ತುಮಕೂರು :
ರಾಜ್ಯದಲ್ಲಿ ವೈಜ್ಞಾನಿಕ ಗಣಿಗಾರಿಕೆಗೆ ಪೂರಕವಾಗುವ ‘ನೂತನ ಗಣಿ ನೀತಿ’ ರೂಪಿಸುವುದರ ಜೊತೆಗೆ ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ಆರ್. ನಿರಾಣಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ನಡೆದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಕೆಎಂಇಆರ್ಸಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಹೊಸ ಮೈನಿಂಗ್ ನೀತಿಯಲ್ಲಿ ನಿಯಮಗಳ ಸರಳೀಕರಣಗೊಳಿಸಲಾಗುವುದು. ಇಲಾಖೆ ಸಚಿವನಾದ ಬಳಿಕ ಸಾಕಷ್ಟು ಬದಲಾವಣೆಗಳನ್ನು ತರಲಾಗುತ್ತಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಖನಿಜ ಭವನ ನಿರ್ಮಿಸುವುದು, ವಿಭಾಗ ಮಟ್ಟದಲ್ಲಿ ಮೈನಿಂಗ್ ಅದಾಲತ್ ಆಯೋಜಿಸಿ ಗಣಿಗಾರಿಕೆಗೆ ಸಂಬಂಧಿತ ಸಮಸ್ಯೆಗಳಿಗೆ ಅದಾಲತ್ ನಡೆಯುವ ಸ್ಥಳದಲ್ಲಿಯೇ ಪರಿಹಾರ ನೀಡಲಾಗುವುದು. ಕ್ರಷರ್, ಕಲ್ಲು ಗಣಿಗಾರಿಕೆ ನಡೆಸುವ ಉದ್ಯಮಗಳಿಗೆ ಸೂಕ್ತ ತರಬೇತಿ ನೀಡಲು ಬಳ್ಳಾರಿ ಜಿಲ್ಲೆಯಲ್ಲಿ ‘ಸ್ಕೂಲ್ ಆಫ್ ಮೈನಿಂಗ್’ ಆರಂಭಿಸಲು ಸಿದ್ಧತೆ ನಡೆಸಲಾಗಿದೆ ಎಂದರು.
18 ಸಾವಿರ ಕೋಟಿ ಬಾಕಿ:
ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣಗಳು ಸರ್ವೋಚ್ಛ ನ್ಯಾಯಾಲಯದಲ್ಲಿ ಇತ್ಯರ್ಥವಾಗದೆ ಇರುವುದರಿಂದ ಗಣಿ ಬಾಧಿತ ಪ್ರದೇಶಗಳಿಗೆ ಪರಿಹಾರ ಹಾಗೂ ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಅನುದಾನ ಸರ್ವೋಚ್ಛ ನ್ಯಾಯಾಲಯದಿಂದ ಬಿಡುಗಡೆಯಾಗಿಲ್ಲ. ತುಮಕೂರು, ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳಿಗೆ 18 ಸಾವಿರ ಕೋಟಿ ರೂ. ಅನುದಾನ ಬಾಕಿ ಬರಬೇಕಿದೆ. ಈ ಪೈಕಿ ತುಮಕೂರು ಜಿಲ್ಲೆಗೆ ಸುಮಾರು 2554 ಕೋಟಿ ರೂ. ಬರಬೇಕಿದೆ ಎಂದರು.
ಸಭೆಯಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್, ಕೆಎಂಇಆರ್ಸಿ ವ್ಯವಸ್ಥಾಪಕ ನಿರ್ದೇಶಕ ಪಿ.ಸಿ.ರೇ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕ ಪಿ.ಎನ್.ರವೀಂದ್ರ, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ಕುಮಾರ್ ಶಹಾಪುರವಾಡ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕ ಮಹೇಶ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.
ಖರ್ಚಿಗೆ ಕಾಸಿಲ್ಲದಾಗ ಇಟ್ಟಿಗೆ ಗೂಡಿನ ಮೇಲೆ ರೈಡ್ ಮಾಡ್ತಾರೆ : ಸಚಿವ ಜೆಸಿಎಂ
ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಜಿಲ್ಲೆಯ ಗಣಿ ಬಾಧಿತ ಪ್ರದೇಶದ ಅಭಿವೃದ್ಧಿಗೆ ಸುಮಾರು 2554 ಕೋಟಿಯಷ್ಟು ಹಣವನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರಲ್ಲ ಇಟ್ಟಿಗೆ ನಿರ್ಮಾಣಕ್ಕಾಗಿ ಸಣ್ಣ ನೀರಾವರಿ ಇಲಾಖೆ ಅನುಮತಿಯೊಂದಿಗೆ ಕೆರೆಯಲ್ಲಿ ಮಣ್ಣೆತ್ತಲು ಅವಕಾಶ ನೀಡಲಾಗಿದೆ. ಆದರೆ ಖರ್ಚಿಗೆ ಕಾಸಿಲ್ಲದಂಯಾದ ಇಟ್ಟಿಗೆ ಗೂಡಿನ ಮೇಲೆ ರೈಡ್ ಮಾಡುವ ಛಾಳಿಯನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಬೆಳೆಸಿಕೊಂಡಿದ್ದಾರೆಂದು ಇಲಾಖಾ ಸಚಿವರ ಬಳಿ ನೇರವಾಗಿ ಪ್ರಸ್ತಾಪಿಸಿದರು.
ಗಣಿ ಬಾಧಿತ ಪ್ರದೇಶದವರಿಗೆ ಶೀಘ್ರ ಪರಿಹಾರ ಕಲ್ಪಿಸಬೇಕು.. ಗಣಿ ಬಾಧಿತ ಪ್ರದೇಶಗಳಲ್ಲಿ ಆರೋಗ್ಯ, ಪ್ರವಾಸೋದ್ಯಮ ಮೂಲಭೂತ ಸೌಕರ್ಯ, ರಸ್ತೆ ಸಂಪರ್ಕ, ನೀರಾವರಿ, ಕೌಶಲ್ಯಾಭಿವೃದ್ಧಿ, ಮಾಲಿನ್ಯ ನಿಯಂತ್ರಣ, ಪರಿಸರ ಸಂರಕ್ಷಣೆಗಾಗಿ ಇಲಾಖೆಯಿಂದ ಮೀಸಲಿಟ್ಟಿರುವ ಅನುದಾನದ ವಿವರವನ್ನು ನೀಡಬೇಕು.
-ಜಿ.ಎಸ್.ಬಸವರಾಜು, ಸಂಸದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2021/07/DSC_6066-scaled-e1625554112491.jpg)