ತುಮಕೂರು :
ಕೋವಿಡ್ 3ನೇ ಅಲೆ ಆತಂಕದ ನಡುವೆಯೇ ಡೆಂಗೀ, ಮೆದುಳು ಜ್ವರ ಜಿಲ್ಲೆಯಲ್ಲಿ ಉಲ್ಬಣಗೊಳ್ಳುತ್ತಿದ್ದು, 4 ತಾಲೂಕುಗಳಲ್ಲಿ ಡೆಂಗೀ ಪ್ರಕರಣಗಳು ಎರಡಂಕಿ ದಾಟಿದೆ. ತುಮಕೂರು ತಾಲೂಕಲ್ಲೆ ಅತ್ಯಧಿಕ 21 ಮಂದಿಗೆ ಡೆಂಗೆ ಜ್ವರ ಕಾಣಿಸಿಕೊಂಡಿದ್ದು, ನಾಗರಿಕರಲ್ಲಿ ಆತಂಕಕ್ಕೆ ಎಡೆಮಾಡಿದೆ.
ಜಿಲ್ಲೆಯಲ್ಲಿ ಸೆ.18ಕ್ಕೆ 71 ಡೆಂಗೀ ಪ್ರಕರಣಗಳು ಪತ್ತೆಯಾಗಿದ್ದು, ತುಮಕೂರು ತಾಲೂಕಿನಲ್ಲಿ 21, ಕೊರಟಗೆರೆಯಲ್ಲಿ 4, ಮಧುಗಿರಿಯಲ್ಲಿ 12, ಪಾವಗಡ 11, ಸಿರಾ 12, ಗುಬ್ಬಿ 1, ಕುಣಿಗಲ್ 1, ಚಿ.ನಾ.ಹಳ್ಳಿ 1, ತುರುವೇಕೆರೆಯಲ್ಲಿ ಪ್ರಕರಣ ಕಂಡುಬಂದಿದ್ದು, ಹೊರನಾಡು, ಹೊರಜಿಲ್ಲೆಯಿಂದ ಬಂದು ಜಿಲ್ಲೆಯಲ್ಲಿ ತಪಾಸಣೆ ಮಾಡಿಸಿಕೊಂಡ ಐವರಲ್ಲಿ ಡೆಂಗೀ ದೃಢಪಟ್ಟಿದ್ದು, ತಿಪಟೂರು ತಾಲೂಕಲ್ಲಿ ಮಾತ್ರ ಒಂದು ಡೆಂಗೆ ಪ್ರಕರಣಗಳು ಕಂಡುಬಂದಿಲ್ಲ. ಕಳೆದ ವರ್ಷ 30 ಡೆಂಗೀ ಪ್ರಕರಣಗಳು ಕಂಡುಬಂದಿದ್ದು, ಈ ವರ್ಷ ಕಳೆಯುವಷ್ಟರಲ್ಲಾಗಲೇ ಪ್ರಕರಣಗಳು ದುಪ್ಪಟ್ಟಾಗಿ ಶತಕ ಸಮೀಪಿಸುತ್ತದೆಂಬ ಕಳವಳಕ್ಕೀಡುಮಾಡಿದೆ.
3 ತಿಂಗಳಿಂದ ಹೆಚ್ಚುತ್ತಿರುವ ಡೆಂಗೆ:
ಜುಲೈ ತಿಂಗಳಲ್ಲಿ ಅತೀ ಹೆಚ್ಚು 32 ಪ್ರಕರಣಗಳು ಕಂಡುಬಂದರೆ,ಆಗಸ್ಟ್ನಲ್ಲಿ 9, ಸೆಪ್ಟೆಂಬರ್ 18ರವರೆಗೆ 10 ಪ್ರಕರಣಗಳು ಕಾಣಿಸಿಕೊಂಡಿದೆ. ಈಜಿಫ್ಟ್ ಜಾತಿಯ ಸೊಳ್ಳೆ ಕಚ್ಚುವಿಕೆಯಿಂದ ವೈರಾಣುವಿನ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುವ ಕಾಯಿಲೆ ಡೆಂಗೆ ಯಾಗಿದ್ದು, ಜ್ವರ, ರಕ್ತಸ್ರಾವ, ಶಾಕ್ ಸಿಂಡ್ರೊಮಾ ಹೀಗೆ 3 ಸ್ವರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ತೀವ್ರ ಜ್ವರ, ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಮಾಂಸಖಂಡ, ಕೀಲುಗಳಲ್ಲಿ ನೋವು ಡೆಂಗೀ ಜ್ವರದ ಲಕ್ಷಣಗಳಾಗಿದೆ. ರಕ್ತಸ್ರಾವ ಹಾಗೂ ಶಾಕ್ಸಿಂಡ್ರೋಮ್ ಸ್ವರೂಪದ ಡೆಂಗೀಯಲ್ಲಿ ಜ್ವರ, ಮೈಕೈ ನೋವಿನ ಜೊತೆಗೆ ಬಾಯಿ, ಮೂಗು, ವಸಡುಗಳಿಂದ ರಕ್ತಸ್ರಾವ, ಚರ್ಮದ ಮೇಲೆ ರಕ್ತಸ್ರಾವದ ಗುರುತುಗಳು, ಕಪ್ಪುಮಲ ವಿರ್ಸಣೆ, ವಿಪರೀತ ಬಾಯಾರಿಕೆ, ಜ್ಞಾನ ತಪ್ಪುವ ಹಂತಕ್ಕೆ ರೋಗಿ ತಲುಪುತ್ತಾರೆ ಎಂದು ಜಿಲ್ಲಾರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಟಿ.ವಿ.ಪುರುಷೋತ್ತಮ್ ಮಾಹಿತಿ ನೀಡಿದ್ದಾರೆ.
