ತುಮಕೂರು :
ತ್ರಿವಿಧ ದಾಸೋಹಿ ಸಿದ್ಧಗಂಗೆಯ ಲಿಂಗೈಕ್ಯ ಡಾ.ಶ್ರೀ.ಶಿವಕುಮಾರಸ್ವಾಮೀಜಿ ಅವರ ಪುಣ್ಯಸ್ಮರಣೆ ದಿನವಾದ ಜನವರಿ 21ಅನ್ನು ದಾಸೋಹ ದಿನವಾಗಿ ಆಚರಿಸಲು ಸರಕಾರದಿಂದ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದರು.
ನಗರದ ಸಿದ್ಧಗಂಗಾ ಮಠದಲ್ಲಿ ಡಾ.ಶ್ರೀ. ಶಿವಕುಮಾರಮಹಾಸ್ವಾಮಿಗಳ ದ್ವಿತೀಯ ವರ್ಷದ ಪುಣ್ಯಸಂಸ್ಮರಣೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯಮಂತ್ರಿಗಳು ತ್ರಿವಿಧ ದಾಸೋಹವನ್ನು ಸಮಾಜಕ್ಕೆ ಪರಿಚಯಿಸಿದ್ದ ಶ್ರೀಗಳ ಪುಣ್ಯಸ್ಮರಣೆ ದಿನವನ್ನು ದಾಸೋಹ ದಿನವಾಗಿ ಘೋಷಿಸಬೇಕೆಂಬುದು ಭಕ್ತರ ಅಭಿಲಾಷೆಯಾಗಿದ್ದು, ಈ ಸಂಬಂಧ ಆದೇಶ ಹೊರಡಿಸಲಾಗುವುದು. ಜೊತೆಗೆ ಶ್ರೀಗಳ ಹುಟ್ಟೂರು ವೀರಾಪುರದಲ್ಲಿ 111 ಅಡಿ ಪುತ್ಥಳಿಸ್ಥಾಪನೆಯೊಂದಿಗೆ ಸಮಗ್ರ ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳಿಸಲು ಈಗಾಗಲೇ 25 ಕೋಟಿ ಬಿಡುಗಡೆಗೊಳಿಸಿದ್ದು, ಶ್ರೀಮಠದಲ್ಲಿ ವಸ್ತುಪ್ರದರ್ಶನ ಕೇಂದ್ರ ಸ್ಥಾಪಿಸಲು ಕೋರಿರುವ 10 ಕೋಟಿ ಅನುದಾನ ಬಿಡುಗಡೆಗೂ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಮಾನವೀಯ ಮುಖ ಅನಾವರಣ:
ನಡೆದಾಡುವ ದೇವರೆಂದೇ ನಾವೆಲ್ಲ ಭಾವಿಸಿದ್ದ ಶಿವಕುಮಾರಸ್ವಾಮೀಜಿ ಅವರು ಮಠಕ್ಕೆ ದರ್ಶನ ಪಡೆಯಲು ಬಂದಾಗಲೆಲ್ಲ ಸಮಾಜ ನಾಡು ಮುನೆಡೆಯಬೇಕಾದ ಕುರಿತು ಮಾರ್ಗದರ್ಶನ ಮಾಡುತ್ತಿದ್ದರು. ಜಾತಿ ಮತ ಭೇದವಿಲ್ಲದೇ ಎಲ್ಲಾ ಜಾತಿ, ಧರ್ಮೀಯ ಮಕ್ಕಳಿಗೆಗೆ ಉಚಿತ ಅನ್ನ, ಆಶ್ರಯ ವಿದ್ಯೆ ನೀಡಿ ಮಾನವೀಯ ಮುಖವನ್ನು ಅನಾವರಣಗೊಳಿಸಿದ್ದರು. ಶತಮಾನದ ಪಲ್ಲಟಗಳಿಗೆ ಸಾಕ್ಷಿಪ್ರಜ್ಞೆಯಂತಿದ್ದ ಶ್ರೀಗಳು ತಾವೂ ಬೆಳೆದು ತಮ್ಮೊಂದಿಗೆ ಹತ್ತು ಜನರನ್ನು ಸಾಧಕರಾಗಿಸುವ ಮಾರ್ಗವನ್ನು ನಮಗೆಲ್ಲ ತೋರಿಸಿಕೊಟ್ಟಿದ್ದಾರೆ. ಪ್ರಸಾದ, ಕಾಯಕದ ಮಹತ್ವವನ್ನು ತೋರಿಸಿಕೊಟ್ಟವರು ಶ್ರೀಗಳು ಎಂದು ಬಣ್ಣಿಸಿದರು.
ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಮುಖ್ಯ ಅತಿಥಿಯಾಗಿ ಮಾತನಾಡಿ ಹತ್ತು ಸಾವಿರ ಮಕ್ಕಳಿಗೆ ಉಚಿತ ಅನ್ನ, ಆಹಾರ, ವಸತಿ, ವಿದ್ಯೆ ಕಲ್ಪಿಸಿದ ಸಿದ್ಧಗಂಗಾಶ್ರೀಗಳ ಕಾರ್ಯ ಪವಿತ್ರವಾದದು. ಅವರು ನಮ್ಮನ್ನು ಭೌತಿಕವಾಗಿ ಅಗಲಿದ್ದರೂ ಸಾಧನೆಯ ಮೂಲಕ ಜೀವಂತವಾಗಿದ್ದರು. ಪ್ರಕೃತಿಯನ್ನು ಉಳಿಸುವಲ್ಲಿ ಮಠ, ಆಶ್ರಮ ಗುರುಕುಲಗಳ ಕೊಡುಗೆ ಅಪಾರವಾಗಿದ್ದು, ಪಾಶ್ಚಿಮಾತ್ಯ ಸಂಸ್ಕøತಿಗೆ ಮಾರುಹೋಗಿರುವ ನಾವು ದೇವಭಾಷೆ, ವೈಜ್ಞಾನಿಕ ಅಂತಃಸತ್ವವುಳ್ಳ ಭಾಷೆ ಸಂಸ್ಕøತವನ್ನು ಉಪೇಕ್ಷಿಸಿದ್ದೇವೆ. ತಕ್ಷಶಿಲಾ, ನಳಂದಾ, ಕಾಶಿಯಂತಹ ಶ್ರೇಷ್ಟ ವಿವಿಗಳನ್ನು ಹೊಂದಿದ್ದ ಭಾರತಕ್ಕೆ ವಿದೇಶಿಯರು ಆಗಮಿಸಿ ಅಭ್ಯಸಿಸಿದ್ದರು. ಆದರೆ ಇಂದು ವಿದೇಶಕ್ಕೆ ಹಾರುವವರು ಹೆಚ್ಚಾಗಿದ್ದಾರೆ. ಸೊನ್ನೆ ಕಂಡುಹಿಡಿದು ಗಣಿತಕ್ಕೆ ಅಮೂಲ್ಯ ಕೊಡುಗೆ ನೀಡಿದ ಭಾರತದ ಪ್ರತೀ ಹಳ್ಳಿ, ಪ್ರತೀ ಮನೆಗಳು ಆತ್ಮನಿರ್ಭರವಾಗಬೇಕು ಎಂದು ಕರೆ ನೀಡಿದರು.
