ಸೋಂಕು ನಿಯಂತ್ರಣ : ವಾರಿಯರ್ಸ್‍ಗಳಿಗೆ ಧನ್ಯವಾದ ಅರ್ಪಣೆ

 ತುರುವೇಕೆರೆ:

      ತಾಲೂಕಿನ ಗುಡ್ಡೇನಹಳ್ಳಿ ಮುರಾರ್ಜಿ ವಸತಿ ಶಾಲೆಯ ಕೋವಿಡ್ ಸೆಂಟರ್‍ಗೆ ಜೂ.06 ರಂದು ಶಾಸಕ ಮಸಾಲ ಜಯರಾಮ್ ಭೇಟಿ ನೀಡಿ ಕೊರೋನಾ ಸೋಂಕಿತರ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು.

      ಶಾಸಕ ಮಸಾಲಜಯರಾಮ್ ಮಾತನಾಡಿ ಕೊರೋನಾ ಎರಡನೇ ಅಲೆ ನಿಯಂತ್ರಣದಲ್ಲಿ ತಾಲೂಕು ಶೇ.2.98 ರಷ್ಟಿದ್ದು, ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಕೊರೋನಾ ನಿಯಂತ್ರಣದಿಂದ ಸಾವಿನ ಸಂಖ್ಯೆ ಕಡಿಮೆ ಇದೆ. ಕೊರೋನಾ ನಿಯಂತ್ರಣಕ್ಕೆ ಶ್ರಮಿಸಿದ ವೈದ್ಯರು, ಅಧಿಕಾರಿಗಳು ಸೇರಿದಂತೆ ತಾಲ್ಲೂಕಿನ ಎಲ್ಲಾ ಕೊರೋನಾ ವಾರಿಯರ್ಸ್‍ಗಳಿಗೂ ಧನ್ಯವಾದಗಳನ್ನು ತಿಳಿಸುತ್ತಿದ್ದು, ತಾಲ್ಲೂಕಿನ ಶಾಸಕನಾಗಿ ಯಾವುದೇ ಸಂದರ್ಭದಲ್ಲೂ ಸದಾ ಅವರ ಜೊತೆಯಲ್ಲಿದ್ದು ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

     ಕೋವಿಡ್ ಎರಡನೇ ಅಲೆ ತಡೆದಂತೆ ಮೂರನೇ ಅಲೆಯನ್ನು ಸಹ ಎದುರಿಸಲು ಸಜ್ಜಾಗಿದ್ದು ಮೂರನೇ ಅಲೆ ತಡೆಯವಲ್ಲಿ ಮುನ್ನಚ್ಚರಿಕಾ ಕ್ರಮವನ್ನು ಕೈಗೊಳ್ಳಬೇಕಿದೆ. ಸರ್ಕಾರದ ಮಾಹಿತಿ ಪ್ರಕಾರ, ಮಕ್ಕಳಿಗೆ ಹೆಚ್ಚು ಸೋಂಕು ಹರಡುವುದು ಎಂಬ ತಜ್ಞರ ಸಲಹೆಯಂತೆ ಈಗಾಗಲೇ 150 ಕ್ಕೂ ಹೆಚ್ಚು ಆಮ್ಲಜನಕ ಬೆಡ್ ರೆಡಿ ಮಾಡಿಕೊಳ್ಳಲಾಗುತ್ತಿದೆ.

      ಈ ಕುರಿತು ಆರೋಗ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಜೊತೆ ಮಾತನಾಡಿದ್ದು, ತಾಲೂಕಿಗೆ ಇಬ್ಬರು ಮಕ್ಕಳ ತಜ್ಞರನ್ನು ನೀಡಬೇಕು ಎಂದು ಮನವಿ ಮಾಡಲಾಗಿದೆ. ಸದ್ಯ ತಾಲೂಕಿನಲ್ಲಿ ಕೊರೋನಾವು 40 ಪ್ರಕರಣಗಳಿಗೆ ಇಳಿಮುಖವಾಗಿದ್ದು, ಕೊರೋನಾ ಸೋಂಕಿತರು ಪಾಸಿಟಿವ್ ಬಂದ ತಕ್ಷಣ ಕೋವಿಡ್ ಕೇಂದ್ರಗಳಲ್ಲಿ ಬಂದು ಚಿಕಿತ್ಸೆ ಪಡೆಯಬೇಕು. ಯಾರೂ ಸಹ ಮನೆಯಲ್ಲಿ ಉಳಿದು ಚಿಕಿತ್ಸೆ ಪಡೆಯಬೇಡಿ ಎಂದು ಮನವಿ ಮಾಡಿದರು. ಜೀವ ಇದ್ದರೆ ಜೀವನ ಇದು ನಮ್ಮ ಸರ್ಕಾರದ ಧ್ಯೇಯವಾಗಿದೆ. ಎಲ್ಲರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಸೋಂಕಿತರಿಗೆ ಉಚಿತ ಚಿಕಿತ್ಸೆ, ಊಟ ನೀಡಲಾಗುತ್ತಿದೆ ಎಂದರು.

      ಈ ಸಂದರ್ಭದಲ್ಲಿ ತಹಶೀಲ್ದಾರ್ ನಯಿಂಉನ್ನಿಸಾ, ವೈದ್ಯಾಧಿಕಾರಿ ಡಾ.ವಿಂದ್ಯಾ, ಪಿಎಸ್‍ಐ ಪ್ರೀತಂ, ಕಂದಾಯಾಧಿಕಾರಿ ಶಿವಕುಮಾರ್, ರಂಗನಾಥ್, ಮುಖಂಡರಾದ ಸೋಮಶೇಖರ್, ಹಾವಳ ರವಿ, ಸಾಗರ್ ಹಾಗೂ ಶುಶ್ರೂಷಕಿಯರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link