ಕೇರಳ ಮಾಜಿ ಸಿಎಂ ಉಮ್ಮನ್‌ ಚಾಂಡಿ ನಿಧನ…!

ಬೆಂಗಳೂರು: 

    ದೇವರ ಸ್ವಂತ ನಾಡು ಎಂದೇ ಕರೆಯಲಾಗುವ  ಕೇರಳದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಉಮ್ಮನ್ ಚಾಂಡಿ  ಮುಂಜಾನೆ 4.25ಕ್ಕೆ ಬೆಂಗಳೂರಿನ ಚಿನ್ಮಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು, ಅವರು ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು.

    ಉಮ್ಮನ್ ಚಾಂಡಿ ಅವರು ಕಳೆದ 50 ವರ್ಷಗಳಿಗೂ ಹೆಚ್ಚು ಕಾಲ ಕೊಟ್ಟಾಯಂ ಜಿಲ್ಲೆಯ ಪುತ್ತುಪಲ್ಲಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಅವರು ಸದ್ಯ ಪುತ್ತುಪಲ್ಲಿ ಶಾಸಕರಾಗಿದ್ದರು.

 

    ಚಾಂಡಿ ಅವರು 1970 ರಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ ಪುತ್ತುಪಲ್ಲಿಯನ್ನು ಮೊದಲ ಬಾರಿಗೆ ಪ್ರತಿನಿಧಿಸಿದ್ದರು. ಅವರು 1977 ರಲ್ಲಿ ಕೆ ಕರುಣಾಕರನ್ ಸಂಪುಟದಲ್ಲಿ ಮೊದಲ ಬಾರಿಗೆ ಸಚಿವರಾಗಿದ್ದರು. ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದರು. ಅಲ್ಲದೆ, ರಾಜ್ಯದಲ್ಲಿ ಹಣಕಾಸು ಖಾತೆಯನ್ನು ನಿಭಾಯಿಸಿದ್ದರು ಮತ್ತು ವಿರೋಧ ಪಕ್ಷದ ನಾಯಕರೂ ಆಗಿದ್ದರು.ಚಾಂಡಿ ಜನರೊಂದಿಗೆ ಉತ್ತಮ ಸಂಪರ್ಕ ಸಾಧಿಸುತ್ತಿದ್ದರು. ಅವರು ಮುಖ್ಯಮಂತ್ರಿಯಾಗಿದ್ದಾಗ ಜನರ ಅಹವಾಲು ಆಲಿಸಲು ಆರಂಭಿಸಿದ ‘ಜನಸಂಪರ್ಕ ಪರಿಪಡಿ’ ಜನಪ್ರಿಯವಾಗಿತ್ತು. 

     ಚಾಂಡಿ ಅವರ ನಿಧನಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. ಕೇರಳದ ಮಾಜಿ ಮುಖ್ಯಮಂತ್ರಿ ನಿಧನಕ್ಕೆ ಕೇರಳ ಕಾಂಗ್ರೆಸ್ ಅಧ್ಯಕ್ಷ ಕೆ ಸುಧಾಕರನ್ ಸಂತಾಪ ಸೂಚಿಸಿದ್ದಾರೆ.

    ‘ಪ್ರೀತಿಯಿಂದ ಜಗತ್ತನ್ನು ಗೆದ್ದ ರಾಜನ ಕಥೆಯು ಇದೀಗ ಅಂತ್ಯ ಕಂಡಿದೆ. ಇಂದು, ನಾವು ದಂತಕಥೆಯಾದ ಉಮ್ಮನ್ ಚಾಂಡಿ ಅವರನ್ನು ಕಳೆದುಕೊಂಡಿದ್ದೇವೆ. ಇದರಿಂದ ನನಗೆ ತುಂಬಾ ದುಃಖವಾಗಿದೆ. ಅವರು ಅಸಂಖ್ಯಾತ ವ್ಯಕ್ತಿಗಳ ಜೀವನವನ್ನು ಮತ್ತು ಅವರ ಪರಂಪರೆಯನ್ನು ಬೆಳಗಿಸಿದ್ದರು. ನಮ್ಮ ಆತ್ಮಗಳಲ್ಲಿ ಎಂದೆಂದಿಗೂ ಅವರು ಪ್ರತಿಧ್ವನಿಸುತ್ತಾರೆ’ ಎಂದು ಸುಧಾಕರನ್ ಟ್ವೀಟ್ ಮಾಡಿದ್ದಾರೆ.

     ಉಮ್ಮನ್ ಚಾಂಡಿ ಅವರು ಪತ್ನಿ ಮರಿಯಮ್ಮ ಮತ್ತು ಮಕ್ಕಳಾದ ಮರಿಯಾ ಉಮ್ಮನ್, ಚಾಂಡಿ ಉಮ್ಮನ್ ಮತ್ತು ಅಚ್ಚು ಉಮ್ಮನ್ ಅವರನ್ನು ಅಗಲಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap