ಆರ್‍ಎಸ್‍ಎಸ್ ಕಾರ್ಯಕ್ರಮ ಕಾಣುತ್ತೆ ರಸ್ತೆ ಗುಂಡಿಗಳು ಕಾಣಲ್ಲ

  ತಿಪಟೂರು :

      ನಗರಸಭೆಯ ಪೌರಾಯುಕ್ತರಾದ ಉಮಾಕಾಂತ್‍ರನ್ನು ಪಡೆದ ನಾವೇ ಧನ್ಯರು, ಸರ್ಕಾರಿ ಸಂಬಳ ತೆಗೆದುಕೊಂಡು, ಸಂಘದ ಕೆಲಸ ಮಾಡುವ ಪೌರಾಯುಕ್ತರು ಎಲ್ಲಿ ಸಿಗುತ್ತಾರೋ ಎಂದು ನಗರಸಭಾ ಸದಸ್ಯ ಹಾಗೂ ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ವ್ಯಂಗ್ಯವಾಡಿದರು.
ನಗರದ ಸಿಂಗ್ರಿ ನಂಜಪ್ಪ ವೃತ್ತ ಹಾಗೂ ನಗರಸಭಾ ಕಚೇರಿಯ ಮುಂದೆ ಪೌರಾಯುಕ್ತ ಉಮಾಕಾಂತ್ ಗಣಧಾರಿ ವೇಷ ಧರಿಸಿದ್ದರ ವಿರುದ್ಧ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ನಗರದಲ್ಲಿ ರಸ್ತೆಗಳು ಸರಿ ಇಲ್ಲದೇ ಇರುವುದು ಹೋಗಲಿ, ನಗರಸಭೆ ಆವರಣವನ್ನು ಪ್ರವೇಶಿಸಲು ಸಾಧ್ಯವಾಗದಷ್ಟು ಕೆಸರು ಮಯವಾಗಿದೆ, ಕೂಗಳತೆ ದೂರದಲ್ಲಿರುವ ಬಸ್ ನಿಲ್ದಾಣದ ರಸ್ತೆ, ಬೀದಿ ದೀಪ ಇಲ್ಲದೇ ಜನರು ಪರಿತಪಿಸುತ್ತಿದ್ದಾರೆ ಇಂತಹ ಸಮಸ್ಯೆಗಳು ಇವರ ಕಣ್ಣಿಗೆ ಕಾಣದಾಗಿದ್ದು, ಆರ್‍ಎಸ್‍ಎಸ್ ಕಾರ್ಯಕ್ರಮ ಮಾತ್ರ ಕಾಣುತ್ತದೆ, ಯಾರಿಗೊ ಸಚಿವ ಸ್ಥಾನ ಸಿಕ್ಕಿದ್ದಕ್ಕೆ ಉರುಳು ಸೇವೆ ಮಾಡುತ್ತಾರೆ. ಆಗಲೂ ಊಟದ ಸಮಯ, ಇವತ್ತು ರಜಾದಿನ ಎನ್ನುವ ಪೌರಾಯುಕ್ತರನ್ನು ನೇರವಾಗಿ ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ಆಗ್ರಹಿಸಿದರು.

     ಈ ಸಂದರ್ಭದಲ್ಲಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಂತರಾಜು, ಪ್ರಕಾಶ್‍ಯಾದವ್ ಮಾತನಾಡಿದರು, ನಗರಸಭಾ ಸದಸ್ಯರಾದ ಹೂರ್‍ಬಾನು, ಮೇಘನಾಭೂಷಣ್, ವಿನುತಾತಿಲಕ್, ಮುಖಂಡರಾದ ಲೋಕ್‍ನಾಥ್‍ಸಿಂಗ್ ರಜಪೂತ್, ಸುನಿಲ್, ತಾಪಂ ಮಾಜಿ ಸದಸ್ಯರಾದ ಶಿವಸ್ವಾಮಿ, ರವೀಶ್, ಸುರೇಶ್ ಸೈಫುಲ್ಲಾ, ಜುಬೇರ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ರಜಾ ದಿನದಲ್ಲಿ ಸತ್ತರೆ ಸರ್ಕಾರಿ ಸೌಲಭ್ಯ ಬೇಡವೇ..? :

      ರಜಾ ದಿನ ಇತ್ತು, ನಾನು ಕೆಲಸಕ್ಕೆ ಸೇರುವ ಮೊದಲೇ ಆರ್‍ಎಸ್‍ಎಸ್ ಸ್ವಯಂ ಸೇವಕನಾಗಿದ್ದೆ, ನಲವತ್ತು ವರ್ಷದಿಂದ ಕೆಲಸ ಮಾಡುತ್ತಿದ್ದೇನೆ ಎಂದು ಉಡಾಫೆ ಉತ್ತರ ನೀಡುವ ಪೌರಾಯುಕ್ತ ಉಮಾಕಾಂತ್‍ರವರು ಅಕಸ್ಮಾತ್ ರಜಾದಿನದಲ್ಲಿ ಮರಣ ಹೊಂದಿದರೆ ಅಥವಾ ಅಪಘಾತ ಸಂಭವಿಸಿದರೆ ಇವರಾಗಲೀ ಇವರ ಕುಟುಂಬವಾಗಲೀ ಯಾವುದೇ ಸರ್ಕಾರಿ ಸೌಲಭ್ಯವನ್ನು ಪಡೆಯುವುದಿಲ್ಲವೇ ಎಂದು ನಗರಸಭೆ ಹಾಗೂ ಕೆಪಿಸಿಸಿ ಸದಸ್ಯ ಯೋಗೀಶ್ ಪ್ರಶ್ನಿಸಿದರು.

     ಸರ್ಕಾರಿ ಕೆಲಸವನ್ನು ದೇವರ ಕೆಲಸವೆಂದು ಪೌರಾಯುಕ್ತರು ಹೆಚ್ಚಾಗೆ ತಿಳಿದುಕೊಂಡಂತಿದೆ. ದೇವರನ್ನು ಮೆಚ್ಚಿಸಿದರೆ ಪುಣ್ಯ ದೊರೆಯುವುದಿಲ್ಲ, ಜನಸೇವೆಯೆ ಜನಾರ್ಧನ ಸೇವೆ ಎಂದು ತಿಳಿದು ಜನರ ಸೇವೆ ಮಾಡುವುದನ್ನು ಬಿಟ್ಟು, ಯಾರನ್ನೊ ಮೆಚ್ಚಿಸಲು ಉರುಳುಸೇವೆ ಮಾಡುವುದು, ಪ್ರಸಾದÀ ಹಂಚುವುದು, ಗಣಪತಿ ವಿಸರ್ಜನೆಯಲ್ಲಿ ಪೌರೋಹಿತ್ಯ ವಹಿಸುವುದು ಮಾಡುತ್ತಿದ್ದಾರೆ, ಇವುಗಳನ್ನು ಬಿಟ್ಟು ಜನರಿಗೆ ಒಳ್ಳೆಯದಾಗುವ ಅಭಿವೃದ್ಧಿ ಕೆಲಸಗಳನ್ನು ಮಾಡಲಿ ಆಗ ಜನ ಮೆಚ್ಚುತ್ತಾರೆ.

-ಬಜಗೂರು ಮಂಜುನಾಥ್, ಎಪಿಎಂಸಿ ಮಾಜಿ ನಿರ್ದೇಶಕ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link