ಹೇಮಾವತಿ ಹೋರಾಟ : ಡಿಸಿಎಂ ಅವರಿಗೆ ಎಚ್ಚರಿಕೆ ನೀಡಿದ ಬಿ.ವೈ.ವಿಜಯೇಂದ್ರ.

ಗುಬ್ಬಿ:

    ತುಮಕೂರು ಜಿಲ್ಲೆಯ ರೈತರ ಜೀವನಾಡಿ ಹೇಮಾವತಿ ನೀರು ಉಳಿವಿಗೆ ಹೋರಾಟ ಮಾಡು ತ್ತಿರುವ ರೈತರ ಆಕ್ರೋಶವನ್ನು ಪ್ರತಿಷ್ಠೆಯಾಗಿ ಪರಿಗಣಿಸದೆ ರೈತರೊಟ್ಟಿಗೆ ಹಾಗೂ ಸರ್ವ ಪಕ್ಷಗಳ ಸಭೆ ಮೂಲಕ ರೈತರಿಗೆ ನ್ಯಾಯ ಒದಗಿಸಬೇಕು. ಹಗುರವಾಗಿ ತಿಳಿದುಕೊಂಡಲ್ಲಿ ಸರ್ಕಾರ ಪತನಗೊಳ್ಳುವುದು ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಕೆ ನೀಡಿದರು.

  ತಾಲ್ಲೂಕಿನ ಕಡಬ ಹೋಬಳಿ ಸಂಕಾಪುರ ಗ್ರಾಮದ ಬಳಿ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು ಸಾವಿರಾರು ರೈತರು ಕಾಮಗಾರಿಯ ಸ್ಥಳಕ್ಕೆ ಮುತ್ತಿಗೆ ಹಾಕಿ ಐತಿಹಾಸಿಕ ಹೋರಾಟ ನಡೆಸಿದ್ದಾರೆ. ರೈತರ ಬದುಕಿನ ಹಕ್ಕು ಪ್ರತಿಪಾದಿಸುವುದು ನಡೆದಿದೆ. ಇಲ್ಲಿ ಯಾವ ರಾಜಕಾರಣ ನಡೆದಿಲ್ಲ. ರೈತರನ್ನು ಬೆದರಿಸಿ ಎಫ್ಐಆರ್ ಮಾಡುತ್ತಾ ಬೆದರಿಸಿದ್ದಾರೆ. ಈ ನಡುವೆ ಡಿಸಿಎಂ ಶಿವಕುಮಾರ್ ಅವರು ಕಾಮಗಾರಿ ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ. ರೈತರನ್ನು ಕೆಣಕಿ ದರ್ಪ ತೋರುವುದು ಸರಿ ಇಲ್ಲ. ರೈತರ ಸಹನೆ ಕಟ್ಟೆ ಒಡೆಯುವ ಮುನ್ನ ಎಚ್ಚೆತ್ತುಕೊಳ್ಳಿ ಎಂದು ತಿಳಿಸಿದರು.

  ಪಾಳೆಗಾರಿಕೆ ನಡೆಸದೆ ರೈತರ ಬಗ್ಗೆ ಗೌರವ ಇಟ್ಟುಕೊಳ್ಳಿ. ಮುಖ್ಯಮಂತ್ರಿಗಳು ಈ ಹೇಮಾವತಿ ವಿಚಾರದಲ್ಲಿ ಮೌನ ವಹಿಸದೆ ರೈತರಿಗೆ ನ್ಯಾಯ ಒದಗಿಸಿ. ಕೂಡಲೇ ಸರ್ವಪಕ್ಷಗಳ ಸಭೆ ನಡೆಸಿ. ಯಾವುದೂ ಒಂದು ತಾಲ್ಲೂಕಿಗೆ ಎಂದು ಹೇಳಿ ಜಿಲ್ಲೆಯ ಎಲ್ಲಾ ತಾಲ್ಲೂಕಿಗೆ ಅನ್ಯಾಯ ಮಾಡಬೇಡಿ. 

   ಅಧಿಕಾರಿಗಳ ಅಮಲಿನಲ್ಲಿ ಮಠಾಧೀಶರನ್ನು, ರೈತ ಹೋರಾಟಗಾರರ ವಿರುದ್ಧ ಕೇಸ್ ದಾಖಲಿಸುವ ಅಧಿಕಾರ ದುರ್ಬಳಕೆ ಮಾಡಿದ ಸರ್ಕಾರಕ್ಕೆ ರೈತರೇ ಉತ್ತರ ನೀಡುತ್ತಾರೆ. ತಾಳ್ಮೆ ಕಳೆದುಕೊಂಡಲ್ಲಿ ಸರ್ಕಾರ ಉರುಳುತ್ತದೆ ಎಂದ ಅವರು ಗೃಹಮಂತ್ರಿಗಳು ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಕಾರಣ ಕೂಡಲೇ ಸರ್ವಪಕ್ಷಗಳ ಸಭೆ ಸೇರಿಸಿ ರೈತ ಮುಖಂಡರೊಟ್ಟಿಗೆ ಚರ್ಚಿಸಿ ರೈತಪರ ತೀರ್ಮಾನ ಕೈಗೊಳ್ಳಿ. ಇಲ್ಲವಾದಲ್ಲಿ ಮುಂದಿನ ಉಗ್ರ ಹೋರಾಟಕ್ಕೆ ರೈತರು ಸಜ್ಜಾಗುತ್ತಾರೆ. ಅವರ ಶಕ್ತಿ ಪರೀಕ್ಷಿಸಿ ಅವನತಿ ಹೊಂದಬೇಡಿ ಎಂದು ಎಚ್ಚರಿಸಿದರು.

