ಬೆಂಗಳೂರು
ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಕೆಲವು ಕಿಡಗೇಡಿಗಳು ಚೆಲ್ಲಾಟವಾಡಲು ಮುಂದಾಗಿದ್ದಾರೆ. ಎಸ್ಎಸ್ಎಲ್ಸಿ ಪರೀಕ್ಷೆ ಸಮಯದಲ್ಲಿ ಮಕ್ಕಳ ಜೊತೆ ಸಾಮಾಜಿಕ ಜಾಲತಾಣದಲ್ಲಿ ಚೆಲ್ಲಾಟವಾಡುತ್ತಿದ್ದು, ಶಿಕ್ಷಣ ಇಲಾಖೆ ಮಾತ್ರ ಕಣ್ಣುಮುಚ್ಚಿ ಕುಳಿತಿದೆ. ಪರೀಕ್ಷೆ ಸಮಯದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಮಕ್ಕಳ ದಿಕ್ಕು ತಪ್ಪಿಸಲು ಕಿಡಗೇಡಿಗಳು ಮುಂದಾಗಿದ್ದಾರೆ. ಪ್ರತಿ ದಿನ ಸಾಮಾಜಿಕ ಜಾಲತಾಣಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯ ನಕಲಿ ಪ್ರಶ್ನೆಪತ್ರಿಕೆಗಳನ್ನು ವೈರಲ್ ಮಾಡುತ್ತಿದ್ದಾರೆ.
ಕಿಡಿಗೇಡಿಗಳು ಹಳೆಯ ಪ್ರಶ್ನೆ ಪತ್ರಿಕೆ ಎಡಿಟ್ ಮಾಡಿ, ‘‘ಇದು ಈ ವರ್ಷದ ಪ್ರಶ್ನೆ ಪತ್ರಿಕೆ, ದುಡ್ಡು ಕೊಟ್ಟರೆ ಪ್ರಶ್ನೆ ಪತ್ರಿಕೆ ಸಿಗುತ್ತದೆ’’ ಎಂದು ವೈರಲ್ ಮಾಡುತ್ತಿದ್ದಾರೆ. ಇದರಿಂದ ಮೋಸ ಹೋಗುತ್ತಿರುವ ವಿದ್ಯಾರ್ಥಿಗಳು, ಫೇಕ್ ಪ್ರಶ್ನೆಪತ್ರಿಕೆಗಳನ್ನು ನಂಬಿ ಓದಿಕೊಂಡು ಹೋಗಿ ಮೋಸ ಹೋಗುತ್ತಿದ್ದಾರೆ ಎಂದು ಪೋಷಕರ ಸಮನ್ವಯ ಸಮಿತಿ ಅಧ್ಯಕ್ಷ ಯೋಗಾನಂದ್ ಹೇಳಿದ್ದಾರೆ.
ಸುಳ್ಳು ಪ್ರಶ್ನೆ ಪತ್ರಿಕೆಗಳನ್ನು ವೈರಲ್ ಮಾಡುವ ವಿಚಾರವನ್ನು ಖಾಸಗಿ ಶಾಲೆಗಳ ಒಕ್ಕೂಟ ಈಗಾಗಲೇ ಶಿಕ್ಷಣ ಇಲಾಖೆಯ ಗಮನಕ್ಕೆ ತಂದಿದೆ. ಆದರೂ ಕ್ರಮ ಕೈಗೊಂಡಿಲ್ಲ. ಹೀಗಾಗಿ ಶಾಲೆಗಳು ಹಾಗೂ ಪೋಷಕರು ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದು, ಸಾಮಾಜಿಕ ಜಾಲತಣದಲ್ಲಿನ ಕಿಡಗೇಡಿಗಳನ್ನು ಮಟ್ಟಹಾಕುವಂತೆ ಒತ್ತಾಯ ಮಾಡಿದ್ದಾರೆ. ಸುಳ್ಳು ಪ್ರಶ್ನೆ ಪತ್ರಿಕೆಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಮೋಸ ಮಾಡಿ ಮಕ್ಕಳ ಭವಿಷ್ಯದ ಜೊತೆ ಚೆಲ್ಲಟವಾಡುತ್ತಿರುವ ಕಿಡಗೇಡಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪತ್ರ ಬರೆದು ಮನವಿ ಮಾಡಲಾಗಿದೆ ಎಂದು ಖಾಸಗಿ ಶಾಲೆಗಳ ಒಕ್ಕೂಟದ ಕಾರ್ಯದರ್ಶಿ ಶಶಿಕಮಾರ್ ತಿಳಿಸಿದ್ದಾರೆ.
