ಶಿರಾ :
ಕೋವಿಡ್ ಹಿನ್ನೆಲೆಯಲ್ಲಿ ಕಳೆದ 9 ತಿಂಗಳಿಂದಲೂ ದೇಶವಷ್ಟೇ ಅಲ್ಲದೆ ಇಡೀ ಜಗತ್ತಿನಾದ್ಯಂತ ಭೀತಿಯ ವಾತಾವರಣ ಸೃಷ್ಟಿಯಾಗಿದ್ದು ಸರಿಯಷ್ಟೆ. ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಜಗತ್ತಿನಾದ್ಯಂತ ಅನೇಕ ದೇಶಗಳು ಲಸಿಕೆಯನ್ನು ಸಂಶೋಧಿಸುವ ಕೆಲಸದಲ್ಲಿ ತಲ್ಲೀನರಾಗಿದ್ದು, ರೋಗದ ಭೀತಿಯಂತೂ ಇನ್ನೂ ಕಡಿಮೆಯೇ ಆಗಿಲ್ಲ. ಲಸಿಕೆಯನ್ನು ಪ್ರಗತಿಗೊಳಿಸಿ ರೋಗಿಗಳಿಗೆ ನೀಡುವ ಕಾತುರದಿಂದ ಅನೇಕ ದೇಶಗಳು ತುದಿಗಾಲಲ್ಲಿ ನಿಂತಿದ್ದರೂ ನಿರ್ದಿಷ್ಟ ಲಸಿಕೆ ಮಾತ್ರ ಈವರೆವಿಗೂ ಲಭ್ಯವಾಗಿಲ್ಲ.
ಈ ನಡುವೆ ಅಮೇರಿಕಾ ದೇಶದ ಪೈಜರ್(Pfizer) ಕಂಪನಿಯೊಂದು ಲಸಿಕೆಯನ್ನು ಅನಾವರಣಗೊಳಿಸಿದ್ದು, ಅಮೇರಿಕಾ ದೇಶದಲ್ಲಿ ಪ್ರಪ್ರಥಮವಾಗಿ ಪೈಜರ್ ಕಂಪನಿಯ ಲಸಿಕೆಯನ್ನು ಸ್ವೀಕರಿಸಿದ ಮೊದಲ ವ್ಯಕ್ತಿ ನಮ್ಮ ದೇಶದ ಕನ್ನಡಿಗನಷ್ಟೆ ಅಲ್ಲದೆ, ಅದರಲ್ಲೂ ಅತ್ಯಂತ ಗ್ರಾಮೀಣ ಪ್ರದೇಶದ ತುಮಕೂರು ಜಿಲ್ಲೆಯ ಶಿರಾ ಮೂಲದ ವೈದ್ಯ ಎಂಬುದು ಹೆಗ್ಗಳಿಕೆಯೆ ಸರಿ.
ಕಳೆದ ಮಾರ್ಚ್ ತಿಂಗಳಿಂದಲೂ ಅಮೇರಿಕಾದಲ್ಲಿ ದಿನದ 15 ಗಂಟೆಗಳ ಕಾಲ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾ ಉತ್ತಮ ಸೇವೆ ಮಾಡುತ್ತಾ ಬಂದಿರುವ ತಜ್ಞ ವೈದ್ಯ ಡಾ.ಅರುಣ್ ರಂಗನಾಥ್, ಅಮೇರಿಕಾ ದೇಶದಲ್ಲಿ ಉತ್ತಮ ಹೆಸರನ್ನು ಸಂಪಾದಿಸಿದ್ದಾರೆ. ಅಮೇರಿಕಾ ದೇಶದಲ್ಲಿ ಲಸಿಕೆಯನ್ನು ಸ್ವೀಕರಿಸಿ ಪ್ರ್ರಯೋಗಾತ್ಮಕವಾಗಿ ಗುಣಪಡಿಸುವ ಪ್ರಕ್ರಿಯೆ ಆರಂಭಗೊಂಡಿದೆಯಾದರೂ ಲಸಿಕೆ ಸ್ವೀಕರಿಸುವ ಭೀತಿ ಮಾತ್ರ ಕಡಿಮೆಯಾಗಿಲ್ಲ.
