲಯ ಎಂಬ ಪರಿಕಲ್ಪನೆ ಇಟ್ಟುಕೊಂಡು ದೇಶದಲ್ಲೇ ಮೊದಲ ಬಾರಿಗೆ ತುಮಕೂರು ವಿಶ್ವದ್ಯಾಲಯ ಸ್ಥಾಪಿಸಲಾಯಿತು. ಆಧುನಿಕ ವಿಜ್ಞಾನ ವಿಶ್ವವಿದ್ಯಾಲಯವಾಗಬೇಕು ಎಂಬ ಚಿಂತನೆ ಇಟ್ಟುಕೊಂಡು ಸ್ಥಾಪಿಸಲಾಯಿತು. ರಾಜ್ಯ ಮತ್ತು ದೇಶದಲ್ಲಿ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಪಟ್ಟ ವಿವಿ ಆಗಬೇಕು ಎಂಬುದು ನನ್ನ ಉದ್ದೇಶವಾಗಿತ್ತು. ಆದರೆ, ಸಾಮಾನ್ಯ ವಿಶ್ವವಿದ್ಯಾಲಯವಾಗಿದೆ. ತುಮಕೂರು ವಿಶ್ವವಿದ್ಯಾನಿಲಯ ನಗರದಿಂದ ದೂರ ಆಗಿದೆ ಎಂಬುದನ್ನು ಹೊರತುಪಡಿಸಿದರೆ, ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದೆ. ಇದನ್ನು ಬೆಳೆಸುವುದು ನಮ್ಮೆಲ್ಲರ ಹೊಣೆ ಎಂದು ಅವರು ಹೇಳಿದರು.

    ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆಗೆ 2016ರಲ್ಲಿ ಮಂಜೂರಾಗಿತ್ತು. ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ಬಿಡುಗಡೆ ನಿರ್ಮಿಸಲಾಗಿದೆ. ಇದು ವಿದ್ಯಾರ್ಥಿಗಳ ಕಲಿಕೆಗೆ ಉಪಯೋಗವಾಗಲಿದೆ ಎಂದರು.ತುಮಕೂರಿನಲ್ಲಿ ಸೈನ್ಸ್ ಸಿಟಿ ಸ್ಥಾಪಿಸುವ ಪ್ರಸ್ತಾವನೆಯನ್ನು ಇಟ್ಟುಕೊಂಡಿದ್ದೆ. ಅದು ಟೆಕ್ನಿಕಲಿ ಸಾಧ್ಯವಾಗುವುದಿಲ್ಲ ಎಂಬುದು ಗೊತ್ತಾಯಿತುಮ ಅದರ ಭಾಗವಾಗಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.

   ಭಾರತದ ಪ್ರತಿಯೊಬ್ಬ ಪ್ರಜೆ ವೈಜ್ಞಾನಿಕ ಚಿಂತನೆ ಹೊಂದಿರಬೇಕು ಎಂದು ಡಾ. ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಹೇಳಿದ್ದಾರೆ. ಪ್ರಕೃತಿ ಮತ್ತು ಸಮಾಜದಲ್ಲಿ ಅನೇಕ ಘಟನಾವಳಿಗಳು‌ ನಡೆಯುತ್ತವೆ. ನಾವು ಗಮನಿಸುವುದಿಲ್ಲ. ಇವೆರಡನ್ನು ಹೊಂದಾಣಿಕೆ ಮಾಡಿ ಸೂಕ್ಷ್ಮವಾಗಿ ಗಮನಿಸಿದರೆ ಅನೇಕ ವಿಚಾರಗಳು ನಮಗೆ ಬರುತ್ತವೆ. ವಿಜ್ಞಾನದ ಇತಿಹಾಸಕ್ಕೆ ಭಾರತೀಯರು ಹೆಚ್ಚಿನ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.

   21ನೇ ಶತಮಾನ ಕಂಪ್ಯೂಟರ್ ಯುಗ. 1822ರಲ್ಲಿ ಕಂಪ್ಯೂಟಿಂಗ್ ಮಾಡಲಾಗುತ್ತದೆ. 1946ರಲ್ಲಿ ಕಂಪ್ಯೂಟಿಂಗ್ ಪರಿಕಲ್ಪನೆ ಆರಂಭವಾಗುತ್ತದೆ. ಪ್ರಸ್ತುತ ದಿನಗಳಲ್ಲಿ ಕಂಪ್ಯೂಟರ್ ಇಲ್ಲದೇ ಜಗತ್ತೆ ನಡೆಯುವುದಿಲ್ಲ ಎಂಬಾಂತಾಗಿದೆ. ಕೃತಕ ಬುದ್ಧಿಮತ್ತೆ (ಎಐ) ಬಗ್ಗೆ ನಾವೆಲ್ಲ ಈಗ ಮಾತನಾಡುತ್ತಿದ್ದೇವೆ. ಕಂಪ್ಯೂಟರ್ ಆರಂಭದಿಂದಲೂ ಎಐ ಇದೆ. ಎಐ ತಂತ್ರಾಂಶವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲಾಗಿದೆ. ಯುವ ಪೀಳಿಗೆ ಆಧುನಿಕ ಜಗತ್ತಿನ ಜೊತೆಯಲ್ಲಿ ಜೀವನ ನಡೆಸಬೇಕಿದೆ. ವಿಜ್ಞಾನದ ಬಗ್ಗೆ ಹೆಚ್ಚಿನ ಜ್ಞಾನ ಪಡೆದುಕೊಳ್ಳಬೇಕು ಎಂದು ಹೇಳಿದರು

   ಇಡೀ ವಿಶ್ವದಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಪೊಲೀಸ್ ಪೇದೆಯು ಸೈಬರ್ ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳಬೇಕಿದೆ. ಇಲ್ಲವಾದರೆ ಅಪರಾಧಿಗಳನ್ನು ಪತ್ತೆಹಚ್ಚಲು ಸಾಧ್ಯವಾಗುವುದಿಲ್ಲ. ಹೀಗಾಗಿ ಪೇದೆಗಳಿಗೆ ಸೈಬರ್ ತಂತ್ರಜ್ಞಾನದ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಸಮಾಜದಲ್ಲಿ ಪ್ರತಿಯೊಬ್ಬರು ಸಹ ಎಐ, ಕಂಪ್ಯೂಟರ್ ಜ್ಞಾನ ಹೊಂದವುದು ಆಧುನಿಕ ಜಗತ್ತಿನ ಆದ್ಯತೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಅಭಿವೃದ್ಧಿ ಪರಿಶೀಲನೆ:-

   ಉಸ್ತುವಾರಿ ಸಚಿವರಾದ ಪರಮೇಶ್ವರ ಅವರು ಬಿದರಕಟ್ಟೆಯಲ್ಲಿರುವ ಜ್ಞಾನಸಿರಿ ಕ್ಯಾಂಪಸ್‌ನಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸಣ್ಣ ನೀರಾವರಿ ಸಚಿವರಾದ ಎನ್.ಎಸ್.ಬೋಸರಾಜು, ಶಾಸಕರಾದ ಬಿ.ಸುರೇಶ್‌ಗೌಡ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಸಿಇಒ ಜಿ.ಪ್ರಭು, ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಹಾಗೂ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಅಧ್ಯಕ್ಷರಾದ ಪ್ರೊ. ಎಂ.ವೆಂಕಟೇಶ್ವರಲು, ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ನಾಹಿದಾ ಜಮ್ ಜಮ್ ಅವರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link