ತುಮಕೂರು :
ಸದ್ಯ ಸಿಎಂ ಬಿಎಸ್ವೈ ಬದಲಾವಣೆ ರಾಜಕೀಯ ಹಂಗಾಮ ರಾಜ್ಯದಲ್ಲಿ ನಡೆಯುತ್ತಿದ್ದು, ಸರಕಾರ ಪತನಗೊಂಡರೆ ಕಾಂಗ್ರೆಸ್ ಮಧ್ಯಂತರ ಚುನಾವಣೆ ಎದುರಿಸಲು ಸಿದ್ಧವಿದೆ ಎಂದು ಮಾಜಿ ಡಿಸಿಎಂ ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಷ್ಟಪಟ್ಟು ಶಾಸಕರನ್ನು ಕೊಂಡು ಮುಖ್ಯಮಂತ್ರಿ ಸ್ಥಾನಕ್ಕೇರಿರುವ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಯುವಂತೆ ನಾವು ಹೇಳುತ್ತಿಲ್ಲ, ಬದಲಾಗಿ ಅವರ ಪಕ್ಷದವರೇ ಸಿಎಂ ಬದಲಾಯಿಸಲು ಹೊರಟಿದ್ದಾರೆ. ಸ್ವಪಕ್ಷೀಯ ಶಾಸಕರು,ಸಂಪುಟ ಸಚಿವರ ವಿಶ್ವಾಸವನ್ನೇ ಸಿಎಂ ಕಳೆದುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಬಿಎಸ್ವೈ ಅವರನ್ನು ಅಧಿಕಾರದಲ್ಲಿ ಮುಂದುವರಿಸಬೇಕೆ ಬೇಡವೇ ಎಂಬುದನ್ನು ಅವರ ಹೈಕಮಾಂಡ್ ತೀರ್ಮಾನಿಸಬೇಕು. ಯಾವುದೇ ಚುನಾವಣೆಗಳನ್ನು ಎದುರಿಸಲು ಕಾಂಗ್ರೆಸ್ ಸಿದ್ಧವಿದೆ ಎಂದು ಪುನರುಚ್ಚರಿಸಿದರು.
ಕಾಂಗ್ರೆಸ್ ಮಾಜಿ ಸಚಿವರಾದ ಎಂ.ಬಿ.ಪಾಟೀಲ್ ಹಾಗೂ ಶಾಮನೂರು ಶಿವಶಂಕರಪ್ಪ ಬಿಎಸ್ವೈ ಬೆಂಬಲಕ್ಕೆ ನಿಂತಿರುವ ಕುರಿತ ಅದು ಅವರ ವೈಯಕ್ತಿಕ ಅಭಿಪ್ರಾಯ ಎಂದ ಪರಮೇಶ್ವರ್ ಅವರು ಯಡಿಯೂರಪ್ಪ ಇನ್ನೂ ಒಂದೂವರೆ ವರ್ಷ ಪೂರ್ಣಾವಧಿ ಅಧಿಕಾರದಲ್ಲಿ ಮುಂದುವರಿಯಬೇಕೆಂಬುದು ನಮ್ಮ ಇಚ್ಚೆಯೂ ಸಹ ಆಗಿದೆ. ಅವರ ಅಧಿಕಾರದಲ್ಲಿ ಮುಂದುವರಿದು ದುರಾಡಳಿತ ನೀಡಿದಷ್ಟು ಕಾಂಗ್ರೆಸ್ ಲಾಭ. ಮುಂದೆ ಉತ್ತಮ ಜನಪರ ಸರಕಾರ ಬರಲು ಸಾಧ್ಯವಾಗುತ್ತದೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಿಎಸ್ವೈ ವಿಚಾರಬೇಕಿಲ್ಲ. ತೈಲಬೆಲೆ, ಅಗತ್ಯ ಬೆಲೆ ಏರಿಕೆ, ಅನಭಿವೃದ್ಧಿ ಹೀಗೆ ಅನೇಕ ವಿಚಾರಗಳಿವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪದೇ ಪದೇ ಮುಖ್ಯಮಂತ್ರಿ ಬದಲಾವಣೆ ಬಿಕ್ಕಟ್ಟಿನಿಂದ ಆಡಳಿತ ಬಿಗಿ ತಪ್ಪಿದ್ದು, ಆಕ್ಸಿಜನ್ ವಿಚಾರವಾಗಿ ಮೈಸೂರು-ಚಾಮರಾಜನಗರ ಡಿಸಿ ರಗಳೆ ಮಾಡಿಕೊಂಡು ಜನರ ಪ್ರಾಣದ ಜೊತೆ ಚೆಲ್ಲಾಟವಾಡಿದ್ದು ಪ್ರಮುಖ ಉದಾಹರಣೆ. ಸರಕಾರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲ. ಜಿಪಂಗೆ 15 ಸಾವಿರ ಕೋಟಿ, ಪಿಡಬ್ಲ್ಯೂಡಿಗೆ 5 ಸಾವಿರ ಕೋಟಿ ಬಾಕಿ ಬರಬೇಕಿದ್ದು, ಎಲ್ಲಾ ಹಂತದಲ್ಲಿ ಬಿಜೆಪಿ ಸರಕಾರ ವಿಫಲವಾಗಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