ಈ ನಡುವೆ ಶಿರಾ ಮೂಲದ ಕನ್ನಡಿಗ ವೈದ್ಯನಿಗೆ ಪ್ರಪ್ರಥಮವಾಗಿ ಅಮೇರಿಕಾ ದೇಶ ಫೈಜರ್ ಕಂಪನಿಯ ಕೋವಿಡ್ ಲಸಿಕೆಯನ್ನು ನೀಡಿದೆ. ಮೊದಲ ಹಂತವಾಗಿ ಕಳೆದ ಎರಡು ದಿನಗಳ ಹಿಂದಷ್ಟೆ 3ಸಿಸಿ ಲಸಿಕೆಯ ಹನಿಯನ್ನು ನೀಡಲಾಗಿದ್ದು ಒಂದು ವಾರದ ನಂತರ ಮತ್ತೊಂದು ಹಂತದ ಲಸಿಕೆಯನ್ನು ಈ ವೈದ್ಯ ಪಡೆದು ಕೋವಿಡ್ ಲಸಿಕೆಯ ಫಲಿತಾಂಶಕ್ಕೆ ಈತ ಮುನ್ನುಡಿ ಬರೆಯಲಿದ್ದಾರೆ.
ಅಮೇರಿಕಾದಲ್ಲಿ ಕೊರೋನಾ ಹಾವಳಿ ಹೆಚ್ಚಾಗಿದ್ದಂತಹ ಸಂದರ್ಭದಲ್ಲಿ ಡಾ.ಅರುಣ್ ರಂಗನಾಥ್ ತಮ್ಮ ಪ್ರಾಣದ ಹಂಗನ್ನು ತೊರೆದು ಚಿಕಿತ್ಸೆ ನೀಡುವ ಮೂಲಕ ಜಗತ್ತಿನ ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಹೆಸರು ಸಂಪಾದಿಸಿದ್ದರು. ಅವರ ವೈದ್ಯಕೀಯ ಸೇವೆಯ ಸಂದರ್ಭದಲ್ಲಿ ಕ್ಯಾನ್ಸರ್ ಇದ್ದ ರೋಗಿಯೊಬ್ಬ ಮೃತಪಟ್ಟಿದ್ದನ್ನು ಬಿಟ್ಟರೆ ಮತ್ತೆ ಯಾವೊಬ್ಬ ರೋಗಿಯೂ ಕೂಡ ಮೃತಪಟ್ಟಿಲ್ಲ.
ಶಿರಾ ಮೂಲದ ಅದರಲ್ಲೂ ಶಿರಾ ನಗರದ ದಿ.ರಂಗನಾಥ್ ಅವರ ಪುತ್ರ ಡಾ.ಅರುಣ್. ತಂದೆಯ ಮರಣದ ನಂತರ ಇವರ ವಿದ್ಯಾಭ್ಯಾಸದ ಸಂಪೂರ್ಣ ಹೊಣೆ ಹೊತ್ತವರು ಗುತ್ತಿಗೆದಾರರಾದ ಪಾಂಡುರಂಗಪ್ಪ ಅವರು. ಶಿರಾದ ಸೇಂಟ್ ಆನ್ಸ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ತುಮಕೂರಿನ ಸರ್ವೋದಯ ಕಾಲೇಜಿನಲ್ಲಿ ಪಿಯೂ ಶಿಕ್ಷಣ, ಬೆಂಗಳೂರಿನ ಎಂ.ಎಂ.ಸಿ. ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆದಿದ್ದಾರೆ.
ಅಮೇರಿಕದಲ್ಲಿ ಉನ್ನತ ಶಿಕ್ಷಣ ಪಡೆಯಲು ತೆರಳಿದ ಡಾ.ಅರುಣ್ ರಂಗನಾಥ್ ಆ ದೇಶದಲ್ಲಿ ಶ್ವಾಸಕೋಶ ತಜ್ಞರಾಗಿ, ತ್ವರಿತ ಚಿಕಿತ್ಸಾ ಮತ್ತು ಔಷಧಗಳ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಮೇರಿಕಾ ಜಾರ್ಜಿಯಾ ರಾಜ್ಯದಲ್ಲಿ ಅಗಸ್ಟಾ ನಗರದ ಮೈನಿ ಹೆಲ್ತ್ ಸೆಂಟರ್ನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಅರುಣ್ ರಂಗನಾಥ್ ಬರದ ಬೀಡಿನ ಶಿರಾ ನೆಲದವರೆಂಬುದು ನಿಜಕ್ಕೂ ಹೆಗ್ಗಳಿಕೆಯೆ ಸರಿ.
