ತುಮಕೂರು : ಶಾಲಾ ಕಾಲೇಜು ಆರಂಭ : ಮೊದಲ ದಿನ ಹಾಜರಾತಿ ಕ್ಷೀಣ

 ತುಮಕೂರು : 

     ಮಕ್ಕಳ ಬರುವಿಕೆಗಾಗಿ ಗುಲಾಬಿ ಹಿಡಿದು ನಿಂತಿದ್ದರು. ತಳಿರು ತೋರಣ ಕಟ್ಟಿ ಸಿಂಗಾರ ಮಾಡಿದ್ದರು. ಮಕ್ಕಳು ಬಂದೊಡನೆಯೆ ಥರ್ಮಲ್ ಸ್ಕ್ರೀನಿಂಗ್ ಮಾಡಿ ಬರಮಾಡಿಕೊಂಡರು. ಎಲ್ಲ ಕಡೆಯೂ ಒಂದು ರೀತಿಯ ವಿಶಿಷ್ಟ ಮತ್ತು ವಿಶೇಷ ಅನುಭವ. ಅದೂ ಹೊಸ ವರ್ಷಾಚರಣೆಯ ಆರಂಭದ ದಿನ.

      ಜನವರಿ 1 ರಿಂದ ಶಾಲಾ ಕಾಲೇಜುಗಳ ಆರಂಭಕ್ಕೆ ಸರ್ಕಾರ ಸೂಚಿಸಿತ್ತು. ಅದರಂತೆ ಶಾಲಾ-ಕಾಲೇಜುಗಳು ಆರಂಭವಾದವು. ಹಬ್ಬದ ರೀತಿಯಲ್ಲಿ ಶಾಲೆಯನ್ನು ಸಿಂಗರಿಸಿ ಮಕ್ಕಳನ್ನು ಬರಮಾಡಿಕೊಳ್ಳಲಾಯಿತು. ಕಳೆದ 9 ತಿಂಗಳಿನಿಂದ ಅತ್ತ ತಲೆ ಹಾಕದಿದ್ದ ಶಾಲಾ-ಕಾಲೇಜು ವಿದ್ಯಾರ್ಥಿಗಳು ತರಗತಿಗಳ ಕಡೆಗೆ ಮುಖ ಮಾಡಿದರು. ಒಂದು ರೀತಿಯ ಹೊಸ ಅನುಭವದೊಂದಿಗೆ. ಹಾಜರಾದ ಬಹುತೇಕ ಎಲ್ಲರಲ್ಲಿಯೂ ಹೊಸತನದ ಜೊತೆಗೆ ಮರಳಿ ಶಾಲೆಗೆ ಬಂದ ಪುಳಕ.

      ಕೋವಿಡ್ 19 ಮಾರ್ಗಸೂಚಿ ಅನ್ವಯ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಜನವರಿ 1 ರಿಂದ 10 ಮತ್ತು 12ನೇ ತರಗತಿ ಹಾಗೂ 6 ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ವಿದ್ಯಾಗಮ ಕಾರ್ಯಕ್ರಮ ಪ್ರಾರಂಭಿಸಲಾಗಿದೆ. ಇದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಶಿಕ್ಷಣ ಇಲಾಖೆ ಶಾಲಾ ಕಾಲೇಜುಗಳಿಗೆ ಸುತ್ತೋಲೆ ಹೊರಡಿಸಿತ್ತು. ಶಾಲಾ ಆರಂಭದ ದಿನ ಹೊಸ ವರ್ಷವೂ ಆಗಿರುವುದರಿಂದ ಹಾಗೂ ಈತನಕ ಕೋವಿಡ್ ಸಂಕಷ್ಟದಲ್ಲಿ ಮನೆಯೊಳಗೆ ಇದ್ದ ಕಾರಣ ಶಾಲಾ-ಕಾಲೇಜುಗಳು ಹಬ್ಬದೋಪಾದಿಯಲ್ಲಿ ಆರಂಭವಾಗಲಿ ಎಂಬ ಸೂಚನೆಯೂ ಸಿಕ್ಕಿತ್ತು.

