ಶಿರಾ:
ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಯಲ್ಲಿ 100 ಕೋಟಿ ರೂ ಕಮೀಷನ್ ಪಡೆದಿದ್ದೇನೆಂದು ಕಾಂಗ್ರೆಸ್ ಮುಖಂಡರೊಬ್ಬರು ನನ್ನ ವಿರುದ್ಧ ಆರೋಪ ಮಾಡಿದ್ದು ಈ ಆರೋಪದಲ್ಲಿ ಯಳ್ಳಷ್ಟು ಹುರುಳಿಲ್ಲ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ಗೌಡ ತಿಳಿಸಿದರು.
ತಾಲೂಕಿನ ಕಗ್ಗಲಡು ಗ್ರಾಮದಲ್ಲಿ ನಡೆದ ಶಿರಾ-ಚಂಗಾವರ ರಸ್ತೆಯ ಡಾಂಬರೀಕರಣ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಶಿರಾದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಪಕ್ಷದ ಸಭೆಯೊಂದರಲ್ಲಿ ಪಕ್ಷದ ಮುಖಂಡ ಜಿ.ಎಸ್.ರವಿ ಶಾಸಕರ ವಿರುದ್ಧ ಕಮೀಷನ್ ಆರೋಪ ಮಾಡಿರುವ ಬಗ್ಗೆ ಶಾಸಕರು ಅವರ ಹೇಳಿಕೆಯನ್ನು ಖಂಡಿಸಿದರು.ಭದ್ರಾ ಮೇಲ್ದಂಡೆ ಯೋಜನೆಯು ಬಿ.ಜೆ.ಪಿ. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ 5,300 ಕೋಟಿ ರೂ ವೆಚ್ಚದ ಈ ಯೋಜನೆಯನ್ನು ಪಾರದರ್ಶಕತೆಯ ರೂಪದಲ್ಲಿ ಜಾರಿಗೊಳಿಸಲಾಗಿದೆ ಎಂದರು.
ಈ ಹಿಂದೆ ಅವರದೇ ಪಕ್ಷದ ಮುಖಂಡರು ಸಚಿವರಾಗಿದ್ದಾಗ ನಗರೋತ್ಥಾನ ಯೋಜನೆಯಲ್ಲಿ ವ್ಯಾಪಕ ಅವ್ಯವಹಾರಗಳಾಗಿವೆ. 25 ಕೋಟಿ ರೂ ವೆಚ್ಚದ ಈ ಯೋಜನೆ ಸಮರ್ಪಕವಾಗಿ ಅನುಷ್ಠಾನ ಗೊಳ್ಳದಿದ್ದರೂ ಬಿಲ್ ಪಾವತಿಸಲಾಗಿದೆ. ಶಿರಾದ ಅನೇಕ ವಾಡ್ಗಳಲ್ಲಿ ಕಾಮಗಾರಿ ನಡೆಯದಿದ್ದರೂ ಬಿಲ್ ಪಾವತಿಯಾಗಿವೆ ಎಂದು ಆರೋಪಿಸಿದರು.
6 ಬಾರಿ ಕಳ್ಳಂಬೆಳ್ಳ ಕ್ಷೇತ್ರದಲ್ಲಿ ಶಾಸಕರು, ಸಚಿವರಾಗಿದ್ದ ಅವರ ಮುಖಂಡರು ಯಾವ ಅಭಿವೃದ್ಧಿ ಮಾಡಿದ್ದಾರೆಂಬುದು ಕ್ಷೇತ್ರದ ಜನತೆಗೆ ಗೊತ್ತು ಎಂದು ಪರೋಕ್ಷವಾಗಿ ಜಯಚಂದ್ರ ಅವರನ್ನು ಕುಟುಕಿದ ಶಾಸರು ಶಿರಾ ಕ್ಷೇತ್ರದಲ್ಲಿ ಕಳೆದ 2 ವರ್ಷಗಳ ಅವಧಿಯಲ್ಲಿ ಆಗಿರುವ ಅಭಿವೃದ್ಧಿಯನ್ನು ಸಹಿಸಲಾಗದೆ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆಂದರು.ಬಿ.ಜೆ.ಪಿ. ಪಕ್ಷದ ಮುಖಂಡರಾದ ಮದ್ದೇವಳ್ಳಿ ರಾಮಕೃಷ್ಣ, ಮೂರ್ತಿ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2023/03/sira-photo-number-79.3.jpg)