ತಿಪಟೂರು :
ಸಾರ್ವಜನಿಕರಿಗೆ ಅತ್ಯುತ್ತಮ ಸೌಲಭ್ಯ ದೊರಕಬೇಕೆಂಬ ಉದ್ದೇಶದಿಂದ ಆರೋಗ್ಯ ತಪಾಸಣೆಗಾಗಿ ಅತ್ಯಾಧುನಿಕ ಪ್ರಯೋಗಾಲಯ ಇಲ್ಲಿ ನಿರ್ಮಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಸುಮಾರು 56 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕೋವಿಡ್ 19 ಆರ್.ಟಿ.ಪಿ.ಸಿ.ಆರ್ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿದ ಅವರು, ತಿಪಟೂರು ಉಪವಿಭಾಗಾದ ಚಿಕ್ಕನಾಯಕನಹಳ್ಳಿ, ತುರುವೇಕೆರೆ ಸೇರಿದಂತೆ ಪಕ್ಕದ ತಾಲ್ಲೂಕುಗಳಾದ ಚನ್ನರಾಯಪಟ್ಟಣ, ಅರಸೀಕೆರೆ ಹಾಗೂ ಹೊಸದುರ್ಗದಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಈ ಪ್ರಯೋಗಾಲಯದಿಂದ ಅನುಕೂಲವಾಗಲಿದೆ. ತಿಪಟೂರಿನಿಂದ ಜಿಲ್ಲಾ ಕೇಂದ್ರವು ದೂರವಿರುವುದರಿಂದ ಪ್ರತಿಯೊಂದು ಸೌಲಭ್ಯವು ಈ ತಾಲೂಕು ಆಸ್ಪತ್ರೆಯಲ್ಲಿ ದೊರಕಲಿ ಎಂಬ ಉದ್ದೇಶದಿಂದ ಕೋವಿಡ್ ಸೇರಿದಂತೆ ಪ್ರತಿಯೊಂದು ತಪಾಸಣೆಯ ಸೌಲಭ್ಯ ಇಲ್ಲಿ ದೊರಕಲಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಬಿ.ಸಿ.ನಾಗೇಶ್, ಜಿಲ್ಲಾಧಿಕಾರಿ ಡಾ. ರಾಕೇಶ್ಕುಮಾರ್, ತಾಲ್ಲೂಕು ವೈದ್ಯಾಧಿಕಾರಿ ಡಾ. ರವಿಕುಮಾರ್, ಆಸ್ಪತ್ರೆಯ ಸಿಬ್ಬಂದಿವರ್ಗದವರು ಹಾಜರಿದ್ದರು.
ವಿದ್ಯಾರ್ಥಿಗಳ ಸರತಿ ಸಾಲು :
ಸಚಿವರು ಇತ್ತ 56 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕೋವಿಡ್ 19 ಆರ್.ಟಿ.ಪಿ.ಸಿ.ಆರ್ ಪ್ರಯೋಗಾಲಯ ಉದ್ಘಾಟಿಸುತ್ತಿದ್ದರೆ ಇನ್ನೊಂದೆಡೆ ಕಾಲೇಜು ಮತ್ತು ಹಾಸ್ಟೆಲ್ ಪ್ರವೇಶಕ್ಕಾಗಿ ಕೋವಿಡ್ ಪರೀಕ್ಷೆ ಅನಿವಾರ್ಯವಾಗಿರುವುದರಿಂದ ಬೆಳಗ್ಗಿನಿಂದಲೇ ಕೋವಿಡ್ ಪರೀಕ್ಷೆ ಮಾಡಿಸಲು ಆಸ್ಪತ್ರೆಯ ಮುಂದೆ ಗುಂಪುಗೂಡಿದ್ದರು.
![](https://prajapragathi.com/wp-content/uploads/2020/11/20-TPR-1.jpeg)