ಬೆಂಗಳೂರು ;
ಮಗಳನ್ನು ತಮ್ಮ ಕಸ್ಟಡಿಗೆ ಪಡೆಯುವ ಉದ್ದೇಶದಿಂದ ಖ್ಯಾತ ಧಾರಾವಾಹಿ ಮತ್ತು ಚಲನಚಿತ್ರ ನಟಿ ಚೈತ್ರಾ ಅವರನ್ನು ಪತಿಯೇ ಅಪಹರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಟಿ ಚೈತ್ರಾ ಆರ್. ಮತ್ತು ಹರ್ಷವರ್ಧನ್ 2023 ರಲ್ಲಿ ವಿವಾಹವಾಗಿದ್ದರು. ಆದರೆ ಕಳೆದ ಏಳೆಂಟು ತಿಂಗಳಿಂದ ದಂಪತಿಗಳ ನಡುವೆ ಮನಸ್ತಾಪ ಉಂಟಾಗಿ ಬೇರೆಯಾಗಿದ್ದರು.
‘ವರ್ಧನ್ ಎಂಟರ್ಪ್ರೈಸಸ್’ ಎಂಬ ನಿರ್ಮಾಣ ಸಂಸ್ಥೆ ಹೊಂದಿರುವ ಪತಿ ಹರ್ಷವರ್ಧನ್ ಹಾಸನದಲ್ಲಿ ವಾಸವಿದ್ದರೆ, ತಮ್ಮ ಒಂದು ವರ್ಷದ ಮಗಳೊಂದಿಗೆ ಚೈತ್ರಾ ಅವರು ಬೆಂಗಳೂರಿನ ಮಾಗಡಿ ರಸ್ತೆಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು.
ವಿಚ್ಛೇದನದ ನಂತರವೂ ಚೈತ್ರಾ ಅವರು ನಟನೆಯನ್ನು ಮುಂದುವರಿಸಿದ್ದರು. ಡಿಸೆಂಬರ್ 7 ರಂದು ಚೈತ್ರಾ ಅವರು ಶೂಟಿಂಗ್ಗಾಗಿ ಮೈಸೂರಿಗೆ ಹೋಗುತ್ತಿರುವುದಾಗಿ ಕುಟುಂಬದವರಿಗೆ ತಿಳಿಸಿದ್ದರು. ಆದರೆ, ಇದು ಅವರ ಪತಿ ರೂಪಿಸಿದ್ದ ಸಂಚು ಎಂದು ತಿಳಿದುಬಂದಿದೆ. ದೂರಿನ ಪ್ರಕಾರ, ಹರ್ಷವರ್ಧನ್ ತನ್ನ ಸಹಚರ ಕೌಶಿಕ್ ಎಂಬುವವನಿಗೆ 20,000 ರೂಪಾಯಿ ಮುಂಗಡ ಹಣ ನೀಡಿ ಈ ಕೃತ್ಯಕ್ಕೆ ಸಂಚು ರೂಪಿಸಿದ್ದರು ಎಂಬ ಆರೋಪ ಕೇಳಿಬಂದಿದೆ.