      ಈ ಹಿನ್ನೆಲೆಯಲ್ಲಿ ಬಹುತೇಕ ಶಾಲಾ ಕಾಲೇಜುಗಳು ಕಳೆದ ಕೆಲವು ದಿನಗಳಿಂದ ಶುಭ್ರತೆ ಮತ್ತು ಸ್ವಚ್ಛತೆಗೆ ಒಳಗಾಗಿದ್ದವು. ಬಹಳಷ್ಟು ಶಾಲಾ ಕಾಲೇಜುಗಳು ತಿಂಗಳಾನುಗಟ್ಟಲೆ ಕೊಠಡಿಗಳಿಗೆ ಬೀಗ ಹಾಕಿದ್ದರಿಂದ ಅದರೊಳಗೆ ದೂಳು ಹಿಡಿದಿತ್ತು. ಅಷ್ಟೇ ಅಲ್ಲ, ಕೆಲವು ಕಡೆ ಕಡಜಗಳು ಗೂಡು ಕಟ್ಟಿರುವ ಉದಾಹರಣೆಗಳು ವರದಿಯಾದವು. ಎಷ್ಟೋ ಶಾಲಾ ಕಾಲೇಜುಗಳ ಕಿಟಕಿ ಬಾಗಿಲುಗಳು ಗೆದ್ದಲು ಹಿಡಿದಿದ್ದವು. ಇವೆಲ್ಲವನ್ನೂ ಸರಿಪಡಿಸಿಕೊಂಡು ಅಂತೂ 9 ತಿಂಗಳ ನಂತರ ಶಾಲೆಗಳು ಶುಭಾರಂಭಗೊಂಡವು.

      ತುಮಕೂರಿನ ಹನುಮಂತಪುರ ಬಳಿ ಇರುವ ಬಿ.ಎ.ಗುಡಿಪಾಳ್ಯ ಸರ್ಕಾರಿ ಶಾಲೆಯಲ್ಲಿ ನಡೆದ ಶಾಲಾರಂಭ ಸಂದರ್ಭದಲ್ಲಿ ಜಿ.ಪಂ. ಸಿಇಓ ಶುಭ ಕಲ್ಯಾಣ್ ಪಾಲ್ಗೊಂಡಿದ್ದರು. ಕಳಶಗಳನ್ನು ಹೊತ್ತು ಶಾಲೆಗೆ ಮಕ್ಕಳನ್ನು ಕರೆತರುವ, ಹಬ್ಬದ ರೀತಿಯಲ್ಲಿ ಶಾಲೆಯನ್ನು ಆರಂಭಿಸಿದ ರೀತಿ ಇಲ್ಲಿ ಗಮನ ಸೆಳೆಯಿತು. ಪಾಲಿಕೆ ಸದಸ್ಯ ಶ್ರೀನಿವಾಸ್, ಡಿಡಿಪಿಐ ನಂಜಯ್ಯ, ಎಸ್‍ಡಿಎಂಸಿ ಅಧ್ಯಕ್ಷ ದೇವರಾಜ್ ಮತ್ತಿತರರು ಪಾಲ್ಗೊಂಡಿದ್ದರು.

ಶಾಲಾರಂಭದ ಮೊದಲ ದಿನ ಪಾಠಪ್ರವಚನಗಳನ್ನು ತೆಗೆದುಕೊಳ್ಳಲಾಗಿಲ್ಲ. ಕೋವಿಡ್ ಮುಂಜಾಗ್ರತೆಗಳ ಬಗ್ಗೆ ಮಾಹಿತಿ ನೀಡುವ ಹಾಗೂ ಮಾರ್ಗಸೂಚಿಗಳ ನಿಯಮಗಳ ಬಗ್ಗೆ ತಿಳಿ ಹೇಳುವ ಕಾರ್ಯವನ್ನು ಮೊದಲ ದಿನ ಕೈಗೊಳ್ಳಲಾಯಿತು. ಈ ಹಿನ್ನೆಲೆಯಲ್ಲಿ ಶಾಲಾ ಸಮವಸ್ತ್ರ, ಪುಸ್ತಕ, ಬ್ಯಾಗ್ ಇತ್ಯಾದಿಗಳ ಯಾವುದೇ ಹೊರೆ ಕಂಡುಬರಲಿಲ್ಲ.