ಸಿಎಂ ಬಿಎಸ್ವೈ ಅಂತರಂಗದ ಶಿಷ್ಯರು:
ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ ಗ್ರಾಮೀಣ ಮಕ್ಕಳು ವಿದ್ಯಾವಂತರಾಗಿ ಸಮಾಜದಲ್ಲಿ ಎತ್ತರಕ್ಕೆ ಬೆಳೆಯಬೇಕೆಂಬುದೇ ಲಿಂ.ಶಿವಕುಮಾರ ಶ್ರೀಗಳ ಸಂಕಲ್ಪವಾಗಿತ್ತು. ಅದೇ ಕಾರಣಕ್ಕೆ ನೂರಾರು ಶಾಲಾ-ಕಾಲೇಜುಗಳನ್ನು ತೆರೆದು ಅನ್ನ ಆಶ್ರಯ ನೀಡಿ ಪೊರೆದರು. ಶ್ರೀಗಳು ಹಾಕಿಕೊಟ್ಟ ಸನ್ಮಾರ್ಗಗಳಲ್ಲೇ ಶ್ರೀ ಮಠ ಸಾಗುತ್ತಿದ್ದು, ಅವರು ಬದುಕಿದ್ದ ಪ್ರತೀ ಕ್ಷಣವೂ ಸ್ಮರಣೀಯವೇ.111 ವರ್ಷ ಬಾಳಿ, 89 ವರ್ಷ ಪೀಠಾಧ್ಯಕ್ಷರಾಗಿದ್ದ ಸಂತಶ್ರೇಷ್ಟರನ್ನು ನಾವು ಕಾಣಲು ಸಾಧ್ಯವಿಲ್ಲ. ಕಾಯ ಮತ್ತು ಕಾಯಕ ಎರಡನ್ನೂ ಕೈಲಾಸವಾಗಿಸಿ ತಪಸ್ಸಿನ ಬದುಕು ಸವೆಸಿದರು. ಎಲ್ಲಾ ವರ್ಗದವರಿಗೂ ಸನ್ಮಾರ್ಗದ ನಡೆಯನ್ನು ಭೋದಿಸುತ್ತಿದ್ದ ಶ್ರೀಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಂತರಂಗದ ಶಿಷ್ಯರಾಗಿದ್ದರು ಎಂದರು.
ನಿತ್ಯ ಉಚಿತ ಆರೋಗ್ಯ ತಪಾಸಣೆ ಸೇವೆ:
ಡಶ್ರೀಗಳ ಪುಣ್ಯಸ್ಮರಣೆ ನೆನಪಲ್ಲಿ ಸಿದ್ಧಗಂಗಾ ಆಸ್ಪತ್ರೆಯಿಂದ ಜನಸಾಮಾನ್ಯರು, ಬಡವರಿಗೆ ಅನುಕೂಲವಾಗುವಂತೆ ಪ್ರತೀ ದಿನ ಸಂಜೆ 6.30ರಿಂದ 8ರವರೆಗೆ ಉಚಿತ ಹೊರರೋಗಿ ತಪಾಸಣೆ ಸೇವೆಯನ್ನು ಇಂದಿನಿಂದಲೇ ಆರಂಭಿಸಲಾಗಿದೆ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸಂಚಾರಿ ಆರೋಗ್ಯ ಸೇವೆಯನ್ನು ಪ್ರಾರಂಭಿಸಲಾಗಿದೆ ಎಂದು ಶ್ರೀ ಸಿದ್ಧಲಿಂಗಸ್ವಾಮೀಜಿ ತಿಳಿಸಿದರು.
ಪಂಚಮಸಾಲಿ ಗುರುಪೀಠದ ಶ್ರೀ ವಚನಾನಂದಸ್ವಾಮೀಜಿ ಮಾತನಾಡಿ ದಾಸೋಹ ದಿನವಾಗಿ ಸಿದ್ಧಗಂಗಾಶ್ರೀಗಳ ಪುಣ್ಯಸ್ಮರಣೆಯನ್ನು ಘೋಷಿಸಬೇಕೆಂದು ಒತ್ತಾಯಿಸಿದರು. ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
3ಡಿ ಚಿತ್ರಾವಳಿ ಬಿಡುಗಡೆ:
ಕರ್ನಾಟಕ ರಾಜ್ಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದಿಂದ ಶ್ರೀಗಳ ಹುಟ್ಟೂರು ವೀರಾಪುರ ಸಮಗ್ರ ಅಭಿವೃದ್ಧಿಯ 3ಡಿ ಚಿತ್ರಾವಳಿಯನ್ನು ಸಿಎಂ ಬಿಡುಗಡೆಗೊಳಿಸಿದರು. ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಸಂಸದ ಜಿ.ಎಸ್.ಬಸವರಾಜು, ವೀರಶೈವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಪರಮಶಿವಯ್ಯ, ಮೌಂಟು ಅಬು ಮುಖ್ಯಸ್ಥರಾದ ಮೃತ್ಯುಂಜಯ, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಸಿ.ಎಂ.ರಾಜೇಶ್ಗೌಡ, ಚಿದಾನಂದ ಎಂ.ಗೌಡ, ಮಸಾಲೆ ಜಯರಾಂ, ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್ಗೌಡ, ಮಾಜಿ ಸಚಿವ ಎಸ್.ಶಿವಣ್ಣ, ಮಾಜಿ ಎಂಎಲ್ಸಿ ಡಾ.ಹುಲಿನಾಯ್ಕರ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಭೃಂಗೀಶ್, ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಪರಮೇಶ್, ಡಿಸಿ ಡಾ.ರಾಕೇಶ್ಕುಮಾರ್, ಎಸ್ಪಿ ಡಾ.ಕೆ.ವಂಶಿಕೃಷ್ಣ, ಸಿಇಒ ಶುಭಕಲ್ಯಾಣ್, ಎಡಿಸಿ ಚನ್ನಬಸವಪ್ಪ, ಎಸಿ ಅಜಯ್ ಸೇರಿ ಜಿಲ್ಲಾಮಟ್ಟದ ಅಧಿಕಾರಿಗಳು, ಮಠದ ಆಡಳಿತ ಮಂಡಳಿಯವರು ಹಾಜರಿದ್ದರು. ಡಾ.ಶಾಲಿನಿ ಕಾರ್ಯಕ್ರಮ ನಿರೂಪಿಸಿದರು. ಮಠದ ಮಕ್ಕಳು ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು.
