ತಿಪಟೂರು :

ಕೇಂದ್ರ ಮತ್ತು ರಾಜ್ಯಸರ್ಕಾರಗಳು ಖಾಸಗಿ ಕಂಪನಿಗಳ ಗುಲಾಮರಂತೆ ವರ್ತಿಸುತ್ತಿದ್ದು ಎಲ್ಲವನ್ನು ಖಾಸಗೀಕರಣ ಮಾಡುವ ಹುನ್ನಾರವನ್ನು ನಡೆಸುತ್ತಿವೆ ಎಂದು ರೈತ ಮುಖಂಡ ಆರ್.ಕೆ.ಎಸ್. ಸ್ವಾಮಿ ಆರೋಪಿಸಿದರು.
ನಗರದ ಕೋಡಿ ಸರ್ಕಲ್ ವೃತ್ತದಿಂದ ತಾಲೂಕು ಕಚೇರಿಯವರೆಗೆ ಕಾಲ್ನಡಿಗೆ ಜಾಥದಲ್ಲಿ ವಿವಿಧ ಸಂಗಟನೆಗಳಾದ ಕರ್ನಾಟಕ ಅಕ್ಷರ ದಾಸೋಹ ನೌಕರರ ಸಂಘ, ಎಸ್.ಯು.ಸಿ.ಐ. ಅಂಗನವಾಡಿ ನೌಕರರ ಸಂಘ, ಎ.ಐ.ಕೆ.ಎಸ್.ಸಿ.ಸಿ ಸಂಘ, ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ, ರೈತ ಕೃಷಿ ಕಾರ್ಮಿಕ ಸಂಘಟನೆ ಕೃಷಿ ಉತ್ಪನ್ನ ವಾಣಿಜ್ಯ ಮತ್ತು ಮಾರಾಟ ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ, ವಿದ್ಯುತ್ಕಾಯ್ದೆಗಳನ್ನು ಕೂಡಲೇ ವಾಪಸ್ಸು ಪಡೆಯಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ದೇಶದ ಅನ್ನದಾತನ ಮೇಲೆ ಖಾಸಗೀ ಕಂಪನಿಗಳ ಕಣ್ಣು ಬಿದ್ದಿದ್ದು ಇದಕ್ಕೆ ಪೂರಕವಾಗಿ ಭೂ ಸುಧಾರಣಾ ಕಾಯ್ದೆ, ವಿದ್ಯುತ್ ಖಾಸಗೀಕರಣ ಮುಂತಾದ ಯೋಜನೆಗಳನ್ನು ತಂದು ಖಾಸಗೀ ಕಂಪನಿಗಳಿಗೆ ಅನುವು ಮಾಡಿಕೊಟ್ಟು ದೇಶವನ್ನೇ ಮಾರಲು ಹೊರಟ್ಟಿದ್ದಾರೆ.
ಇದು ತಪ್ಪಬೇಕೆಂದರೆ ಡಾ.ಸ್ವಾಮಿನಾಥನ್ ವರದಿಯನ್ವಯ ಎಲ್ಲಾ ಕೃಷಿ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚದ ಮೇಲೆ ಶೇ.50 ರಷ್ಟು ಲಾಭವನ್ನು ಸೇರಿಸಿ ಕನಿಷ್ಠ ಬೆಂಬಲ ಬೆಲೆ ಖಾತರಿ ಮಾಡುವ ಬೆಂಬಲ ಬೆಲೆ ಕಾನೂನು, ಎಲ್ಲಾ ರೈತರು, ಕೃಷಿ ಕೂಲಿಕಾರರಿಗೆ ಅಗತ್ಯವಿರುವ ಬ್ಯಾಂಕ್ ಸಾಲ ನೀಡಿಕೆ, ವಿಶೇಷ ಸಂದರ್ಭಗಳಲ್ಲಿ ಸಾಲಮನ್ನಾ ಇತ್ಯಾದಿ ಅಂಶಗಳನ್ನು ಒಳಗೊಂಡ ಋಣ ಮುಕ್ತ ಕಾಯ್ದೆಯನ್ನು ಅಂಗೀಕರಿಸಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ತಾಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಅನೂಸುಯಮ್ಮ ಮಾತನಾಡಿ, ಕೊರೊನಾ ಕಾಲದ ಭಯಾನಕ ಸ್ಥಿತಿಯನ್ನು ದುರುಪಯೋಗ ಮಾಡಿಕೊಂಡ ಕೇಂದ್ರ ಮತ್ತು ರಾಜ್ಯದ ಸರಕಾರ ಅನೇಕ ರೈತ ವಿರೋಧಿ, ಶ್ರಮಜೀವಿಗಳ ವಿರೋಧಿ ಕಾನೂನುಗಳನ್ನು ಮಾಡುತ್ತಿವೆ. ದೇಶದಲ್ಲಿ ರೈತಾಪಿ ಕೃಷಿಯನ್ನು ನಾಶ ಮಾಡಿ, ಕಂಪನಿ ಕೃಷಿಯನ್ನು ಬೆಳೆಸಲಾಗುತ್ತದೆ. ಇದರಿಂದ ಗ್ರಾಮೀಣಾ ಬಡತನ, ನಿರುದ್ಯೋಗ ಮಾತ್ರವಲ್ಲ ಅಗತ್ಯ ವಸ್ತುಗಳ ವಿಪರೀತ ಬೆಲೆ ಏರಿಕೆ, ದೇಶದಆಹಾರ ಭದ್ರತೆ, ಆರ್ಥಿಕ ಸ್ವಾಲಂಬನೆಗೆ ಧಕ್ಕೆಯಾಗಲಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