ಕಡಿಮೆ ಹಾಜರಾತಿ :

      ತುಮಕೂರು ನಗರದ ಶಾಲಾ ಕಾಲೇಜು ಹಾಗೂ ಹೊರವಲಯದ ಅನೇಕ ಕಡೆಗಳಲ್ಲಿ ಮಕ್ಕಳು ಮತ್ತು ವಿದ್ಯಾರ್ಥಿಗಳ ಹಾಜರಾತಿ ಕಡಿಮೆಯೇ ಇತ್ತು. ಶೇ.40 ರಷ್ಟು ಮಕ್ಕಳ ಹಾಜರಾತಿ ಆರಂಭದ ದಿನ ಕಂಡುಬಂದಿದೆ. ಹೊಸವರ್ಷದ ಹಿನ್ನೆಲೆಯಲ್ಲಿ ಹಾಗೂ ಮಾರನೆಯ ದಿನ ಶನಿವಾರ ಇರುವ ಕಾರಣ ಹಾಜರಾತಿ ಕೊರತೆ ಇದೆ. ಮುಂದಿನ ದಿನಗಳಲ್ಲಿ ಸರಿಹೋಗಲಿದೆ ಎಂಬುದು ಅಧಿಕಾರಿಗಳ ಮತ್ತು ಶಿಕ್ಷಕರ ಅನಿಸಿಕೆ.

      ತುಮಕೂರು ಜೆ.ಪಿ.ಶಾಲೆಯಲ್ಲಿ ಸುಮಾರು 150 ಮಕ್ಕಳು ಇದ್ದಾರೆ. ಶಾಲಾರಂಭದ ದಿನ 20 ಮಕ್ಕಳು ಹಾಜರಾಗಿದ್ದರು. ಮುಖ್ಯ ಶಿಕ್ಷಕ ಅಬ್ಬಿನಹೊಳೆ ಸುರೇಶ್ ಮತ್ತು ಶಿಕ್ಷಕ ಸಿಬ್ಬಂದಿ ಮಕ್ಕಳ ಮನೆಗಳಿಗೆ ತೆರಳಿ ಶಾಲೆಗೆ ಮಕ್ಕಳನ್ನು ಕಳುಹಿಸಿಕೊಡುವಂತೆ ಮನವಿ ಮಾಡಿಕೊಂಡರು. ತುಮಕೂರು ತಾಲ್ಲೂಕು ಕೈದಾಳ ಶಾಲೆಯಲ್ಲಿ ಸುಮಾರು 10 ಮಕ್ಕಳ ಹಾಜರಾತಿ ಮೊದಲ ದಿನ ಕಂಡುಬಂದಿತು.
ಗುಬ್ಬಿ ತಾಲ್ಲೂಕು ಕೆ.ಜಿ.ಟೆಂಪಲ್ ನಾಗಸಂದ್ರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 42 ವಿದ್ಯಾರ್ಥಿಗಳಿದ್ದು, 10 ವಿದ್ಯಾರ್ಥಿಗಳು ಹಾಜರಾಗಿದ್ದರು. ನಿಯಮಾವಳಿಗಳನ್ನು ಪಾಲಿಸಿ ಅಲ್ಲಿನ ಪ್ರಾಂಶುಪಾಲ ಗಂಗಾಧರ್ ಮತ್ತು ಸಿಬ್ಬಂದಿ ಗುಲಾಬಿ ಹೂ ನೀಡಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಎಸ್‍ಓಪಿ ಬಗ್ಗೆ, ಕೋವಿಡ್ ಎಚ್ಚರಿಕೆಗಳ ಬಗ್ಗೆ ತಿಳಿಸಿಕೊಟ್ಟರು. ವಿದ್ಯಾರ್ಥಿಗಳಲ್ಲಿ ಶಾಲೆಗೆ ಬರುವ ಉತ್ಸಾಹವಿದೆ. ಆದರೆ ಶನಿವಾರದ ನಂತರ ಭಾನುವಾರ ರಜೆ ಇದ್ದು, ಹೊಸ ವರ್ಷವೂ ಬಂದಿರುವುದರಿಂದ ಸೋಮವಾರದಿಂದ ವಿದ್ಯಾರ್ಥಿಗಳು ಹಾಜರಾಗುತ್ತಾರೆ. ಅಂತಹ ವಾತಾವರಣ ಇದೆ ಎಂದು ಪ್ರಾಂಶುಪಾಲರು ತಿಳಿಸಿದರು.

