ಮಧುಗಿರಿ : ಸರ್ಕಾರಿ ಬಸ್ ಚಲಿಸಿ – ಖಾಸಗಿ ಬಸ್ ಕದಲಲಿಲ್ಲ!!

 ಮಧುಗಿರಿ :

      ಕರೊನಾ ಹಿನ್ನೆಲೆಯಲ್ಲಿ ಕಳೆದ 53 ದಿನಗಳಿಂದ ಬಿಕೋ ಅನ್ನುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಅನ್‍ಲಾಕ್ ಹಿನ್ನೆಲೆಯಲ್ಲಿ ಪ್ರಯಾಣಿಕರು ಹಾಗೂ ಬಸ್‍ಗಳು ಸಂಚರಿಸುತ್ತಿದ್ದ ದೃಶ್ಯ ಪಟ್ಟಣದಲ್ಲಿ ಕಂಡು ಬಂದಿತು.

     ಆಟೋರಿಕ್ಷಾ, ಖಾಸಗಿ ಕಾರುಗಳ ನಿಲ್ದಾಣ, ಅಂಗಡಿ ಮುಂಗಟ್ಟುಗಳ ಬಳಿಯಲ್ಲಿ ಜನರು ದೈಹಿಕ ಅಂತರ ಕಾಪಾಡದೆ ವ್ಯವಹರಿಸುತ್ತಿದ್ದರು. ಸೋಮವಾರ ಬೆಳಗಿನಿಂದಲೆ ದ್ವಿಚಕ್ರ ವಾಹನ ಸವಾರರ ಓಡಾಟ ಹೆಚ್ಚಾಗಿತ್ತು. ಆದರೆ ತಿಂಗಳಾನುಗಟ್ಟಲೆಯಿಂದ ಖಾಸಗಿ ಬಸ್ ನಿಲ್ದಾಣದಲ್ಲಿ ನಿಂತಲ್ಲೆ ನಿಂತಿರುವ ಬಸ್‍ಗಳು ಮಾತ್ರ ಸ್ಥಳ ಬಿಟ್ಟು ಅಲುಗಾಡಿಲ್ಲ. ಪಾವಗಡದಿಂದ ತುಮಕೂರಿಗೆ ಏಕ ಮಾತ್ರವಾಗಿ ಎಂಎಜಿ ಖಾಸಗಿ ಬಸ್ ಮಾತ್ರ ಸಂಚರಿಸಿ, ಪ್ರಯಾಣಿಕರಿಗೆ ಸೇವೆಯನ್ನು ಒದಗಿಸಿದೆ. ಇಂಧನ ದರ ಏರಿಕೆಯ ನಡುವೆಯೂ ಕೆಎಸ್‍ಆರ್‍ಟಿಸಿ ಬಸ್‍ಗಳ ಟಿಕೆಟ್ ದರಗಳಲ್ಲಿ ಯಾವುದೇ ಏರಿಕೆಯ ಬಿಸಿ ಕಂಡು ಬಾರದೆ ಸುಗಮ ಸಂಚಾರ ನಡೆಸಿದವು.

      ತುಮಕೂರು 24, ಬೆಂಗಳೂರು 14, ಸಿರಾ 9, ಮಧುಗಿರಿಯ ಗ್ರಾಮಾಂತರ ಸೇವೆಯಲ್ಲಿ ಐಡಿ ಹಳ್ಳಿಗೆ 4 ಟ್ರಿಪ್‍ಗಳ ಸೇವೆಯನ್ನು ಕೆಎಸ್‍ಆರ್‍ಟಿಸಿ ಬಸ್ ಸಂಜೆ 4 ರ ವೇಳೆಗೆ ಒದಗಿಸಿದ್ದು, ಸಂಜೆ 5 ರ ನಂತರ ಬಸ್‍ಗಳ ಸೇವೆ ವಿರಳವಾಗಿತ್ತು. ಇಷ್ಟೂ ದಿನಗಳಿಂದ ತುರ್ತು ವಾಹನ ಮತ್ತು ಪೋಲೀಸರ ಗಸ್ತು ವಾಹನಗಳ ಶಬ್ದ ಕೇಳಿ ಸಾಕಾಗಿದ್ದ ಜನರಿಗೆ, ಮತ್ತೆ ಪೊಲೀಸರು ಎಂದಿನಂತೆ ಸಂಜೆ 5 ರ ನಂತರ ವ್ಯಾಪಾರ ವಹಿವಾಟು ಸ್ಥಗಿತ ಗೊಳಿಸುವಂತೆ ಸೂಚಿಸಿ, ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಅಂಗಡಿಗಳ ಬಾಗಿಲು ಮುಚ್ಚುವಂತೆ ತಿಳಿ ಹೇಳುತ್ತಿದ್ದರು.

      ಇಷ್ಟೂ ದಿನಗಳಿಂದ ವ್ಯಾಪಾರವೆ ಇರಲಿಲ್ಲ. ಇಂದು ಬಸ್‍ಗಳ ಹಾರನ್ ಶಬ್ದ ಕೇಳಿ, ಜನರನ್ನು ಕಂಡು ಮನಸ್ಸಿಗೆ ಖುಷಿಯಾಯಿತು.

-ಮಹಮದ್, ಟೀ ಅಂಗಡಿ ಮಾಲೀಕ

      ಇಷ್ಟೂ ದಿನಗಳಿಂದ ಹಣ್ಣು ಹಂಪಲುಗಳ ಮಾರಾಟ ಸಾಮಾನ್ಯವಾಗಿ ನಡೆಯುತ್ತಿತ್ತು. ಕೆಎಸ್ ಆರ್‍ಟಿಸಿ ಬಸ್ ನಿಲ್ದಾಣ ಬಿಕೊ ಎನ್ನುತ್ತಿತ್ತು. ನೋಡಿದ ಮುಖಗಳನ್ನೇ ನೋಡಿ ನನಗೂ ಸಾಕಾಗಿ ಹೋಗಿತ್ತು. ಹಾಳೂರಿಗೆ ಉಳಿದವನೆ ಗೌಡ ಎನ್ನುವಂತಾಗಿತ್ತು. ಇಂದು ಕೆಂಪು ಬಣ್ಣದ ಬಸ್‍ಗಳನ್ನು ನೋಡಿ ಸಂತೋಷವಾಯಿತು.

-ಸಿದ್ದಾಪುರದ ಮಂಜುನಾಥ್

      ಲಾಕ್‍ಡೌನ್ ತೆರವಾಗಿರುವುದು ಖುಷಿ ತಂದಿದೆ. ಇಂದು ಬೆಳಗಿನಿಂದ 200 ರೂ. ಗಳನ್ನು ಗಳಿಸಿದ್ದು, ಅದರಲ್ಲಿ 120 ರೂ.ಗಳು ಖರ್ಚಾಗಿದೆ. ಇನ್ನೂ ಮುಂದಿನ ದಿನಗಳಲ್ಲಿ ಪಟ್ಟಣ ಸಹಜ ಸ್ಥಿತಿಗೆ ಬರುವಂತಾದರೆ ಜೀವನೋಪಾಯಕ್ಕೆ ತೊಂದರೆ ಇಲ್ಲ.

-ಪ್ರಕಾಶ್ ಭಟ್, ಆಟೋ ಚಾಲಕ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link