ಗುಬ್ಬಿ :
ಪಟ್ಟಣದ ಅಮಾನಿಕೆರೆಯ ಏರಿ ಮೇಲೆ ಮೀನು ಸಾಕಾಣಿಕೆದಾರರು ನಿರ್ಮಿಸಿದ್ದ ಶೆಡ್ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಪ್ರಕರಣ ಮಂಗಳವಾರ ರಾತ್ರಿ ನಡೆದಿದೆ.
ಐದು ವರ್ಷಗಳ ಅವಧಿಗೆ ಗುತ್ತಿಗೆ ಪಡೆದು ಮೀನು ಸಾಕಾಣಿಕೆ ಮತ್ತು ಮಾರಾಟ ಮಾಡುತ್ತಿದ್ದ ಜಿ.ಎಸ್.ಮಂಜುನಾಥ್ ಮತ್ತು ಸಂಗಡಿಗರು ನಿತ್ಯ ಕಾವಲು ಮಾಡಲು ಈ ಶೆಡ್ ಅನ್ನು ಏರಿ ಮೇಲೆ ನಿರ್ಮಿಸಿಕೊಂಡಿದ್ದರು. ಎಂದಿನಂತೆ ರಾತ್ರಿ ಕಾವಲಿಗಾಗಿ 2-3 ಜನ ಮಲಗುತ್ತಿದ್ದ ಈ ಶೆಡ್ಗೆ ಬೆಂಕಿ ಹಚ್ಚಿರುವುದು ತೀವ್ರ ಆಘಾತ ತಂದಿರುವುದಾಗಿ ತಿಳಿಸಿದ ಗುತ್ತಿಗೆದಾರರು, ದುರುದ್ದೇಶದಿಂದಲೆ ಕಿಡಿಗೇಡಿಗಳು ಬೆಂಕಿ ಇಟ್ಟಿರುವ ಸಾಧ್ಯತೆ ಇದ್ದು, ಕಾವಲು ಕಾಯುವವರ ಬಲಿಗೆ ಕಿಡಿಗೇಡಿಗಳು ಯತ್ನಿಸಿದ್ದಾರೆ ಎಂದು ಆರೋಪಿಸಿದರು.
ಲಕ್ಷಾಂತರ ರೂ.ಗಳನ್ನು ವ್ಯಯ ಮಾಡಿ ಸಾಕಿರುವ ಮೀನುಗಳನ್ನು ಕಾಪಾಡಿಕೊಳ್ಳಲು ನಿತ್ಯ ಕಾವಲು ಕಾಯುವುದು ಕಾಯಕವಾಗಿದೆ. ರಾತ್ರಿ ವೇಳೆ ಈ ಶೆಡ್ನಲ್ಲೇ ಮಲಗುವ ಕಾವಲುಗಾರರು ಮತ್ತು ಗುತ್ತಿಗೆದಾರರು ಅದೃಷ್ಟವಶಾತ್ ಪಾರಾಗಿದ್ದಾರೆ. ರಾತ್ರಿ 10 ರ ಸಮಯದಲ್ಲಿ ಊಟಕ್ಕೆ ಪಟ್ಟಣಕ್ಕೆ ತೆರಳಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಇಲ್ಲಿ ನಿತ್ಯ ಮಲಗುವ ವಿಚಾರ ತಿಳಿದೇ ಬೆಂಕಿ ಹಚ್ಚಿರುವಂತೆ ಕಾಣುತ್ತಿದೆ. ಅವರಿಗೆ ನಮ್ಮಗಳ ಮೇಲೆ ವೈಯಕ್ತಿಕ ದ್ವೇಷ ಇರಬಹುದು ಎಂದು ಗುತ್ತಿಗೆದಾರ ಮಂಜುನಾಥ್ ನೇರ ಆರೋಪ ಮಾಡಿದರು.
ಶೆಡ್ನಲ್ಲಿ ಇದ್ದ ಸುಮಾರು 1.5 ಲಕ್ಷ ರೂ.ಗಳಷ್ಟು ಬೆಲೆ ಬಾಳುವ ಮೀನು ಹಿಡಿಯುವ ಬಲೆ, ತೆಪ್ಪ ಇನ್ನಿತರ ಪರಿಕರಗಳು ಸಂಪೂರ್ಣ ಸುಟ್ಟು ಕರಕಲಾಗಿದೆ. ನಿತ್ಯ 10 ಗಂಟೆಗೆ ಶೆಡ್ಗೆ ಬಂದು ಮಲಗುತ್ತಿದ್ದ ನಾವುಗಳು ಕೊಂಚ ತಡವಾಗಿ ಊಟಕ್ಕೆ ತೆರಳಿದ್ದ ಕಾರಣ ಯಾವುದೇ ಜೀವಹಾನಿಯಾಗಿಲ್ಲ. ಎಲ್ಲಾ ವಿಚಾರ ತಿಳಿದೇ ಈ ದುಷ್ಕøತ್ಯವೆಸಗಲಾಗಿದೆ. ಈ ಬಗ್ಗೆ ಗುಬ್ಬಿ ಠಾಣೆಗೆ ದೂರು ಸಲ್ಲಿಸಲಾಗಿದೆ. ಜೀವ ಬಲಿಗೆ ಮುಂದಾದ ದುಷ್ಕರ್ಮಿಗಳನ್ನು ಬಂಧಿಸಿ ನ್ಯಾಯ ಒದಗಿಸಲು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪಪಂ ಸದಸ್ಯ ಕುಮಾರ್, ಪಟೇಲ್ ಕೆಂಪೇಗೌಡ, ಮಾರುತಿ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
