ಬೆಂಗಳೂರು:
ಬೆಂಗಳೂರಲ್ಲಿ ಘೋರ ಘಟನೆಯೊಂದು ನಡೆದಿದೆ. ವಂದೇ ಭಾರತ್ ರೈಲಿಗೆ ಸಿಲುಕಿ ಖಾಸಗಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ನಗರ ಹೊರವಲಯದ ಚಿಕ್ಕಬಾಣಾವರ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ನಡೆದಿದೆ. ಕೇರಳ ಮೂಲದ ಸ್ಟೇರ್ಲಿನ್ ಎಲ್ಲಾ ಶಾಜಿ (19) ಹಾಗೂ ಜಸ್ಟಿನ್ ಜೋಸೆಫ್ (20) ಮೃತ ದುರ್ದೈವಿಗಳು.
ಈ ಇಬ್ಬರು ರೈಲ್ವೆ ನಿಲ್ದಾಣಕ್ಕೆ ಮಧ್ಯಾಹ್ನ 2.30 ರ ವೇಳೆಗೆ ಬಂದಿದ್ದರು. ಅದೇ ವೇಳೆ ಬೆಂಗಳೂರಿನಿಂದ ಬೆಳಗಾವಿಗೆ ತೆರಳುತ್ತಿದ್ದ ವಂದೇ ಭಾರತ್ ರೈಲಿಗೆ ಸಿಲುಕಿ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹೆಸರಘಟ್ಟ ರಸ್ತೆಯ ಸಪ್ತಗಿರಿ ನರ್ಸಿಂಗ್ ಕಾಲೇಜಿನಲ್ಲಿ ಮೊದಲ ವರ್ಷದ ಬಿಎಸ್ಸಿ ವಿಭಾಗದಲ್ಲಿ ಇಬ್ಬರು ವ್ಯಾಸಂಗ ಮಾಡುತ್ತಿದ್ದು, ಕಾಲೇಜು ಸಮೀಪದಲ್ಲೇ ಇಬ್ಬರು ವಾಸವಾಗಿದ್ದರು. ಈ ಘಟನೆಗೆ ನಿಖರವಾದ ಕಾರಣ ಗೊತ್ತಾಗಿಲ್ಲ. ರೈಲಿಗೆ ಆಕಸ್ಮಿಕವಾಗಿ ಸಿಲುಕಿ ಮೃತಪಟ್ಟಿದ್ದಾರೆಯೇ ಅಥವಾ ಆತ್ಮಹತ್ಯೆಯೇ ಎಂಬುದರ ಬಗ್ಗೆ ತನಿಖೆ ನಡೆದಿದೆ. ರೈಲ್ವೆ ನಿಲ್ದಾಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








