ತಿಪಟೂರು :

ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ, ಹೂಲಿಹಳ್ಳಿ ಗ್ರಾಮದ ಸರ್ವೆ ನಂಬರ್ 95, 96, 97, 90 ಮತ್ತು 235ರಲ್ಲಿ ಜಮೀನನನ್ನು ಒತ್ತುವರಿ ಮಾಡಿಕೊಂಡು ತೆಂಗು ಹಾಗು ಅಡಿಕೆ ಮರಗಳನ್ನು ಬೆಳೆಸಿದ್ದು, ಜನರು ತಿರುಗಾಡಲು ರಸ್ತೆ ಸಮಸ್ಯೆಯಾಗುತ್ತಿದೆ ಎಂದು ಕೆಲವರು ಅರ್ಜಿ ನೀಡಿದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ದೂರು ಪರಿಶೀಲಿಸಿ ಸ್ಕೆಚ್ ಮಾಡಿಸಿ, ನೋಟೀಸ್ ನೀಡಿ, ಒತ್ತುವರಿ ತೆರವುಗೊಳಿಸಲು ಹೋದ ಸಂದರ್ಭದಲ್ಲಿ ಒತ್ತುವರಿದಾರರು ಪ್ರತಿಭಟಿಸಲಾಗಿ ಆರಕ್ಷಕರ ಸಹಾಯದಿಂದ ಒತ್ತುವರಿಯನ್ನು ತೆರವುಗೊಳಿಸಲಾಯಿತು.
ನಮ್ಮ ಹಿರಿಯರು ನೂರಾರು ವರ್ಷಗಳಿಂದ ಭೂಮಿಯನ್ನು ಉಳುಮೆ ಮಾಡುತ್ತಿದ್ದಾರೆ. ನಾವು ರಸ್ತೆಯನ್ನು ಬಿಡುವುದಿಲ್ಲವೆಂದೇನು ಹೇಳುತ್ತಿಲ್ಲ, ಈ ರಸ್ತೆಗೆ ಪರ್ಯಾಯವಾಗಿ ನಮ್ಮ ಜಮೀನಿನ ಇನ್ನೊಂದೆಡೆ ರಸ್ತೆಯನ್ನು ಬಿಟ್ಟುಕೊಡುತ್ತೇವೆಂದು ಒತ್ತುವರಿದಾರರು ಹೇಳಿದರು. ಹೇಳದೇ, ಕೇಳದೆ ಅನ್ಯಾಯವಾಗಿ ಫಸಲಿಗೆ ಬಂದ ತೆಂಗು-ಅಡಿಕೆ ಮರಗಳನ್ನು ಕಡಿಯುತ್ತಿದ್ದಾರೆ. ಈ ಬಗ್ಗೆ ನಾವು ಉಪವಿಭಾಗಾಧಿಕಾರಿಗಳ ಕಛೇರಿಗೆ ನಮಗೆ ಜಮೀನು ಉಳಿಸಿಕೊಡಿ ಇಲ್ಲವೇ ದಯಾ ಮರಣಕೊಡಿ ಎಂದು ಅರ್ಜಿಯನ್ನು ಸಲ್ಲಿಸಿದ್ದರೂ ಸಹ ಈ ರೀತಿಯ ಕ್ರೌರ್ಯಕ್ಕೆ ಮುಂದಾಗಿದ್ದಾರೆ. ಜೊತೆಗೆ ಇಲ್ಲಿ ಪ್ರಭಾವಿಯೊಬ್ಬರ ತೆಂಗಿನಚಿಪ್ಪು ಸುಡುವ ಘಟಕವಿದೆ ಅದಕ್ಕೆ ರಸ್ತೆ ಕಲ್ಪಿಸುವ ಸಲುವಾಗಿ ಈ ಒತ್ತುವರಿಯನ್ನು ತೆರವು ಗೊಳಿಸುತ್ತಿದ್ದಾರೆ ಈ ಒತ್ತುವರಿ ತೆರವು ಸಂಪೂರ್ಣವಾಗಿ ತೆರವುಗೊಳ್ಳಬೇಕು. ಇಲ್ಲಿದ್ದರೆ ಹೋರಾಟ ಮಾಡುತ್ತೇವೆಂದು ಒತ್ತುವರಿದಾರ ಭರತ್ ಎಚ್ಚರಿಸಿದರು.

