ಹೊಳಲ್ಕೆರೆ:
ಹೊಳಲ್ಕೆರೆಯ ಕನ್ನಡ ಸಾಹಿತ್ಯ ಭವನ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಹೊಸ ವರ್ಷದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಲೋಕೇಶ್ ಹೇಳಿದರು.
ಪಟ್ಟಣದ ರೋಟರಿ ಬಾಲಭವನದ ಮುಂಬಾಗದಲ್ಲಿ ಇಪ್ಪತ್ತು ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕನ್ನಡ ಸಾಹಿತ್ಯ ಭವನ ಕಾಮಗಾರಿ ವೀಕ್ಷಿಸಿ ಮಾತನಾಡಿದರು.ಮಾಜಿ ಸಚಿವ ಎಚ್.ಆಂಜನೇಯ ಅವರು ಶಾಸಕರ ಅನುದಾನದಡಿಯಲ್ಲಿ 10 ಲಕ್ಷ ರೂ ಅನುದಾನ ನೀಡಿದ್ದರು. ಹಾಗೆಯೇ ಕನ್ನಡ ಸಾಹಿತ್ಯ ಪರಿಷತ್ ನಿಂದ 10 ಲಕ್ಷ ಅನುದಾನ ಪಡೆದು ಒಟ್ಟು 20 ಲಕ್ಷ ವೆಚ್ಚದಲ್ಲಿ ನಿರ್ಮಿತಿ ಕೇಂದ್ರದಡಿಯಲ್ಲಿ ಸುಸಜ್ಜಿತ ಕನ್ನಡ ಭವನ ನಿರ್ಮಿಸಲಾಗುತ್ತಿದೆ.
ಕನ್ನಡ ಭವನ ಅದು ನಮ್ಮ ಮನೆ, ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ನಮ್ಮ ಸ್ವಂತ ಮನೆಯ ನಿರ್ಮಾಣ ಸಂದರ್ಭದಲ್ಲಿ ನಿತ್ಯವೂ ಭೇಟಿ ನೀಡಿ ಹೇಗೆ ಜವಾಬ್ದಾರಿ ನೀಡುತ್ತೇವೆಯೋ ಅದೇ ರೀತಿ ಭವನ ನಿರ್ಮಾಣದಲ್ಲಿಯೂ ಎಲ್ಲಾ ಜವಾಬ್ದಾರಿಯನ್ನು ನೀಡಲಾಗಿದೆ. ಹುದ್ದೆ ಇಂದು ಇರುತ್ತೆ ನಾಳೆ ಹೋಗುತ್ತೆ ಆದರೆ ನಾವು ಮಾಡಿದ ಅಭಿವೃದ್ದಿ ಕಾರ್ಯಗಳು ನೆನಪಾಗಿ ಉಳಿಯುತ್ತವೆ.
ಕನ್ನಡ ಭವನದಲ್ಲಿ ವಿಶಾಲವಾದ ಸಭಾ ಹಾಲ್, ಅಧ್ಯಕ್ಷರಿಗೆ ಪ್ರತ್ಯೇಕ ಕೊಠಡಿ, ವಿಶ್ರಾಂತಿ ಕೊಠಡಿ, ಸುಸಜ್ಜಿತ ಶೌಚಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇದ್ದು, ಸಭಾ ಹಾಲ್ನಲ್ಲಿ ಲೈಟಿಂಗ್, ಮೈಕ್, ಸ್ಪೀಕರ್ ವ್ಯವಸ್ಥೇ ಇರಲಿದೆ. ಹಾಗೆಯೇ ಸಭಾ ಹಾಲ್ನ ಅಂದವನ್ನು ಹೆಚ್ಚಿಸಲು ಪಿಒಪಿ ಬಳಕೆ ಮಾಡಲಾಗಿದೆ ಎಂದರು.