ಗದ್ದುಗೆಗೆ ವಿಶೇಷ ಪೂಜೆ, ದಾಸೋಹದ ಸಮಾರಾಧನೆ:
ವೇದಿಕೆ ಕಾರ್ಯಕ್ರಮಕ್ಕೂ ಮುನ್ನಾ ಮುಂಜಾನೆಯಿಂದಲೇ ಶ್ರೀಗಳ ಗದ್ದುಗೆಗೆ ಸಿದ್ಧಲಿಂಗಸ್ವಾಮೀಜಿ ನೇತೃತ್ವದಲ್ಲಿ ವಿಶೇಷ ಪೂಜೆ, ರುದ್ರಾಭಿಷೇಕ, ಶ್ರೀಗಳ ಭಾವಚಿತ್ರ, ಪುತ್ಥಳಿಯನ್ನು ಬೆಳ್ಳಿಪಲ್ಲಕ್ಕಿಯಲ್ಲಿಟ್ಟು, ಪೂರ್ಣ ಕುಂಬ ಕಲಶ, ನಾದಸ್ವರ ಮೊದಲಾದ ಕಲಾತಂಡಗಳೊಂದಿಗೆ ಮೆರವಣಿಗೆ ನೆರವೇರಿಸಲಾಯಿತು. ಮಠದ 6 ಕಡೆ ಭಕ್ತರಿಗೆ, ಗಣ್ಯರಿಗೆ ದಾಸೋಹದ ಸಮಾರಾಧನೆ ನೆರವೇರಿಸಲಾಯಿತು. ರಾತ್ರಿಯವರೆಗೆ 20ಸಾವಿರಕ್ಕೂ ಅಧಿಕ ಮಂದಿ ಗದ್ದುಗೆ ದರ್ಶನ ಮಾಡಿ ದಾಸೋಹ ಸವಿದರು. ಮಠದ ರಸ್ತೆಯುದ್ದಕ್ಕೂ ಮಜ್ಜಿಗೆ, ಹೆಸರುಬೇಳೆ ವಿತರಣೆ, ಸಿದ್ಧಗಂಗಾ ಆಸ್ಪತ್ರೆಯಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರವೂ ಗಮನಸೆಳೆಯಿತು.