ಸಾರ್ವಜನಿಕರು ಓಡಾಟಕ್ಕೆ ರಸ್ತೆ ಇಲ್ಲವೆಂದು ದೂರು ನೀಡಿದಾಗ ರಸ್ತೆ ತೆರವಿಗೆ ಮುಂದಾಗುವ ಅಧಿಕಾರಿಗಳು, ಇದೇ ತೆಂಗಿನ ಚಿಪ್ಪಿನ ಘಟಕದಿಂದ ಧೂಳು, ಹೊಗೆಯಿಂದ ಬೆಳೆಗಳು ಹಾಳಾಗುತ್ತಿವೆ ಎಂದಾಗ ಮಾತ್ರ ಏಕೆ ಕ್ರಮ ಕೈಗೊಂಡಿಲ್ಲ, ಅದಲ್ಲದೇ ಈ ತೆಂಗಿನ ಚಿಪ್ಪಿನ ಘಟಕದಿಂದ ಪಕ್ಕದ ಕೆರೆಯೂ ಹಾಳಾಗಿ ಹೋಗಿ ದನಕರುಗಳಿಗೆ ಕುಡಿಯುವ ನೀರಿಲ್ಲದಂತಾಗಿದ್ದು, ಚಿಪ್ಪು ಸುಡುವ ಘಟಕದ ಮೇಲೆ ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ. ರೈತರಿಗೊಂದು ನ್ಯಾಯ, ಬಂಡವಾಳಷಾಹಿಗೆ ಇನ್ನೊಂದು ನ್ಯಾಯವೇ ಎಂದು ಬೆಳೆದುನಿಂತ ಮರಗಳನ್ನು ಕಳೆದುಕೊಂಡವರು ಪ್ರಶ್ನಿಸಿದರು.
ರಸ್ತೆಯನ್ನು ಒತ್ತುವರಿ ಮಾಡಿ ತೆಂಗು ಮತ್ತು ಅಡಕೆ ಸಸಿ ಹಾಕಿ ಓಡಾಡಲು ತೊಂದರೆಯಾಗುತ್ತಿದೆ ಎಂದು ಹೂಲಿಹಳ್ಳಿಯ ಗ್ರಾಮಸ್ಥರು ದೂರು ನೀಡಿದ್ದರು ಅದರಂತೆ ಸರ್ವೇ ನಡೆಸಿ ಇಂದು ತೆರವುಗೊಳಿಸಲಾಗುತ್ತಿದೆ.
-ಆರ್.ಜಿ.ಚಂದ್ರಶೇಖರ್, ತಹಸೀಲ್ದಾರ್, ತಿಪಟೂರು
ಇದ್ದಿಲು ಕಾರ್ಖಾನೆಯನ್ನು ತೆರವು ಗೊಳಿಸಿ, ಪರಿಸರ ಮತ್ತು ರೈತರನ್ನು ಉಳಿಸಿ ಎಂದು ಅರ್ಜಿಕೊಟ್ಟರೆ, ಇದ್ದಿಲು ಕಾರ್ಖಾನೆಗೆ ರಸ್ತೆ ಮಾಡಿಕೊಡಲು ನಮ್ಮ ಫಸಲಿಗೆ ಬಂದ ತೆಂಗು ಮತ್ತು ಅಡಿಕೆ ಮರಗಳನ್ನು ಕಡಿಯುತ್ತಿದ್ದಾರೆ.
-ಭರತ್ ಹೂಲಿಹಳ್ಳಿ,
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
