ಚಳ್ಳಕೆರೆ:
ಸರ್ಕಾರದ ಗ್ರಾಮ ಪಂಚಾಯಿತಿ, ಕರ್ನಾಟಕ ಗ್ರಾಮ ಸ್ವರಾಜ್ ಅಧಿನಿಯಮ ಮತ್ತು ಪಂಚಾಯಿತ್ ರಾಜ್ ನಿಬಂಧನೆಗಳಡಿ ತಾಲ್ಲೂಕಿನ ಯಾವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಸಹ ಮಣ್ಣನ್ನು ಅಕ್ರಮವಾಗಿ ಸಾಗಿಸಕೂಡದು ಎಂದು ಸರ್ಕಾರ ಆದೇಶ ನೀಡಿದ್ದು, ಈ ಬಗ್ಗೆ ಇಲ್ಲಿನ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದ 23 ಆಗಸ್ಟ್ 2021ರಲ್ಲಿ ಸಹಾಯಕ ಕೃಷಿ ನಿರ್ದೇಶಕ ಕಾರ್ಯಾಲಯದಿಂದ 2-ಸೆಪ್ಟಂಬರ್2021ರಲ್ಲಿ ಕಟ್ಟುನಿಟ್ಟಿನ ಆದೇಶ ನೀಡಿದ್ದರೂ ಸಹ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ಫಲವತ್ತಾದ ಮಣ್ಣನ್ನು ಸರ್ಕಾರಿ ಗೋಮಾಳದಿಂದಲೇ ಅಗೆದು ಸಾಗಾಟ ಮಾಡುತ್ತಿದ್ದು ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳು, ತಹಶೀಲ್ಧಾರ್, ಗಣಿ ಮತ್ತು ಭೂಗರ್ಭ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ತೋಡ್ಲಾರಹಟ್ಟಿ ಗ್ರಾಮ ಪಂಚಾಯಿತಿ ಸದಸ್ಯ ಚಿನ್ನಯ್ಯ, ನಮ್ಮ ಗ್ರಾಮಕ್ಕೆ ಹೊಂದಿಕೊಂಡಿರುವ ಸರ್ಕಾರಿ ಗೋಮಾಳ ರಿ ಸರ್ವೆ ನಂ 123 ಶುಕ್ಲಗಿರಿ ಪರ್ವತಕ್ಕೆ ಹೊಂದಿಕೊಂಡಿದ್ದು, ಕೆಲವು ಖಾಸಗಿ ಕಂಪನಿಗಳ ಮಾಲೀಕರು ಹಾಗೂ ಲಾರಿಗಳು ಇಲ್ಲಿಗೆ ಆಗಮಿಸಿ ಪ್ರತಿನಿತ್ಯ ಮಣ್ಣನ್ನು ಅಗೆದು ಸಾಗಾಣಿಕೆ ಮಾಡುತ್ತಿದ್ದ ಬಗ್ಗೆ ಪ್ರಶ್ನಿಸಿದರೆ ಗ್ರಾಮಸ್ಥರ ಮೇಲೆಯೇ ದೌರ್ಜನ್ಯ ವೆಸಗುತ್ತಿದ್ದಾರಲ್ಲದೆ, ಯಾವುದೇ ಅನುಮತಿ ಪತ್ರವನ್ನೂ ಸಹ ಪಡೆಯದೆ ಅಕ್ರಮವಾಗಿ ಮಣ್ಣು ಸಾಗಿಸುತ್ತಿದ್ದಾರೆಂದು ಆರೋಪಿಸಿದರು. ಇದರಿಂದ ಸುತ್ತಮುತ್ತಲ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆಯಲ್ಲದೆ, ನಿಯಮ ಬಾಹಿರವಾಗಿ ಎಲ್ಲಂದರಲ್ಲೆ ಆಳಾವಾದ ಗುಂಡಿ ತೋಡಿ ಮಣ್ಣು ಅಗೆದಿರುತ್ತಾರೆ. ಆದ್ದರಿಂದ ಸರ್ಕಾರಿ ಗೋಮಾಳದಲ್ಲಿಯೇ ಈ ಆಕ್ರಮ ನಡೆಯುತ್ತಿದೆ ತಹಶೀಲ್ದಾರ್ರವರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಕ್ರಮವಾಗಿ ಮಣ್ಣು ಅಗೆಯುವ ಕಾರ್ಯಕ್ಕೆ ಕಡಿವಾಣ ಹಾಕಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗ್ರಾಮದ ಮುಖಂಡರಾದ ದೊರೆ ನಾಗರಾಜ, ಚಿತ್ತಯ್ಯ, ಪಾಪಯ್ಯ, ಶಿವಕುಮಾರ್, ನಾವೆಲ್ಲಾ ಮಹೇಶ್ ಮುಂತಾದವರು ಮನವಿ ಅರ್ಪಿಸಿ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಅಕ್ರಮ ಮಣ್ಣು ಸಾಗಾಟ ನಡೆಯುತ್ತಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಮಣ್ಣನ್ನು ಕೆಲವು ಖಾಸಗಿ ವ್ಯಕ್ತಿಗಳು ಪಿಎನ್ಸಿ ಕಂಪನಿಗೆ ನೀಡಿದ್ದಾರೆಂದು ಮಾಹಿತಿ ಇದ್ದು ಈ ಬಗ್ಗೆ ಸೂಕ್ತತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಗ್ರಾಮಸ್ಥರೆಲ್ಲರೂ ಸೇರಿ ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿದ್ದ ಟ್ರಕ್ಗಳನ್ನು ತಡೆಹಿಡಿದು ಟ್ರಕ್ ಚಾಲಕರಿಗೆ ಎಚ್ಚರಿಕೆಯನ್ನು ಸಹ ನೀಡಿರುತ್ತಾರೆ. ಪ್ರತಿನಿತ್ಯ ಕಿರಿದಾದ ಮಣ್ಣಿನ ರಸ್ತೆಗಳಲ್ಲಿ ಟ್ರಕ್ಗಳೂ ಓಡಾಡುವುದರಿಂದ ರಸ್ತೆಗಳು ಸಹ ಹಾಳಾಗುತ್ತಿದ್ದು, ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