  ವಿಧಾನ ಪರಿಷತ್ ಸಭಾ ಸದಸ್ಯ ಸಿ.ಟಿ.ರವಿ ಮಾತನಾಡಿ ರೈತರ ವಿರೋಧದ ಮಧ್ಯೆ ಮತ್ತೇ ಕಾಮಗಾರಿ ಆರಂಭಿಸಿದರೆ ನೀರು ಬೆಂಕಿ ಆಗುವುದು ಖಂಡಿತ. ರೊಚ್ಚಿಗೆದ್ದ ರೈತರ ಪ್ರವಾಹ ತಡೆಯೋದು ಕಷ್ಟ. ನೀವು ಕೊತ್ವಾಲ್ ಇರಬಹುದು. ಆದರೆ ತುಮಕೂರು ಜಿಲ್ಲೆಯ ರೈತರು ಈ ಕೊತ್ವಾಲ್ ಗೆ ಹೆದರೋದಿಲ್ಲ. ಕಾಮಗಾರಿ ಸ್ಥಗಿತಗೊಳಿಸಿ ಎಲ್ಲಾ ಹೋರಾಟಗಾರ ಮೇಲಿನ ಕೇಸ್ ವಾಪಸ್ ಪಡೆಯಬೇಕು. ಬಂಧಿಸಿರುವ ಮುಖಂಡರನ್ನು ಬಿಡುಗಡೆ ಮಾಡಿ ಸರ್ವಪಕ್ಷದ ಸಭೆ ಆಯೋಜಿಸಿ ಈ ಕಾಮಗಾರಿಯ ಸ್ಪಷ್ಟ ಉದ್ದೇಶವನ್ನು ರೈತರಿಗೆ ತಿಳಿಸಬೇಕು. ಇಲ್ಲವಾದಲ್ಲಿ ರೈತರು ಮುಂದುವರೆದು ನಡೆಸುವ ಹೋರಾಟ, ಅನಾಹುತಕ್ಕೆ ಸರ್ಕಾರವೇ ನೇರ ಹೊಣೆ ಹೊರಬೇಕು ಎಂದು ತಿಳಿಸಿದರು.

   ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ ವೈಜ್ಞಾನಿಕ ಲಿಂಕ್ ಕೆನಾಲ್ ಕಾಮಗಾರಿ ಎಂಬುದು ಈ ಸ್ಥಳ ಪರಿಶೀಲನೆಯಲ್ಲೇ ತಿಳಿಯುತ್ತದೆ. ಜಿಲ್ಲೆಯ ಶಾಸಕರ ಸಭೆ ನಡೆಸಿ ಚರ್ಚೆ ಮಾಡಬೇಕಿದೆ. ಸಮಾಲೋಚನೆ ಮಾಡಿ ಒಂದು ತೀರ್ಮಾನ ಮಾಡಬೇಕಿದೆ. ಪ್ರಶ್ನೆ ಮಾಡಿದ ರೈತರನ್ನು ಬೆದರಿಸುವ ಧೋರಣೆ ಮಾಡಿರುವ ಸರ್ಕಾರ ಕಾನೂನು ಬಾಹಿರವಾಗಿ ಕೆಲಸ ನಡೆಸಿದೆ ಎಂಬ ಅಂಶ ನಿಜ ಎನಿಸಿದೆ. ಈ ಎಲ್ಲಾ ಧೋರಣೆ ಬಿಟ್ಟು ರೈತರಿಗೆ ನ್ಯಾಯ ಕೊಡಿ. ಇಲ್ಲವಾದಲ್ಲಿ ರೈತರೇ ಕಾನೂನು ಕೈಗೆತ್ತಿಕೊಂಡು ಹೋರಾಟ ನಡೆಸುತ್ತಾರೆ ಎಂದರು.

   ಈ ಸಂದರ್ಭದಲ್ಲಿ ಶಾಸಕರಾದ ಬಿ.ಸುರೇಶಗೌಡ, ಜಿ.ಬಿ.ಜ್ಯೋತಿ ಗಣೇಶ್, ಧೀರಜ್ ಮುನಿರಾಜು, ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ, ಮುಖಂಡರಾದ ಎಸ್.ಡಿ.ದಿಲೀಪ್ ಕುಮಾರ್. ಬಿ.ಎಸ್.ನಾಗರಾಜ್, ಜಿ.ಎನ್.ಬೆಟ್ಟಸ್ವಾಮಿ, ಪಿ.ಬಿ.ಚಂದ್ರಶೇಖರ ಬಾಬು, ಬ್ಯಾಟರಂಗೇಗೌಡ, ಎನ್.ಸಿ.ಪ್ರಕಾಶ್, ಎಚ್.ಟಿ.ಭೈರಪ್ಪ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಲರಾಮಯ್ಯ, ಬಿ.ಎಸ್.ಪಂಚಾಕ್ಷರಿ ಇತರರು ಇದ್ದರು.

Recent Articles

spot_img

Related Stories

Share via
Copy link