ಮುಂಬೈ:
ಶಿವಸೇನೆಯ ಮೂಲ ಚಿಹ್ನೆಯಾದ ‘ಬಿಲ್ಲು ಬಾಣ’ ವನ್ನು ಶಿಂಧೆ ಬಣಕ್ಕೆ ನೀಡುವ ಮೂಲಕ ಶಿಂಧೆ ಬಣವೇ ನಿಜವಾದ ಶಿವಸೇನೆ ಎಂದು ಗುರುತಿಸಿದ ಒಂದು ದಿನದ ನಂತರ, ಪ್ರತಿಸ್ಪರ್ಧಿ ಪಾಳಯದ ಮುಖ್ಯಸ್ಥರಾದ ಉದ್ಧವ್ ಠಾಕ್ರೆ ಅವರು ಶನಿವಾರ ತಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಸಭೆಯನ್ನು ಕರೆದಿದ್ದು, ಮುಂದಿನ ಕ್ರಮದ ಬಗ್ಗೆ ಚರ್ಚಿಸಲಿದ್ದಾರೆ.
ಶಿವಸೇನೆ ನಾಯಕರು, ಉಪ ನಾಯಕರು, ಚುನಾಯಿತ ಪ್ರತಿನಿಧಿಗಳು ಮತ್ತು ವಕ್ತಾರರ ಸಭೆಯು ಮಧ್ಯಾಹ್ನ ಠಾಕ್ರೆ ಅವರ ಉಪನಗರ ಬಾಂದ್ರಾದಲ್ಲಿರುವ ‘ಮಾತೋಶ್ರೀ’ ನಿವಾಸದಲ್ಲಿ ನಡೆಯಲಿದೆ ಎಂದು ಠಾಕ್ರೆ ಅವರ ಆಪ್ತರು ತಿಳಿಸಿದ್ದಾರೆ.
ಚುನಾವಣಾ ಆಯೋಗವು ಶುಕ್ರವಾರ ‘ಶಿವಸೇನೆ’ ಮತ್ತು ಅದರ ಮೂಲ ಚುನಾವಣಾ ಚಿಹ್ನೆಯಾದ ‘ಬಿಲ್ಲು ಮತ್ತು ಬಾಣ’ವನ್ನು ಸಿಎಂ ಏಕನಾಥ್ ಶಿಂಧೆ ನೇತೃತ್ವದ ಗುಂಪಿಗೆ ಹಂಚಿಕೆ ಮಾಡಿರುವುದು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ತೀವ್ರ ಮುಖಭಂಗವಾಗಿದೆ.
1966ರಲ್ಲಿ ಬಾಳಾಸಾಹೇಬ್ ಠಾಕ್ರೆ ಅವರು ಮಣ್ಣಿನ ಪುತ್ರರಿಗೆ ನ್ಯಾಯ ಎಂಬ ತತ್ವದಡಿ ಸ್ಥಾಪಿಸಿದ ಪಕ್ಷದ ಮೇಲೆ ಠಾಕ್ರೆ ಕುಟುಂಬದ ಹಿಡಿತ ತಪ್ಪಿದ್ದು ಇದೇ ಮೊದಲು.
ಶಿಂಧೆ ಸಲ್ಲಿಸಿದ ಆರು ತಿಂಗಳ ಹಳೆಯ ಅರ್ಜಿಯ ಕುರಿತು ಸರ್ವಾನುಮತದ ಆದೇಶ ನೀಡಿರುವ ತ್ರಿಸದಸ್ಯ ಆಯೋಗವು, ಶಾಸಕಾಂಗ ವಿಭಾಗದಲ್ಲಿ ಪಕ್ಷದ ಸಂಖ್ಯಾ ಬಲವನ್ನು ಅವಲಂಬಿಸಿ ಈ ಆದೇಶವನ್ನು ನೀಡಲಾಗಿದೆ. ಅಲ್ಲಿ 55 ಶಾಸಕರ ಪೈಕಿ 40 ಶಾಸಕರು ಮತ್ತು 18 ಲೋಕಸಭಾ ಸದಸ್ಯರಲ್ಲಿ 13 ಸದಸ್ಯರ ಬೆಂಬಲವನ್ನು ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೊಂದಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