      ಸಿ.ಎಸ್.ಪುರ ಕರ್ನಾಟಕ ಪಬ್ಲಿಕ್ ಶಾಲೆಗೂ ಶೇ.40 ರಷ್ಟು ವಿದ್ಯಾರ್ಥಿಗಳ ಹಾಜರಾತಿ ಕಂಡುಬಂದಿತು. ಮಕ್ಕಳು ಹಾಗೂ ಪೋಷಕರಿಗೂ ಶಾಲೆ ಆರಂಭದ ಬಗ್ಗೆ ಉತ್ತಮ ಒಲವಿದೆ. ಸೋಮವಾರದಿಂದ ಮಕ್ಕಳು ನಿಗದಿತವಾಗಿ ಶಾಲೆಗೆ ಬರಲಿದ್ದಾರೆ. ಹೊಸ ವರ್ಷ ಎಂಬ ಕಾರಣದಿಂದ ಆರಂಭದ ದಿನದಂದು ಕಡಿಮೆ ಹಾಜರಾತಿ ಇರಬಹುದು. ಆದರೆ ಹುಮ್ಮಸ್ಸಿದೆ ಎನ್ನುತ್ತಾರೆ ಉಪ ಪ್ರಾಂಶುಪಾಲ ಬಿ.ವಿ.ಗುಂಡಪ್ಪ. ಇಷ್ಟು ತಿಂಗಳುಗಳ ಕಾಲ ಮನೆಯಲ್ಲಿಯೇ ಇದ್ದು, ಮಕ್ಕಳಿಗೂ ಬೇಸರವಾಗಿದೆ. ಪೋಷಕರಿಗೂ ಸಾಕಾಗಿ ಹೋಗಿದೆ. ಹೀಗಾಗಿ ಶಾಲೆ ಆರಂಭವಾಗುವುದನ್ನೇ ಕಾಯುತ್ತಿದ್ದರು ಎನ್ನುತ್ತಾರೆ ಅವರು.

      ಕೊರಟಗೆರೆ ತಾಲ್ಲೂಕು ದುಡ್ಡನಹಳ್ಳಿ ಸರ್ಕಾರಿ ಶಾಲೆಗೆ ಶೇ.80 ರಷ್ಟು ಮಕ್ಕಳು ಉತ್ಸಾಹಭರಿತರಾಗಿ ಹಾಜರಾಗಿದ್ದರು. ಅಂತರ ಕಾಪಾಡಿಕೊಂಡು ಮಕ್ಕಳಿಗೆ ಶಾಲಾ ಆವರಣದಲ್ಲಿ ಮೊದಲದಿನ ಕೆಲವು ಹಿತನುಡಿಗಳನ್ನು ತಿಳಿಸಿಕೊಡಲಾಯಿತು. ನಿಯಮಾವಳಿಯಂತೆ ಪಾಠಪ್ರವಚನ ನಡೆಸಲಾಗುತ್ತಿದೆ ಎಂದು ಮುಖ್ಯೋಪಾಧ್ಯಾಯ ರಿಜ್ವಾನ್ ಬಾಷಾ ತಿಳಿಸಿದರು.

ಕೊಠಡಿಗಳಲ್ಲಿ ದೂಳು

      ಜಿಲ್ಲೆಯ ಬಹಳಷ್ಟು ಕಡೆ ಶಾಲಾ ಕಾಲೇಜುಗಳಲ್ಲಿ ಕೊಠಡಿಗಳು ಧೂಳು ಹಿಡಿದಿದ್ದು, ಕಿಟಕಿ ಬಾಗಿಲುಗಳಿಗೆ ಗೆದ್ದಲು ಹತ್ತಿದ್ದ ವರದಿಗಳು ಬಂದಿವೆ. ಶಾಲೆಯ ಆರಂಭದ ದಿನದಂದೇ ಕೆಲವು ಕಡೆ ತರಗತಿಗಳನ್ನು ಸ್ವಚ್ಛ ಮಾಡುವ ಕ್ರಿಯೆಯೂ ನಡೆದಿದೆ. ಅಂತೂ 9 ತಿಂಗಳ ನಂತರ ಶಾಲಾ ಕಾಲೇಜುಗಳ ಕೊಠಡಿಗಳ ಬೀಗ ತೆರೆದಂತಾಗಿದೆ. ಕೆಲವು ಶಾಲೆಗಳಲ್ಲಿ ಕಡಜಗಳು ಗೂಡು ಕಟ್ಟಿರುವ, ಇನ್ನು ಕೆಲವು ಕಡೆ ಪಕ್ಷಿಗಳು ಗೂಡು ಕಟ್ಟಿಕೊಂಡು ವಾಸಿಸುತ್ತಿರುವ, ಮತ್ತೆ ಕೆಲವು ಕಡೆ ಶಾಲೆಯ ಕಿಟಕಿ ಬಾಗಿಲುಗಳೇ ಹಾಳಾಗಿರುವ ಉದಾಹರಣೆಗಳು ಅಲ್ಲಲ್ಲಿ ಕೇಳಿ ಬಂದಿವೆ.

 

Recent Articles

spot_img

Related Stories

Share via
Copy link