ಶ್ರೀಗಳ ತತ್ವಗಳಡಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ : ಡಿಸಿಎಂ
ಉಪಮುಖ್ಯಮಂತ್ರಿ ಹಾಗೂ ಉನ್ನತಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಮಾತನಾಡಿ ಸಿದ್ಧಗಂಗಾ ಶ್ರೀಗಳು ಹಾಕಿಕೊಟ್ಟ ತ್ರಿವಿಧ ದಾಸೋಹ ಮಾರ್ಗ, ಸರ್ವರ ಏಳಿಗೆಯ ಸೂತ್ರಗಳು ಇಡೀ ನಾಡಿಗೆ ಮಾರ್ಗದರ್ಶಕವಾಗಿವೆ. ಶ್ರೀ ಮಠದಲ್ಲಿ ಆಶ್ರಯ ಪಡೆದು ಬೆಳೆದ ಮಕ್ಕಳು ಇಂದು ಜಗದ ಎಲ್ಲೆಡೆ ಉನ್ನತ ಹುದ್ದೆಗಳನ್ನು ಅಲಂಕರಿಸಿ ಸಾಧನೆ ಮಾಡುತ್ತಿದ್ದಾರೆ. ಶ್ರೀಗಳ ಶಿಕ್ಷಣ ಕ್ಷೇತ್ರದಲ್ಲಿ ಹಾಕಿರುವ ಭದ್ರ ಅಡಿಪಾಯವನ್ನೇ ಆಧರಿಸಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೇಶಕ್ಕೆ ಮಾದರಿಯೆಂಬಂತೆ ರಾಜ್ಯದಲ್ಲಿ ಅನುಷ್ಟಾನಗೊಳಿಸಲಾಗುವುದು. ಶ್ರೀಗಳ ಹುಟ್ಟೂರು ರಾಮನಗರ ಜಿಲ್ಲೆಯ ವೀರಾಪುರ ಗ್ರಾಮದಲ್ಲಿ ಪುತ್ಥಳಿ ಸ್ಥಾಪನೆ, ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಸಿಎಂ ನೇತೃತ್ವದಲ್ಲಿ ಶ್ರಮಿಸಲಾಗುವುದು ಎಂದರು
ದಾಸೋಹ ದಿನ ಘೋಷಣೆಗೆ ಪ್ರಜಾಪ್ರಗತಿ ಧ್ವನಿ!
ಸಿದ್ಧಗಂಗಾ ಶ್ರೀಗಳು ಪುಣ್ಯಸ್ಮರಣೆ ದಿನವಾದ ಜ.21ಅನ್ನು ದಾಸೋಹ ದಿನವಾಗಿ ಆಚರಿಸಬೇಕೆಂಬ ಕೂಗಿಗೆ ಪ್ರಜಾಪ್ರಗತಿ ಪತ್ರಿಕೆಯೂ ಧ್ವನಿಯಾಗಿ ಜ.20ರಂದೇ ಸಿಎಂ ಘೋಷಣೆ ಬಗ್ಗೆ ಭಕ್ತರಲ್ಲಿ ನಿರೀಕ್ಷೆ ಎಂಬುದರ ಕುರಿತು ವರದಿ ಪ್ರಕಟಿಸಿತ್ತು. ಪತ್ರಿಕೆಯ ವರದಿಯನ್ನೇ ಆಧರಿಸಿ ಜಾಲತಾಣದಲ್ಲಿ ಸಾವಿರಾರು ಮಂದಿ ಮುಖ್ಯಮಂತ್ರಿಗಳನ್ನು ದಾಸೋಹ ದಿನ ಘೋಷಣೆ ಮಾಡಿ ಎಂಬ ಒತ್ತಾಯ ಹಾಕಿದ್ದರು. ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಸಹ ಕಾರ್ಯಕ್ರಮಕ್ಕೂ ಮುನ್ನಾ ದಿನ ಈ ಕುರಿತು ಮುಖ್ಯಮಂತ್ರಿಗಳೊಡನೆ ಸಮಾಲೋಚಿಸುವೆ. ಸಿಎಂ ತೀರ್ಮಾನ ಕೈಗೊಳ್ಳುತ್ತಾರೆಂದು ಪತ್ರಿಕೆಗೆ ಪ್ರತಿಕ್ರಿಯಿಸಿದ್ದರು. ಭಕ್ತರ ಅಭಿಲಾಷೆ, ಪತ್ರಿಕೆಯ ಧ್ವನಿಯಂತೆ ಮುಖ್ಯಮಂತ್ರಿಗಳು ದಾಸೋಹ ದಿನ ಘೋಷಣೆ ಮಾಡುವುದಾಗಿ ಪುಣ್ಯಸ್ಮರಣೆ ವೇದಿಕೆಯಲ್ಲಿ ಪ್ರಕಟಿಸಿದ್ದು, ಭಕ್ತರ ವಲಯದಲ್ಲಿ ವ್ಯಾಪಕ ಹರ್ಷಕ್ಕೆ ಎಡೆಮಾಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
