ತಿಪಟೂರು :
ಒಂದು ಕಡೆ ಕೋವಿಡ್ ತಾಂಡವ ಇನ್ನೊಂದು ಕಡೆ ಮಳೆ, ಕೇಲವ ಮಳೆಯಾದರೆ ಪರವಾಗಿಲ್ಲ, ಮಳೆ ನೀರಿನ ಜೊತೆಗೆ ಯುಜಿಡಿಯ ಮ್ಯಾನ್ಹೋಲ್ಗಳು ಉಕ್ಕಿ ಹರಿಯುತ್ತಿರುವುದರಿಂದ ಜನರು ಕೊಚ್ಚೆ ನೀರಿನಲ್ಲಿ ಸಂಚರಿಸದೇ ಬೇರೆ ವಿಧಿಯೇ ಇಲ್ಲ ಎನ್ನುವಂತಾಗಿದೆ.
ನಗರದಲ್ಲಿ ಯುಜಿಡಿಯನ್ನು ನಿರ್ಮಿಸುವಾಗ ಮಾಡಿದ ಕೆಲವು ದೋಷದಿಂದ ಹಾಗೂ ಮಳೆಯ ನೀರು ಯುಜಿಡಿ ಸೇರುವಂತೆ ಮಾಡಿರುವುದರಿಂದಲೋ ಏನೊ ಅಲ್ಪ ಮಳೆ ಬಂದರು ಸಾಕು, ರಾಷ್ಟ್ರೀಯ ಹೆದ್ದಾರಿ-206 ರ ವೈಶಾಲಿಬಾರ್ ಮುಂಭಾಗ ಹಾಗೂ ಕೋಡಿಸರ್ಕಲ್ನಿಂದ ಬೆಂಗಳೂರು ರಸ್ತೆ ಮಾರ್ಗದಲ್ಲಿ ಇರುವ ಹಲವಾರು ಯುಜಿಡಿ ಮ್ಯಾನ್ಹೋಲ್ಗಳು ತುಂಬಿ ಹರಿಯುತ್ತವೆ. ಈ ಸಂದರ್ಭದಲ್ಲಿ ಯುಜಿಡಿ ಪಕ್ಕದಲ್ಲೇ ಇರುವ ಬಾಕ್ಸ್ ಚರಂಡಿಗಳು ಕಟ್ಟಿಕೊಂಡಿರುವುದರಿಂದ ರೆಸ್ತೆಯ ಒಂದು ಭಾಗದಲ್ಲಿ ಸುಮಾರು 2-3 ಅಡಿಗಳಷ್ಟು ನೀರು ನಿಲ್ಲುತ್ತದೆ. ಈ ನೀರಿನಲ್ಲಿ ದೊಡ್ಡ ವಾಹನಗಳು ಅನಾಯಾಸವಾಗಿ ಸಂಚರಿಸುತ್ತವೆ. ಆದರೆ ಲಘುವಾಹನಗಳಾದ ಕಾರ್, ಆಟೋ, ದ್ವಿಚಕ್ರವಾಹನಗಳು ಸಂಚರಿಸಲು ಸಾಧ್ಯವಾಗುವುದಿಲ್ಲ, ಒಂದು ವೇಳೆ ಸಂಚರಿಸಿದರೆ ಕೊಚ್ಚೆನೀರಿನ ದುರ್ನಾತದಿಂದ ವಾಹನಗಳು ಮತ್ತು ಸಂಚರಿಸುವವರ ಉಸಿರು ನಿಲ್ಲುವಂತಾಗುತ್ತದೆ. ಜೊತೆಗೆ ಮಲಿನ ನೀರಿನಿಂದ ಇಲ್ಲಸಲ್ಲದ ರೋಗಗಳನ್ನು ಮನೆಗೆ ಕೊಂಡೊಯ್ಯಬೇಕಾಗಿದ್ದು ಸಾರ್ವಜನಿಕರು ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಈ ಸಮಸ್ಯೆ ನಿನ್ನೆ, ಮೊನ್ನೆಯದಲ್ಲ ಯುಜಿಡಿ ನಿರ್ಮಿಸಿದ ಕೆಲವೇ ದಿನಗಳಲ್ಲಿ ಈ ಸಮಸ್ಯೆ ಕಂಡು ಬಂದರೂ ಸಹ ಮಳೆಗಾಲದಲ್ಲಿ ಈ ಸಮಸ್ಯೆ ತಪ್ಪಿದ್ದಿಲ್ಲ. ಲಕ್ಷಾಂತರ ರೂ. ಹಣವನ್ನು ವ್ಯಯ ಮಾಡುವ ನಗರಸಭೆಯ ಅಧಿಕಾರಿಗಳು ಈ ಸಮಸ್ಯೆಗೆ ಮುಕ್ತಿಹಾಡಲು ಏಕೆ ಸಾಧ್ಯವಾಗಿಲ್ಲ, ಉತ್ಸಾಹಿ ನಗರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪೌರಾಯುಕ್ತರು ಈ ಸಮಸ್ಯೆಗೆ ಮುಕ್ತಿಹಾಡುತ್ತಾರೊ, ಇಲ್ಲ ನಮಗೂ ಇದಕ್ಕೂ ಸಂಬಂಧವಿಲ್ಲವೆಂದು ಕೈಕಟ್ಟಿ ಕುಳಿತುಕೊಳ್ಳುತ್ತಾರೊ ನೋಡಬೇಕಾದ ಪರಿಸ್ಥಿತಿಯಲ್ಲಿ ಸಾರ್ವಜನಿಕರು ಇದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