ಬ್ರಿಟನ್, ನವ ದೆಹಲಿಯ ಸಫ್ದರ್ಜಂಗ್ಗಳಲ್ಲಿ ಸೇವೆ ಸಲ್ಲಿಸಿರುವ ಅನುಭವ ಹೊಂದಿರುವ ಇವರು ಅಮೇರಿಕಾದಲ್ಲಿ ಕಳೆದ 11 ವರ್ಷಗಳಿಂದಲೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಾಲ್ಕು ವರ್ಷಗಳಿಂದ ಐಸಿಯು ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ತುರ್ತು ಚಿಕಿತ್ಸಾ ಶ್ವಾಸಕೋಶ, ಆಂತರಿಕ ವೈದ್ಯದಲ್ಲಿ ಟ್ರಿಪಲ್ ಬೋರ್ಡ್ಪ್ರಮಾಣ ಪತ್ರವನ್ನು ಕೂಡ ಡಾ.ಅರುಣ್ ಹೊಂದಿದ್ದಾರೆ.
ಕನ್ನಡ ನೆಲದ ಅದರಲ್ಲೂ ಶಿರಾದಂತಹ ಗ್ರಾಮೀಣ ಭಾಗದ ಯುವಕನೊಬ್ಬ ಅಮೇರಿಕಾ ದೇಶದಲ್ಲಿ ಕೋವಿಡ್ ಜಾಗೃತಿ ಅಭಿಯಾನದಂತೆ ಕರ್ತವ್ಯ ನಿರ್ವಹಿಸುತ್ತಿರುವುದು ನಮ್ಮ ಹೆಮ್ಮೆಯೂ ಹೌದು. ಡಾ.ಅರುಣ್ ರಂಗನಾಥ್ ಅಮೇರಿಕಾದಲ್ಲಿದ್ದರೂ ಕೂಡ ಭಾರತದ ಬಗ್ಗೆ ಅತಿ ಹೆಚ್ಚು ಗೌರವ ಹೊಂದಿದ್ದಾರೆ. ಕೋವಿಡ್ ಭೀತಿ ಹೆಚ್ಚಾದಂತಹ ಸಂದರ್ಭದಲ್ಲಿ ತುಮಕೂರು ಜಿಲ್ಲೆಯೂ ಸೇರಿದಂತೆ ಅನೇಕ ಕೋವಿಡ್ ರೋಗಿಗಳಿಗೆ ಅಮೇರಿಕಾದಲ್ಲಿಯೇ ಇದ್ದುಕೊಂಡು ಟೆಲಿ ಮೆಡಿಸಿನ್ ರೀತಿಯಲ್ಲಿ ಕೋವಿಡ್ ಪ್ರಿಸ್ಕ್ರಿಪ್ಷನ್ಗಳನ್ನು ನೀಡಿದ್ದಾರೆ.
ಶಿರಾ ಮೂಲದ ಅನೇಕ ಕೋವಿಡ್ ರೋಗಿಗಳು ರೋಗವನ್ನು ಗುಣಪಡಿಸಿಕೊಳ್ಳುವ ಸಂಬಂಧವಾಗಿ ನೇರವಾಗಿ ಅಮೇರಿಕಾದಲ್ಲಿದ್ದ ಡಾ.ಅರುಣ್ ಅವರಿಗೆ ದೂರವಾಣಿಯಲ್ಲಿ ಸಂಪರ್ಕಿಸಿ ಚಿಕಿತ್ಸಾ ಕ್ರಮಗಳನ್ನು ಪಡೆದುಕೊಂಡು ಈ ನಿಟ್ಟಿನಲ್ಲಿ ಯಶಸ್ವಿಯೂ ಆಗಿದ್ದಾರೆ.
ಡಾ.ಅರುಣ್ ರಂಗನಾಥ್ ಶಿರಾದಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವಾಗ ನನ್ನ ಸಹಪಾಠಿಯೂ ಆಗಿದ್ದರು. ನಮ್ಮ ದೇಶದ ಅದರಲ್ಲೂ ನಮ್ಮದೇ ತಾಲ್ಲೂಕಿನ ನಮ್ಮ ಸಹಪಾಠಿಯೊಬ್ಬ ಅಮೇರಿಕಾ ದೇಶದಲ್ಲಿ ಕೊರೋನಾ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವುದು ನಮ್ಮ ಹೆಮ್ಮೆಯೂ ಹೌದು.
-ರೂಪೇಶ್ ಎಸ್.ಎನ್.ಕೃಷ್ಣಯ್ಯ, ಸಿರಾ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