ಸ್ವಯಂ ವೈದ್ಯ ಪ್ರಾಣಕ್ಕೆ ಎರವು ಸಂಭವ:
ಈ ಲಕ್ಷಣಗಳು ಕಂಡ ಕೂಡಲೇ ವೈದ್ಯರಿಂದ ಪರೀಕ್ಷೆಗೊಳಪಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯುವುದು ಒಳಿತು. ಸ್ವಯಂ ವೈದ್ಯ ಪ್ರಾಣಕ್ಕೆ ಎರವಾಗಬಹುದು ಎಂದು ರೋಗ ನಿಯಂತ್ರಣಾಧಿಕಾರಿಗಳು ಎಚ್ಚರಿಸಿದ್ದಾರೆ.
ತುಮಕೂರಲ್ಲಿ ಚಿಕೂನ್ಗುನ್ಯಾ ಅಧಿಕ : ಜ್ವರ, ಕೀಲುಗಳಲ್ಲಿ ತೀವ್ರವಾದ ನೋವು, ಊತ ಕಾಣಿಸುವ ಚಿಕೂನ್ಗುನ್ಯಾ ರೋಗ ಸಹ ಜಿಲ್ಲೆಯಲ್ಲಿ ಹೆಚ್ಚುತ್ತಿದ್ದು ತುಮಕೂರಲ್ಲಿ 22, ಮಧುಗಿರಿ 14, ಪಾವಗಡ 16, ಸಿರಾ 04, ಗುಬ್ಬಿ 14, ತುರುವೇಕೆರೆ 1, ಉಳಿದಂತೆ ಕೊರಟಗೆರೆ, ಗುಬ್ಬಿ ಕುಣಿಗಲ್, ತಿಪಟೂರು, ಚಿ.ನಾಹಳ್ಳಿ, ಹಾಗೂ ವಲಸಿಗರ ಮೂಲಕ ಕ್ರಮವಾಗಿ ಇಬ್ಬರಲ್ಲಿ ರೋಗ ಕಾಣಿಸಿಕೊಂಡಿದೆ.
ಮಲೇರಿಯಾ ಗಣನೀಯ ಇಳಿಕೆ: ಇನ್ನೂ ಮಲೇರಿಯಾ 3 ಪ್ರಕರಣಗಳು ಮಾತ್ರ ಇಲ್ಲಿಯವರೆಗೆ ಕಾಣಿಸಿಕೊಂಡಿದ್ದು, ಆನೆಕಾಲು ರೋಗ 14 ಮಂದಿಯಲ್ಲಿ ಗುರುತಿಸಲ್ಪಟ್ಟಿದೆ. 2022ರ ವೇಳೆಗೆ ಜಿಲ್ಲೆಯನ್ನೂ ಮಲೇರಿಯಾ ಮುಕ್ತವಾಗಿಸುವ ಗುರಿಯನ್ನು ಜಿಲ್ಲಾ ಆರೋಗ್ಯ ಇಲಾಖೆ ಹಾಕಿಕೊಂಡಿದೆ.
