ತಿಪಟೂರು :
ತಾಲೂಕಿನಲ್ಲಿ ಕಳೆದ 3-4 ದಿನಗಳಿಂದ ಕುರುಡನ ಮಳೆಯ (ಚಿತ್ತಾ) ಆರ್ಭಟ ಜೋರಾಗಿದ್ದು, ರಾಗಿಯು ಕಾಳು ಕಟ್ಟುವ ಹಂತಕ್ಕೆ ಬಂದಿದ್ದು ರಾತ್ರಿಹೊತ್ತು ಒಂದೇ ಸಮನೆ ಮಳೆ ಸುರಿಯುತ್ತಿರುವುದರಿಂದ ಮಳೆ ನೀರಿನಿಂದ ತೋಯ್ದ ಬೆಳೆ ನೆಲಕಚ್ಚಿದೆ.
15 ದಿನಗಳ ಹಿಂದೆ ರೈತರು ರಾಗಿಬೆಳೆ ಒಣಗುತ್ತಿದೆ ಮಳೆಯಾಗಬಾರದೇ ಎಂದು ವರುಣನಲ್ಲಿ ಪ್ರಾರ್ಥಿಸುತ್ತಿದ್ದರು ಆದರೆ ಈಗ ಮಳೆ ನಿಂತರೆ 3-4 ಚೀಲ ರಾಗಿ ಕಣಜ ಸೇರಬಹುದೆಂಬ ಅಂದಾಜಿನಲ್ಲಿದ್ದಾರೆ. ಅಂತೂ ಭಾರತದ ಮಾನ್ಸೂನ್ ಮಳೆ ರೈತರೊಂದಿಗೆ ಆಡುವ ಜೂಜಾಟವೆಂಬುದು ಮತ್ತೆ ಸಾಬೀತಾಗಿದೆ.
ಕೈ ಕೊಡದ ಕುರುಡ :
ಚಿತ್ತಾ ನಕ್ಷತ್ರವೇ ಹಾಗೆ ಚಿತ್ತಾ ನಕ್ಷತ್ರದಲ್ಲಿ ಹುಟ್ಟಿದರೆ ಚಂಚಲತೆ, ತುಂಟಾಟ, ಚಿಟ್ಟೆಯ ಹಾಗೆ ಆಡುತ್ತಾರೆ ಎಂಬ ಮಾತು ಜೋತಿಷ್ಯ ಶಾಸ್ತ್ರದಲ್ಲಿ ಹೇಳುತ್ತಾರೆ. ಆದರೆ ಈ ಮಾತು ಮಳೆ ನಕ್ಷತ್ರಕ್ಕೆ ಅನ್ವಯಿಸುವುದು ಇದೆ. ಹಿಂದೆ ಮಳೆ ಬಾರದ ಸಮಯದಲ್ಲಿ ಕುರುಡನ ಮಳೆಗಾಗಿ ರೈತರು ಕುರುಡ ಕುರುಡ ನೀರುಯ್ಯೋ ಬಾಳೆ ತೋಟಕೆ ನೀರಿಲ್ಲವೆಂದು ಊರಿನ ಯುವರು ಗ್ರಾಮಸ್ಥರೆಲ್ಲಾ ಸೇರಿ ಊರ ಮುಂದಿನ ಕರೆ-ಕಟ್ಟೆಯ ಹತ್ತಿರ ವಾದ್ಯಗಳೊಂದಿಗೆ ಮಳೆರಾಯನಿಗಾಗಿ ಮೊರೆ ಇಡುತ್ತಿದ್ದರು. ಈ ಮೊರೆ ಏಕೆಂದರೆ ಕಣ್ಣು ಮುಚ್ಚಿಕೊಂಡು ನೀರು ಸುರಿಸುವಂತೆ ಮಳೆಯನ್ನು ಸುರಿಸಿ ಕೆರೆ-ಕಟ್ಟೆಗಳನ್ನೆಲ್ಲ್ಲಾ ತುಂಬಿಸುವ ಮಳೆ ಇದು ಎಂದು ಚಿತ್ತಾ ಮಳೆಯನ್ನು ಕುರುಡನ ಮಳೆ ಎಂದು ರೈತರು ಕರೆಯುತ್ತಾರೆ. ಈ ಮಳೆ ಉತ್ತಮವಾಗಿ ಬಂದರೆ ಬೇಸಿಗೆಯಲ್ಲಿ ನೀರಿಗೆ ತೊಂದರೆ ಆಗುವುದಿಲ್ಲ ಎಂಬ ನಂಬಿಕೆ ಇದ್ದು, ಯಾವ ಮಳೆ ಕೈ ಕೊಟ್ಟರೂ ಕುರುಡನ ಮಳೆ ಒಂದು ಬಾರಿಯಾದರು ಬರುತ್ತದೆ ಎನ್ನುವುದು ಜನಪದರ ನಂಬಿಕೆಯಾಗಿದೆ.
ಈ ಬಾರಿಯು ಸಹ ಕುರುಡನ ಮಳೆಯ ಆರ್ಭಟ ಜೋರಾಗಿದ್ದು, ರೈತರು ಮಳೆ ನಿಂತರೆ ಸಾಕಪ್ಪ, ತೋಟ-ಹೊಲಕ್ಕೆ ಹೋಗಿ ಬಿದ್ದಿರುವ ರಾಗಿಪೈರನ್ನಾದರೂ ಕಟ್ಟಿ ನಿಲ್ಲಿಸಿ ರಾಗಿ ಬೆಳೆಯನ್ನು ಉಳಿಸಿಕೊಳ್ಳೋಣ ಎನ್ನುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
