ತಮಿಳುನಾಡು :
ದಕ್ಷಿಣದ ಸೂಪರ್ಸ್ಟಾರ್ ದಳಪತಿ ವಿಜಯ್ ಅವರು ಸದ್ಯ ಸಿನಿಮಾ ಹಾಗೂ ರಾಜಕೀಯ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಶೀಘ್ರವೇ ಅವರು ಸಿನಿಮಾ ರಂಗ ತೊರೆದು ರಾಜಕೀಯದಲ್ಲಿ ಬ್ಯುಸಿ ಆಗಲಿದ್ದಾರೆ. ಶುಕ್ರವಾರ (ಮಾರ್ಚ್ 7) ವಿಜಯ್ ಅವರು ಚೆನ್ನೈನಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ಭಾಗಿ ಆಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅಭಿಮಾನಿಗಳು ವಿಜಯ್ ಅವರನ್ನು ಹೊಗಳಿದರೆ, ವಿರೋಧಿಗಳು ಅವರ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ.
ದಳಪತಿ ವಿಜಯ್ ಅವರು 2026ರ ತಮಿಳುನಾಡು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ. ಇದಕ್ಕಾಗಿ ‘ತಮಿಳಗ ವೆಟ್ರಿ ಕಳಗಮ್’ (TVK) ಪಕ್ಷ ಸ್ಥಾಪನೆ ಮಾಡಿದ್ದಾರೆ. ವಿಜಯ್ ಅವರು ತಲೆಗೆ ಟೋಪಿ ಹಾಕಿ ಇಫ್ತಾರಿ ಕೂಟದಲ್ಲಿ ಭಾಗಿ ಆಗಿದ್ದಾರೆ. ಅವರು ಮುಸ್ಲಿಂ ಸಂಪ್ರದಾಯದಂತೆ ನಡೆದುಕೊಂಡಿದ್ದಾರೆ. ಅವರ ಅಭಿಮಾನಿಗಳು ಇದನ್ನು ಹೊಗಳಿದ್ದಾರೆ. ಎಲ್ಲಾ ಧರ್ಮವನ್ನು ವಿಜಯ್ ಗೌರವಿಸುತ್ತಿದ್ದಾರೆ ಎಂದು ಸಂತಸ ಹೊರಹಾಕಿದ್ದಾರೆ.
ಆದರೆ, ಅವರ ವಿರೋಧಿಗಳು ‘ವೋಟ್ ಬ್ಯಾಂಕ್ ರಾಜಕೀಯ’ ಎಂದು ಟೀಕಿಸಿದ್ದಾರೆ.ವರದಿಗಳ ಪ್ರಕಾರ ವಿಜಯ್ ಅವರು ಮುಂಜಾನೆಯಿಂದ ಉಪವಾಸ ಮಾಡಿದ್ದರು ಎನ್ನಲಾಗಿದೆ. ನಂತರ ರಾತ್ರಿ ವೇಳೆ ಅವರು ಊಟ ಸೇವನೆ ಮಾಡಿದ್ದಾರೆ. ವಿಜಯ್ ಜೊತೆ ಹಲವು ಸ್ಥಳೀಯ ಮುಸ್ಲಿಂ ನಾಯಕರು ಭಾಗಿ ಆಗಿದ್ದಾರೆ. ವಿಜಯ್ ಅವರು ಭಾಗಿ ಆದ ಇಫ್ತಾರ್ ಕೂಟದಲ್ಲಿ 3 ಸಾವಿರಕ್ಕೂ ಅಧಿಕ ಜನರು ಸೇರಿದ್ದರು. ವಿಜಯ್ ಅವರು 2026ರ ತಮಿಳುನಾಡು ಚುನಾವಣೆಯಲ್ಲಿ ಭಾಗಿ ಆಗುವ ಉದ್ದೇಶ ಹೊಂದಿದ್ದಾರೆ. ಅವರು ಯಾವುದೇ ಪಕ್ಷದ ಜೊತೆ ಒಪ್ಪಂದ ಮಾಡಿಕೊಳ್ಳದೆ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ.
ಸಿನಿಮಾ ವಿಚಾರಕ್ಕೆ ಬರೋದಾದರೆ ವಿಜಯ್ ಅವರು ‘ಜನ ನಾಯಗನ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಕನ್ನಡದ ‘ಕೆವಿಎನ್ ಪ್ರೊಡಕ್ಷನ್ಸ್’ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಈ ಚಿತ್ರಕ್ಕಾಗಿ ವಿಜಯ್ ಅವರು 250 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
