ಹುಬ್ಬಳ್ಳಿ
ವರದಿ : ಕಲ್ಮೇಶ ಮಂಡ್ಯಾಳ
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಬೀದಿ ಬದಿ ವ್ಯಾಪಾರಿಗಳ ಜಿಪಿಆರ್ಎಸ್ ಸಮೀಕ್ಷೆ ನಡೆಸಬೇಕೆಂಬ ಬೇಡಿಕೆ ಈವರೆಗೆ ಈಡೇರಿಲ್ಲ. ಇದರಿಂದ ವ್ಯಾಪಾರಸ್ಥರು ಅಭದ್ರತೆಯ ಆತಂಕದಲ್ಲಿದ್ದಾರೆ.
ಜಿಪಿಆರ್ಎಸ್ ಸಮೀಕ್ಷೆ ಮೂಲಕ ಅವಳಿನಗರದ 24,000ಕ್ಕೂ ಹೆಚ್ಚು ವ್ಯಾಪಾರಿಗಳು, ತಾವು ದಶಕಗಳಿಂದ ವ್ಯಾಪಾರ ನಡೆಸುತ್ತಿರುವ ಸ್ಥಳದಲ್ಲೇ ವ್ಯಾಪಾರ ಮುಂದುವರಿಸಲು ಅವಕಾಶ ಸಿಗುತ್ತದೆ. ವ್ಯಾಪಾರ ಸ್ಥಳ ನಿಗದಿಯಾಗುವುದರಿಂದ ಪದೇ ಪದೇ ತೆರವು ಕಾರ್ಯಾ ಚರಣೆಯಂತಹ ದಬ್ಬಾಳಿಕೆಗೆ ಕಡಿವಾಣ ಬೀಳುತ್ತದೆ ಎಂಬ ವ್ಯಾಪಾರಿಗಳ ಆಶಯ ಕೈಗೂಡಿಲ್ಲ.
‘ವ್ಯಾಪಾರಿಗಳಿಂದ ₹150 ಶುಲ್ಕ ಸಂಗ್ರಹಿಸಿ, ಜಿಪಿಆರ್ಎಸ್ ಸರ್ವೆ ಮಾಡುವಂತೆ ಡೇನಲ್ಮ್ ವ್ಯವಸ್ಥಾಪಕ ನಿರ್ದೇಶಕರು ಸೂಚಿಸಿದ್ದಾರೆ. ಇದರಿಂದ ವ್ಯಾಪಾರ ಮಾಡುತ್ತಿರುವ ಜಾಗದ ಮಾಹಿತಿ ಸಮೀಕ್ಷೆಯಲ್ಲಿ ದಾಖಲಾಗಿ, ಪ್ರಮಾಣಪತ್ರ, ಗುರುತಿನ ಚೀಟಿ ನೀಡಲು ಸಾಧ್ಯವಾಗುತ್ತದೆ. ಈ ಕುರಿತು ನಗರ ವ್ಯಾಪಾರ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ. ಪಾಲಿಕೆ ಆಯುಕ್ತರಿಗೆ ಮನವಿಯನ್ನೂ ಸಲ್ಲಿಸಿದ್ದರೂ ಕೂಡಾ ಇನ್ನು ಯಾವುದೇ ರೀತಿಯ ಕ್ರಮ ಬೆಳವಣಿಗೆ ಆಗಿಲ್ಲ. ಇದರಿಂದಾಗಿ ಬೀದಿ ಬದಿಯ ವ್ಯಾಪಾರಸ್ಥರು ಗೋಳು ಕೇಳತಾ ಇಲ್ಲ ಎನ್ನುವುದು ಬೀದಿ ಬದಿ ವ್ಯಾಪಾರಿ ಮಹೇಶ ಹಂಜಿ ಆತಂಕ ವ್ಯಕ್ತಪಡಿಸಿದರು.
‘ಅತ್ಯಂತ ಹಳೆಯ ಮಾರುಕಟ್ಟೆಗಳಾದ ದುರ್ಗದಬೈಲ್, ಶಾ ಬಜಾರ್, ಬ್ರಾಡ್ವೇಯಲ್ಲಿ ಹಿಂದಿನಿಂದಲೂ ವ್ಯಾಪಾರ ಮಾಡುತ್ತಿರುವವರ ಬಳಿ ತೆರಿಗೆ ಪಾವತಿಸಿದ ದಾಖಲೆಗಳಿವೆ. ಇತ್ತೀಚೆಗೆ ಬೇರೆ ರಾಜ್ಯಗಳಿಂದ ಬಂದವರೂ ಇಲ್ಲಿ ವ್ಯಾಪಾರ ಮಾಡುತ್ತಿದ್ದು, ಅವರ ಬಳಿ ಯಾವುದೇ ದಾಖಲೆಗಳಿಲ್ಲ. ಕೆಲವು ಅಂಗಡಿಕಾರರು ತಮ್ಮ ಅಂಗಡಿ ಮುಂದಿನ ಜಾಗದಲ್ಲಿ ವ್ಯಾಪಾರ ಮಾಡಲು ಇಂತಹವರಿಗೆ ಅವಕಾಶ ಮಾಡಿಕೊಟ್ಟು, ಹಣ ವಸೂಲಿ ಮಾಡುತ್ತಿದ್ದಾರೆ. ಸಮೀಕ್ಷೆಯಿಂದ ಇದು ಪತ್ತೆಯಾಗುತ್ತದೆ
‘ಮುಖ್ಯವಾಗಿ, ಪಿಎಂ ಸ್ವನಿಧಿ ಸೇರಿದಂತೆ ಸರ್ಕಾರದ ಯೋಜನೆಗಳು ಅರ್ಹರಿಗೆ ಸೇರಬೇಕು. ಸಮೀಕ್ಷೆ ಮಾಡಿ, ಗುರುತಿನ ಚೀಟಿ ನೀಡಿದರೆ ಅರ್ಹ ವ್ಯಾಪಾರಿಗಳಿಗೆ ಹೆಚ್ಚು ಅನುಕೂಲವಾಗುತ್ತದೆ. ಇನ್ನು ವಿಳಂಬ ಮಾಡದೆ, ಸಮೀಕ್ಷೆ ನಡೆಸಬೇಕಾಗಿದೆ.
‘ಗುತ್ತಿಗೆ ಆಧಾರದಲ್ಲಿ ಶುಲ್ಕ ಸಂಗ್ರಹಿಸುವ ಪದ್ಧತಿ ವಿರೋಧಿಸಿ ಎರಡು ವರ್ಷಗಳಿಂದ ಬೀದಿ ಬದಿ ವ್ಯಾಪಾರಿಗಳು ಶುಲ್ಕ ಪಾವತಿಸಿಲ್ಲ. ಇದರಿಂದ ಪಾಲಿಕೆಗೆ ನಷ್ಟವಾಗಿದೆ. ಗುರುತಿನ ಚೀಟಿ ವಿತರಿಸಿದ ಬಳಿಕ ಪಾಲಿಕೆಯೇ ವಾರ್ಷಿಕ ಶುಲ್ಕ ಸಂಗ್ರಹಿಸಲಿ. ಆ ಹಣದಲ್ಲಿ ವ್ಯಾಪಾರಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲಿ’ ಎಂಬುದು ವ್ಯಾಪಾರಿಗಳ ಆಗ್ರಹವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