ಲಾರ್ವಾ ನಿಯಂತ್ರಣ ನಗರಗಳಲ್ಲಿ ವಿಫಲದಿಂದ ರೋಗ ಉಲ್ಬಣ :
ಸೊಳ್ಳೆಗಳು ಉತ್ಪತ್ತಿ ತಾಣಗಳ ನಾಶ ಪಡಿಸುವ ಪ್ರಕ್ರಿಯೆ ಆರೋಗ್ಯ , ಆಶಾ ಕಾರ್ಯಕರ್ತೆಯರಿಂದ ಗ್ರಾಮಾಂತರ ಪ್ರದೇಶದಲ್ಲಿ ಪ್ರತಿ 15 ದಿನಕ್ಕೊಮ್ಮೆ ಯಶಸ್ವಿಯಾಗಿ ನಡೆಯುತ್ತಿರುವುದು ಗ್ರಾಮಾಂತರ ಪ್ರದೇಶದಲ್ಲಿ ಡೆಂಗೆ, ಚಿಕೂನ್ಗುನ್ಯಾ ಹೆಚ್ಚಿನ ಪ್ರಮಾಣದಲ್ಲಿ ಪಸರಿಸುತ್ತಿಲ್ಲ. ಆದರೆ ನಗರ, ಪಟ್ಟಣ ಪ್ರದೇಶದಲ್ಲಿ ಅಧಿಕವಾಗಲು ವಾರ್ಡ್ಗಳಲ್ಲಿ ಸೊಳ್ಳೆ ಉತ್ಪತ್ತಿಗಳ ತಾಣದ ನಿಯಂತ್ರಣ, ಲಾರ್ವಾ ಸಮೀಕ್ಷೆ ಸಮರ್ಪಕವಾಗಿ ನಡೆಯುತ್ತಿಲ್ಲ. ಆಶಾ ಕಾರ್ಯಕರ್ತೆಯರ ನಗರ ವ್ಯಾಪ್ತಿಯಲ್ಲಿ ಇಲ್ಲದಿರುವುದು, ಆರೋಗ್ಯ ಕಾರ್ಯಕರ್ತೆಯರ ಕೊರತೆ, ಚರಂಡಿ, ಮಳೆ ನೀರು ಗುಂಡಿಗಳಲ್ಲಿ ಹಾಗೆ ನಿಲ್ಲುತ್ತಿರುವುದರಿಂದ ಸೊಳ್ಳೆಗಳ ಸಂತತಿ ಹೆಚ್ಚಿ, ಡೆಂಗೆ, ಚಿಕೂನ್ಗುನ್ಯಾ ರೋಗಗಳು ಅಧಿಕವಾಗಲು ಆಸ್ಪದ ಒದಗಿಸಿದೆ. ತುಮಕೂರು ಮಹಾನಗರಪಾಲಿಕೆ ಆರೋಗ್ಯ ಇಲಾಖೆಗೆ ಸಾಥ್ ನೀಡಿ ಸೊಳ್ಳೆ ಉತ್ಪತ್ತಿ ತಾಣ ನಿಯಂತ್ರಣಕ್ಕೆ ಇನ್ನಾದರೂ ಲಕ್ಷ್ಯ ವಹಿಸದಿದ್ದರೆ ಕೋವಿಡ್ ಜೊತೆಗೆ ಸಾಂಕ್ರಾಮಿಕ ರೋಗಗಳು ಮಾರಣಾಂತಿಕವಾಗುವ ಅಪಾಯವಿದೆ.
26 ಮಂದಿಯಲ್ಲಿ ಮೆದುಳಜ್ವರ
ಜಿಲ್ಲೆಯಲ್ಲಿ ಮಾರಣಾಂತಿಕವಾದ ಮೆದುಳುಜ್ವರ 26 ಮಂದಿಯಲ್ಲಿ ಕಂಡುಬಂದಿದ್ದು, ಜಿಲ್ಲಾ, ತಾಲೂಕು ಮಟ್ಟದಲ್ಲಿ ಸೂಕ್ತ ಚಿಕಿತ್ಸೆಯೂ ಲಭ್ಯವಿಲ್ಲದ ಪರಿಸ್ಥಿತಿ ಇದೆ. ಹತ್ತಕ್ಕೂ ಮೇಲ್ಪಟ್ಟು ಮೆದುಳು ಜ್ವರದಿಂದ ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿದ್ದು, ಬೆಂಗಳೂರಿನ ನಿಮ್ಹಾನ್ಸ್ ಮತ್ತಿತರ ರಾಜಧಾನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಕಳವಳ ಕಾರಿ ಎನಿಸಿದೆ.
ಮಳೆ ಬೀಳುವ ಸಂದರ್ಭದಲ್ಲಿ ನೀರು ನಿಂತು ಡೆಂಗೆ, ಚಿಕೂನ್ಗುನ್ಯಾ ಸೊಳ್ಳೆಯಿಂದ ಬರಲು ಕಾರಣವಾಗುತ್ತದೆ. ಜುಲೈತಿಂಗಳಲ್ಲಿನ ಪ್ರಕರಣಕ್ಕೆ ಹೋಲಿಸಿದರೆ. ಆಗಸ್ಟ್, ಸೆಪ್ಟೆಂಬರ್ನಲ್ಲಿ ಸ್ವಲ್ಪ ಕಡಿಮೆಯಾಗಿದೆ. ಡೆಂಗೆ, ಚಿಕೂನ್ಗುನ್ಯಾ ರೋಗ ಲಕ್ಷಣವುಳ್ಳವರು ತಡ ಮಾಡದೆ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆಯಬೇಕು. ಸ್ವಯಂ ವೈದ್ಯ ಒಳ್ಳೆಯದಲ್ಲ.
-ಡಾ.ಟಿ.ವಿ.ಪುರುಷೋತ್ತಮ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ.
ಎಸ್.ಹರೀಶ್ ಆಚಾರ್ಯ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