ಕೌಶಿಕ್ ಮತ್ತು ಇನ್ನೊಬ್ಬ ವ್ಯಕ್ತಿ ಸೇರಿ ಶೂಟಿಂಗ್ ನೆಪದಲ್ಲಿ ಚೈತ್ರಾ ಅವರನ್ನು ಬೆಳಿಗ್ಗೆ 8 ಗಂಟೆ ಸುಮಾರಿಗೆ ಮೈಸೂರು ರಸ್ತೆ ಮೆಟ್ರೋ ನಿಲ್ದಾಣದ ಬಳಿ ಕರೆಸಿಕೊಂಡಿದ್ದಾರೆ. ಅಲ್ಲಿಂದ ಅವರನ್ನು ಬಲವಂತವಾಗಿ ಕಾರಿನಲ್ಲಿ ನೈಸ್ ರಸ್ತೆ ಮತ್ತು ಬಿಡದಿ ಮಾರ್ಗವಾಗಿ ಅಪಹರಿಸಿಕೊಂಡು ಹೋಗಿದ್ದಾರೆ ಎಂದು ಚೈತ್ರಾ ಅವರ ಸಹೋದರಿ ಲೀಲಾ ಆರ್. ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ತಮ್ಮ ಮಗಳನ್ನು ತನ್ನ ವಶಕ್ಕೆ ಪಡೆಯಲು ಪತಿ ಈ ರೀತಿ ಕಿಡ್ನ್ಯಾಪ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಸುಮಾರು ಬೆಳಿಗ್ಗೆ 10.30ರ ಹೊತ್ತಿಗೆ ಚೈತ್ರಾ ತಮ್ಮ ಗೆಳೆಯ ಗಿರೀಶ್ ಎಂಬುವವರಿಗೆ ಮಾಹಿತಿ ನೀಡಿದ್ದು, ತಕ್ಷಣವೇ ಚೈತ್ರಾ ಕುಟುಂಬಕ್ಕೆ ಅಪಹರಣದ ವಿಷಯ ಗೊತ್ತಾಗಿದೆ. ಇದಾದ ಮೇಲೆ ಸಂಜೆ ವೇಳೆಗೆ ಚೈತ್ರಾ ತಾಯಿ ಸಿದ್ದಮ್ಮ ಅವರಿಗೆ ಕರೆ ಮಾಡಿದ ಹರ್ಷವರ್ಧನ್, ತಾನೇ ಅಪಹರಣ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಬಳಿಕ, “ನಾನು ಹೇಳುವ ಜಾಗಕ್ಕೆ ಮಗುವನ್ನು ಕರೆದುಕೊಂಡು ಬನ್ನಿ, ಇಲ್ಲದಿದ್ದರೆ ಚೈತ್ರಾಳನ್ನು ಬಿಡುಗಡೆ ಮಾಡುವುದಿಲ್ಲ” ಎಂದು ಬೆದರಿಸಿದರು ಎಂಬ ಆರೋಪ ಕೂಡ ಕೇಳಿಬಂದಿದೆ. ಚೈತ್ರಾ ಅವರ ಸಹೋದರಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ದೂರು ದಾಖಲಾಗಿ, ಕಿಡ್ನಾಪ್ ಪ್ರಕರಣ ದಾಖಲಿಸಿಕೊಂಡಿದ್ದ ಬೆನ್ನಲ್ಲೇ ಪತ್ನಿಯನ್ನು ಮನೆಯವರಿಗೆ ನಿರ್ಮಾಪಕ ಹರ್ಷವರ್ಧನ್ ಅವರು ಒಪ್ಪಿಸಿದ್ದಾರೆ. ಕಾನೂನಿನ ಪ್ರಕಾರ ತನಿಖಾ ಪ್ರಕ್ರಿಯೆ ನಡೆಸಿರುವ ಪೊಲೀಸರು ಆರೋಪಿಯನ್ನ ಕರೆತಂದು ವಿಚಾರಣೆ ನಡೆಸಿದ್ದಾರೆ. ಹರ್ಷವರ್ಧನ್ ಹಾಗೂ ನಟಿ ಚೈತ್ರಾ ಇಬ್ಬರನ್ನೂ ಪೊಲೀಸರು ವಿಚಾರಣೆ ನಡೆದ್ದಾರೆ. ವಿಚಾರಣೆ ವೇಳೆ ಇದು ಕೌಟುಂಬಿಕ ಕಲಹ, ನಾವೇ ಮಾತನಾಡಿಕೊಂಡು ಸರಿ ಮಾಡಿಕೊಳ್ತಿದ್ದೀವಿ” ಎಂದು ದಂಪತಿ ಹೇಳಿಕೊಂಡಿದ್ದಾರೆ. ಸದ್ಯ ಇಬ್ಬರ ಹೇಳಿಕೆ ದಾಖಲಿಸಿಕೊಂಡಿರುವ ಪೊಲೀಸರು, ಮತ್ತೆ ವಿಚಾರಣೆಗೆ ಹಾಜರಾಗಲು ಸೂಚಿಸಿ ಆರೋಪಿಯನ್ನ ಬಿಟ್ಟು ಕಳಿಸಿದ್ದಾರೆ.








